ಚಿತ್ರದುರ್ಗ: ಅಸಂಘಟಿತ ಕಾರ್ಮಿಕರು ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಹೀಗಾಗಿ ತಮ್ಮ ಹಕ್ಕುಗಳ ಕುರಿತು ಕಾನೂನು ಅರಿವು ಮೂಡಿಸಿಕೊಳ್ಳಿ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶೆ ಕೆ.ಬಿ.ಗೀತಾ ಸಲಹೆ ನೀಡಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ, ಕಾರ್ಮಿಕ ಇಲಾಖೆಯಿಂದ ಅರವಿಂದ ಗಾರ್ಮೆಂಟ್ಸ್ನಲ್ಲಿ ಕಾರ್ಮಿಕ ದಿನಾಚರಣೆ ಅಂಗವಾಗಿ ಗುರುವಾರ ನಡೆದ ಕಾನೂನು ಅರಿವು-ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ನಿರ್ದಿಷ್ಟ ಸಮಯವಿಲ್ಲದ, ವಿಶ್ರಾಂತಿ ಇಲ್ಲದ, ಹಗಲಿರುಳು ದುಡಿಯುವ ಕಾರ್ಮಿಕರು ವಂಚನೆಗೆ ಒಳಗಾಗಿದ್ದರು. ಹೀಗೆ ಅನೇಕ ರೀತಿಯ ತೊಂದರೆ ಎದುರಿಸುತ್ತಿದ್ದ ಕಾರ್ಮಿಕರ ಹಿತಕ್ಕಾಗಿ ಕಾನೂನು ರೂಪಿಸಲಾಯಿತು. ಈ ಕುರಿತು ಜಾಗೃತಿ ಮೂಡಿಸುವುದೇ ದಿನಾಚರಣೆ ಉದ್ದೇಶ ಎಂದರು.
ಹಿರಿಯ ಸಿವಿಲ್ ನ್ಯಾಯಾಧೀಶ ಎಂ.ವಿಜಯ್, ಕಾರ್ಮಿಕ ನಿರೀಕ್ಷಕ ಡಿ.ರಾಜಣ್ಣ, ಕಾರ್ಮಿಕಾಧಿಕಾರಿ ಬಿ.ಜಿ.ಚಂದ್ರಶೇಖರಯ್ಯ, ವಕೀಲರ ಸಂಘದ ಉಪಾಧ್ಯಕ್ಷ ಬಿ.ಎಂ.ಅನಿಲ್ಕುಮಾರ್, ಪ್ರಧಾನ ಕಾರ್ಯದರ್ಶಿ ಆರ್.ಗಂಗಾಧರ್, ಗಾರ್ಮೆಂಟ್ಸ್ನ ಮುಖ್ಯ ವ್ಯವಸ್ಥಾಪಕ ಆರ್.ಮುತ್ತುಕುಮಾರ್ ಇತರರಿದ್ದರು.