ನವದೆಹಲಿ: ಎಲ್ಲೆಡೆ ಕರೊನಾ ರಣಕೇಕೇ ಹಾಕುತ್ತಿರುವ ಈ ಸಂದರ್ಭದಲ್ಲಿ ಉತ್ತರಪ್ರದೇಶದ ಹತ್ರಾಸ್ಗೆ ಗುಂಪುಕಟ್ಟಿಕೊಂಡು ಮೆರವಣಿಗೆ ಮಾಡಿರುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಸೇರಿದಂತೆ 203 ಕಾಂಗ್ರೆಸ್ ಮುಖಂಡರ ವಿರುದ್ಧ ಎಫ್ಐಆರ್ ದಾಖಲು ಮಾಡಲಾಗಿದೆ.
ಕರೊನಾ ವೈರಸ್ ಕ್ಷಣಕ್ಷಣಕ್ಕೂ ಏರುತ್ತಿರುವ ಹಿನ್ನೆಲೆಯಲ್ಲಿ ಈ ಪ್ರದೇಶದಲ್ಲಿ ನಿಷೇಧಾಜ್ಞೆ ಜಾರಿಮಾಡಲಾಗಿತ್ತು. ಆದರೆ ಇದನ್ನು ಲೆಕ್ಕಿಸದೇ, ಪೊಲೀಸರು ತಡೆದರೂ ಗುಂಪುಗಟ್ಟಿಗೊಂಡು ಮೆರವಣಿಗೆ ಮಾಡಿರುವ ಹಿನ್ನೆಲೆಯಲ್ಲಿ ಗ್ರೇಟರ್ ನೋಯ್ಡಾದ ಇಕೋಟೆಕ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ. ಇಷ್ಟೇ ಅಲ್ಲದೇ ಪ್ರತಿಭಟನೆ ವೇಳೆ ಅನೇಕ ಮಂದಿ ಮಾಸ್ಕ್ ಕೂಡ ಧರಿಸದೇ ಇರುವುದು ಕಂಡುಬಂದಿದೆ.
ಭಾರತೀಯ ದಂಡ ಸಂಹಿತೆ ಸೆಕ್ಷನ್ 188 (ಸಾರ್ವಜನಿಕ ಸೇವಕರಾಗಿ ಸರಿಯಾದ ಆದೇಶ ಪಾಲನೆ ಮಾಡದಿರುವುದು), 269 (ಕಾನೂನುಬಾಹಿರವಾಗಿ ಅಥವಾ ನಿರ್ಲಕ್ಷ್ಯದಿಂದ ಜೀವಕ್ಕೆ ಅಪಾಯಕಾರಿಯಾದ ಯಾವುದೇ ರೋಗದ ಸೋಂಕನ್ನು ಹರಡುವುದು), 270 (ಜೀವಕ್ಕೆ ಅಪಾಯಕಾರಿ ರೋಗದ ಸೋಂಕನ್ನು ಹರಡುವ ಸಾಧ್ಯತೆ) ಮತ್ತು ಸಾಂಕ್ರಾಮಿಕ ರೋಗಗಳ ಕಾಯ್ದೆಯ ಸೆಕ್ಷನ್ 3 ರ ಅಡಿಯಲ್ಲಿ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ನನ್ನನ್ನು ತಳ್ಳಿದರು, ನೆಲಕ್ಕೆ ಬೀಳಿಸಿದರು- ಪೊಲೀಸರ ವಿರುದ್ಧ ರಾಹುಲ್ ಗಾಂಧಿ ಗುಡುಗು
ಉತ್ತರ ಪ್ರದೇಶದ ಹತ್ರಾಸ್ನ 19 ವರ್ಷದ ಯುವತಿಯ ಮೇಲೆ ನಡೆದ ಗ್ಯಾಂಗ್ರೇಪ್ ಹಾಗೂ ಆಕೆಯ ಸಾವಿನ ನಂತರ ಎಲ್ಲೆಡೆ ಪ್ರತಿಭಟನೆಯ ಕಾವು ಜೋರಾಗಿದೆ. ಈ ನಡುವೆ ಕಾಂಗ್ರೆಸ್ ಕಾರ್ಯಕರ್ತರು ರಾಹುಲ್ ಹಾಗೂ ಪ್ರಿಯಾಂಕಾ ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆ ಮೂಲಕ ಹತ್ರಾಸ್ ಗ್ರಾಮಕ್ಕೆ ತೆರಳಿದ್ದರು.
ಈ ಸಂದರ್ಭದಲ್ಲಿ ಕರೊನಾ ವೈರಸ್ ನಿಯಮ ಉಲ್ಲಂಘನೆಯಾಗಿದೆ. ಜತೆಗೆ 144 ಸೆಕ್ಷನ್ ಜಾರಿಯಿರುವ ಕಾರಣ, ಪೊಲೀಸರು ಅವರನ್ನು ಮಧ್ಯೆಯೇ ತಡೆದರು. ಈ ನಡುವೆ ನಡೆದ ತಳ್ಳಾಟದಲ್ಲಿ ರಾಹುಲ್ಗಾಂಧಿ ನೆಲಕ್ಕೆ ಬಿದ್ದರು ಎನ್ನಲಾಗಿದೆ.
ಒಂದು ರೂಪಾಯಿ ದಂಡದ ವಿರುದ್ಧ ಪುನಃ ಸುಪ್ರೀಂ ಮೆಟ್ಟಿಲೇರಿದ ವಕೀಲ ಪ್ರಶಾಂತ್ ಭೂಷಣ್
ನನ್ನ ಅಂಗಾಂಗ ದಾನ ಮಾಡಲು ಪ್ರತಿಜ್ಞೆ ಮಾಡಿರುವೆ: ಟ್ವಿಟರ್ನಲ್ಲಿ ಹೇಳಿಕೊಂಡ ಅಮಿತಾಭ್