ಹೊಸಪೇಟೆ: ನಿವೃತ್ತಿ ಸೌಲಭ್ಯ ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರಾಜ್ಯ ಅಂಗನವಾಡಿ ನೌಕರರ ಸಂಘದ ತಾಲೂಕು ಸಮಿತಿ ನಗರದ ಸಿಡಿಪಿಒ ಕಚೇರಿ ಮುಂದೆ ಸೋಮವಾರ ಪ್ರತಿಭಟನೆ ನಡೆಸಿತು.
ಸಂಘದ ತಾಲೂಕು ಅಧ್ಯಕ್ಷೆ ನಾಗರತ್ನಮ್ಮ ಮಾತನಾಡಿ, ಕೋವಿಡ್ ನಿಯಂತ್ರಣಕ್ಕಾಗಿ ಅಂಗನವಾಡಿ ನೌಕರರು ಶ್ರಮಿಸುತ್ತಿದ್ದಾರೆ. ಸ್ವರಕ್ಷಣೆಗಾಗಿ ಗುಣಮಟ್ಟದ ಪಿಪಿಇ ಕಿಟ್, ಸ್ಯಾನಿಟೈಸರ್, ಮಾಸ್ಕ್ ನೀಡದ್ದರಿಂದ ಕಾರ್ಯಕರ್ತೆಯರು, ಮಕ್ಕಳಿಗೂ ಸೋಂಕು ತಗುಲಿದೆ. ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರಿಗೆ ಎಲ್ಲ ರೀತಿಯ ಸುರಕ್ಷತಾ ಸೌಲಭ್ಯ ಒದಗಿಸಬೇಕು. ನೌಕರರಿಗೆ 25 ಸಾವಿರ ರೂ. ಪ್ರೋತ್ಸಾಹಧನ, 50 ಲಕ್ಷ ರೂ. ವಿಮೆ ಮಾಡಿಸಬೇಕು. ಕರೊನಾ ಸೋಂಕಿತರಿಗೆ 5 ಲಕ್ಷ ರೂ. ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
ಅಂಗನವಾಡಿ ಸಿಬ್ಬಂದಿ ಸೇವೆ ಕಾಯಂ ಮಾಡಬೇಕು. ಅಂಗನವಾಡಿಗಳಲ್ಲಿ ಎಲ್ಕೆಜಿ,ಯುಕೆಜಿ ಆರಂಭಿಸಬೇಕು. ನಿವೃತ್ತಿ ವೇತನದಲ್ಲಿ ಸರ್ಕಾರ ಮತ್ತು ಇಲಾಖೆ ನಿರ್ಲಕ್ಷೃ ತೋರುತ್ತಿದ್ದು, ಕೂಡಲೇ ಸರಿಪಡಿಸಿಕೊಂಡು ನೌಕರರ ಸುರಕ್ಷತೆ ಹಾಗೂ ರಕ್ಷಣೆಗೆ ಮುಂದಾಗಬೇಕು. ನೌಕರರ ಸಮಸ್ಯೆ ಬಗೆಹರಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಅಸಹಕಾರ ಚಳವಳಿ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು. ಸಮಿತಿ ಕಾರ್ಯದರ್ಶಿ ಬಿ.ಸುಜಾತ, ಸಹಕಾರ್ಯದರ್ಶಿ ಎನ್.ಎಂ.ಸುಮಂಗಳಾ, ಉಪಾಧ್ಯಕ್ಷೆ ಜೆ.ಶಕುಂತಲಾ, ಖಜಾಂಚಿ ಈರಮ್ಮ ಇತರರಿದ್ದರು.