ಲಖನೌ: ನೀವು ಬಿಜೆಪಿಗೆ ಬಂದರೆ ನಿಮ್ಮನ್ನು ಹೇಮಾಮಾಲಿನಿ ಮಾಡುತ್ತೇವೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಷಾ ತಮಗೆ ಹಾಗೂ ತಮ್ಮ ಪಕ್ಷದ ಮುಖಂಡರೊಬ್ಬರಿಗೆ ಆಫರ್ ಕೊಟ್ಟಿರುವುದಾಗಿ ರಾಷ್ಟ್ರೀಯ ಲೋಕದಳ ಮುಖ್ಯಸ್ಥ ಜಯಂತ್ ಚೌಧರಿ ಆರೋಪಿಸಿದ್ದಾರೆ.
ನನಗೆ ಮತ್ತು ನಮ್ಮ ಪಕ್ಷದ ಮುಖಂಡ ಯೋಗೇಶ್ ಅವರಿಗೆ ಬಿಜೆಪಿ ಸೇರಲು ಪದೇ ಪದೇ ಆಹ್ವಾನಿಸಲಾಗಿತ್ತು.ಬಂದರೆ ಹೇಮಾಮಾಲಿನಿ ಮಾಡುವುದಾಗಿ ಹೇಳಲಾಗಿತ್ತು ಎಂದು ಚುನಾವಣೆಯ ಪ್ರಚಾರದ ವೇಳೆ ಸಭೆಯನ್ನುದ್ದೇಶಿಸಿ ಹೇಳಿಕೆ ನೀಡಿದ್ದಾರೆ. ‘ಯೋಗೇಶ್ ನಮ್ಮ ಪಕ್ಷಕ್ಕೆ ಬನ್ನಿ, ನಿಮ್ಮನ್ನು ಹೇಮಾಮಾಲಿನಿ ಮಾಡುತ್ತೇನೆ’ ಎಂದು ಅಮಿತ್ ಷಾ ನೇರವಾಗಿ ಯೋಗೇಶ್ ಅವರಿಗೆ ಕರೆದಿದ್ದರು, ನನಗೂ ಹಾಗೆಯೇ ಹೇಳಿದ್ದರು ಎಂದು ಜಯಂತ್ ಹೇಳಿದ್ದಾರೆ.
ಫೆಬ್ರವರಿ 10 ರಿಂದ ಪ್ರಾರಂಭವಾಗುವ ಉತ್ತರ ಪ್ರದೇಶ ಚುನಾವಣೆಯ ಪ್ರಚಾರದ ವೇಳೆ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು. ಮಥುರಾದಿಂದ ಬಿಜೆಪಿ ಸಂಸದರಾಗಿರುವ ನಟಿ-ರಾಜಕಾರಣಿ ಹೇಮಾ ಮಾಲಿನಿ ಅವರ ಹೆಸರನ್ನು ಜಯಂತ್ ಅವರು ಹೇಳುತ್ತಿದ್ದಂತೆಯೇ ಜನರು ಜೋರಾಗಿ ಚಪ್ಪಾಳೆ ತಟ್ಟಲು ಶುರು ಮಾಡಿದರು.
ಆಗ ಜಯಂತ್ ಅವರು, ನಿಮಗೂ ಹೇಮಾಮಾಲಿನಿ ಮೇಲೆ ಅಭಿಮಾನ ಇರಬಹುದು. ಹಾಗೆಂದು ನಾನು ಹೇಮಾಮಾಲಿನಿಯಾಗಲು ಬಯಸುವುದಿಲ್ಲ. ಬಿಜೆಪಿಯವರು ನನ್ನನ್ನು ನನ್ನ ಮೇಲಿನ ಪ್ರೀತಿಯಿಂದಲೋ ಅಥವಾ ಒಳ್ಳೆಯ ಉದ್ದೇಶದಿಂದಲೋ ಪಕ್ಷಕ್ಕೆ ಕರೆದಿದ್ದಾರೆ ಅಂತಲ್ಲ. ನನ್ನನ್ನು ಓಲೈಸಿ ಅವರಿಗೆ ಏನು ಸಿಗುತ್ತದೆಯೋ ತಿಳಿದಿಲ್ಲ’ ಎಂದು ತಿರುಗೇಟು ನೀಡಿದರು.
ಅಕ್ಟೋಬರ್ನಲ್ಲಿ ಲಖಿಂಪುರ ಖೇರಿಯಲ್ಲಿ ನಡೆದ ಪ್ರತಿಭಟನೆ ವೇಳೆ ರೈತರ ಮೇಲೆ ವಾಹನ ಚಲಾಯಿಸಿದ ಆರೋಪದ ಮೇಲೆ ಕೇಂದ್ರ ಸಚಿವ ಅಜಯ್ ಮಿಶ್ರಾ ಟೆನಿ ಅವರ ಪುತ್ರ ಆಶಿಶ್ ಮಿಶ್ರಾ ಜೈಲಿನಲ್ಲಿದ್ದಾರೆ. ಅವರನ್ನು ವಜಾಗೊಳಿಸಲು ವಿರೋಧ ಪಕ್ಷದ ಬೇಡಿಕೆಗಳ ಹೊರತಾಗಿಯೂ, ಮಿಶ್ರಾ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರದಲ್ಲಿ ತಮ್ಮ ಸ್ಥಾನವನ್ನು ಉಳಿಸಿಕೊಂಡಿದ್ದಾರೆ ಎಂದು ಆರೋಪಿಸಿದರು.
ಉತ್ತರ ಪ್ರದೇಶ ಚುನಾವಣೆಯಲ್ಲಿ ಜಯಂತ್ ಚೌಧರಿ ಅವರ ಆರ್ಎಲ್ಡಿ ಪಕ್ಷವು ಅಖಿಲೇಶ್ ಯಾದವ್ ಅವರ ಸಮಾಜವಾದಿ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡಿದೆ. ಜನವರಿ 26 ರಂದು ದೆಹಲಿಯಲ್ಲಿ ನಡೆದ ಚುನಾವಣಾ ಸಭೆಯಲ್ಲಿ ಅಮಿತ್ ಷಾ ಅವರು, ಆರ್ಎಲ್ಡಿಗೆ ಬಿಜೆಪಿಯ ಬಾಗಿಲು ಯಾವಾಗಲೂ ತೆರೆದಿರುತ್ತದೆ. ಅಖಿಲೇಶ್ ಯಾದವ್ ಅವರು ಚುನಾವಣೆ ಮುಗಿದ ತಕ್ಷಣ ಚೌಧರಿ ಅವರನ್ನು ಕೈಬಿಡುತ್ತಾರೆ ಎಂದು ಹೇಳಿದ್ದರು.
ಕೆಪಿಟಿಸಿಎಲ್ನಿಂದ 1492 ಇಂಜಿನಿಯರ್ಗಳ ನೇಮಕಾತಿ: 73 ಸಾವಿರ ರೂ.ವರೆಗೆ ಸಂಬಳ
VIDEO: ಕುರುಂಕುರುಂ, ಟೇಸ್ಟಿ ಟೇಸ್ಟಿ ಪೇಪರ್ ದೋಸೆ ತಿನ್ನಿ, 71 ಸಾವಿರ ರೂ. ಬಹುಮಾನ ಗೆಲ್ಲಿ!