ಬೆಂಗಳೂರು: ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಭಾನುವಾರ (ಮಾ.8) ಸಂಜೆ ಆಯೋಜಿಸಿದ್ದ ಆರ್ಎಸ್ಎಸ್ ಸಮಾವೇಶ ಉಗ್ರರಿಗೆ ಟಾರ್ಗೆಟ್ ಆಗಿತ್ತು ಎಂಬ ಭಯಾನಕ ಸತ್ಯವೊಂದು ಹೊರಬಿದ್ದಿದೆ.
ಈ ಸಮಾವೇಶದ ಮೇಲೆ ದಾಳಿ ಮಾಡಿ, ಆರ್ಎಸ್ಎಸ್ ಸರಸಂಘಚಾಲಕ ಮೋಹನ್ ಭಾಗವತ್ ಹತ್ಯೆ ನಡೆಸಲು ಉಗ್ರ ಸಂಘಟನೆಯೊಂದು ವ್ಯವಸ್ಥಿತ ಸಂಚು ರೂಪಿಸಿತ್ತು ಎಂಬ ವಿಚಾರ ಇದೀಗ ಬೆಳಕಿಗೆ ಬಂದಿದೆ.
ಆರ್ಎಸ್ಎಸ್ ಸಮಾವೇಶದ ಮೇಲೆ ಉಗ್ರರು ದಾಳಿ ನಡೆಸಲು ಯೋಜನೆ ರೂಪಿಸಿದ್ದಾರೆ ಎಂಬ ಮಾಹಿತಿಯನ್ನು ಕೇಂದ್ರ ಗುಪ್ತಚರ ದಳ (ಐಬಿ) ರಾಜ್ಯ ಆಂತರಿಕ ಭದ್ರತಾ ವಿಭಾಗದ ಡಿಐಜಿಗೆ ರವಾನಿಸಿತ್ತು. ಅದರ ಆಧಾರದ ಮೇಲೆ ನಿನ್ನೆ ನಡೆದ ಸಮಾವೇಶದಲ್ಲಿ ಬಿಗಿ ಭದ್ರತೆಯನ್ನು ಕಲ್ಪಿಸಲಾಗಿತ್ತು. ಅನುಮಾನಾಸ್ಪದ ವ್ಯಕ್ತಿಗಳ ಮೇಲೆ, ಅವರ ಓಡಾಟದ ಬಗ್ಗೆ ತೀವ್ರ ನಿಗಾ ವಹಿಸಲಾಗಿತ್ತು.
ಅಷ್ಟೇ ಅಲ್ಲದೆ ರೌಡಿಶೀಟರ್ಗಳ ಕಾರ್ಯಚಟುವಟಿಕೆ ನಡೆಯುವ ಸೂಕ್ಷ್ಮ ಪ್ರದೇಶಗಳಾದ ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿ, ಇಲಿಯಾಸ್ ನಗರ, ಚಾಮರಾಜಪೇಟೆ ಮತ್ತಿರ ಕಡೆಗಳಲ್ಲಿ ಪೊಲೀಸ್ ಬಿಗಿ ಭದ್ರತೆ ಕಲ್ಪಿಸಲಾಗಿತ್ತು.
ಆರ್ಎಸ್ಎಸ್ ಸಮಾವೇಶದ ಮೇಲೆ ದಾಳಿ, ಮೋಹನ್ ಭಾಗವತ್ ಹತ್ಯೆಗೆ ಸಂಬಂಧಪಟ್ಟಂತೆ ಗ್ಲೋಬಲ್ ಟೆರರಿಸ್ಟ್ ಗ್ರೂಪ್ ಆನ್ಲೈನ್ನಲ್ಲಿ ಚರ್ಚೆ ನಡೆಸಿರುವ ಬಗ್ಗೆಯೂ ರಾಜ್ಯ ಆಂತರಿಕ ಭದ್ರತಾ ವಿಭಾಗದ ಜ್ಞಾಪನಾ ಪತ್ರದಿಂದ ತಿಳಿದುಬಂದಿದೆ.(ದಿಗ್ವಿಜಯ ನ್ಯೂಸ್)