ಶಿವಮೊಗ್ಗ: ಖೋ ಖೋ ಮೇಲೆ ಮೂಡಿಬಂದಿರುವ ಮೊಟ್ಟಮೊದಲ ಕನ್ನಡ ಸಿನಿಮಾ ಗುರುಶಿಷ್ಯರು ಎಂದು ಸಿನಿಮಾದ ನಟ, ನಿರ್ಮಾಪಕ ಶರಣ್ ತಿಳಿಸಿದರು.
ನೀನಾಸಂ ಸೇರಿದಂತೆ ರಂಗಭೂಮಿಯಿಂದ ಬಂದ ಕಲಾವಿದರ ಮೂಲಕ ಎರಡೂವರೆ ವರ್ಷ ಕಷ್ಟಪಟ್ಟು ಸಿನಿಮಾ ಮಾಡಿದ್ದೇವೆ. ಕಲಾವಿದರು ಕೇವಲ ಸಿನಿಮಾಕ್ಕೆ ಸೀಮಿತವಾಗಿ ಖೋ ಖೋ ಅಭ್ಯಾಸ ಮಾಡದೆ ವೃತ್ತಿಪರವಾಗಿ ಆಯ್ದುಕೊಂಡಿದ್ದಾರೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಖೋ ಖೋ ಅನ್ನು ಕೇಂದ್ರ ಬಿಂದುವನ್ನಾಗಿಟ್ಟುಕೊಂಡು ಸಿನಿಮಾ ಚಿತ್ರೀಕರಿಸಲಾಗಿದೆ. ಹಳ್ಳಿ ಸೊಗಡಿನಲ್ಲಿ ಸರ್ಕಾರಿ ಶಾಲೆಯ ಮಕ್ಕಳಿಗೆ ಶಿಕ್ಷಕನಾಗಿ ತೆರೆ ಮೇಲೆ ಕಾಣಿಸಿಕೊಂಡಿದ್ದೇನೆ. ನನ್ನ ಉಳಿದೆಲ್ಲ ಸಿನಿಮಾಗಳಿಗಿಂತ ಇದು ವಿಭಿನ್ನವಾಗಿದೆ. ಶೀರ್ಷಿಕೆಯೇ ಹೇಳುವಂತೆ ಗುರುಶಿಷ್ಯರ ನಡುವಿನ ಅವಿನಾಭಾವನ ಸಂಬಂಧವನ್ನು ಚಿತ್ರೀಕರಿಸಲಾಗಿದೆ. ಎರಡು ಹಾಡುಗಳನ್ನು ಈಗಾಗಲೇ ಬಿಡುಗಡೆ ಮಾಡಿದ್ದು ಮಿಲಿಯನ್ ಗಟ್ಟಲೇ ವೀಕ್ಷಣೆ ಕಂಡಿವೆ. ಬಿಡುಗಡೆಗೂ ಮುಂಚೆಯೇ ಎಲ್ಲ ಕಡೆ ಟಿಕೆಟ್ ಸೋಲ್ಡೌಟ್ ಆಗಿದೆ ಎಂದು ಖುಷಿ ವ್ಯಕ್ತಪಡಿಸಿದರು.
ನಾಯಕಿ ನಿಶ್ವಿಕಾ ನಾಯ್ಡು ಮಾತನಾಡಿ, ಸಿನಿಮಾದಲ್ಲಿ ಸುಜಾತಾ ಪಾತ್ರದಲ್ಲಿ ಮೊದಲ ಬಾರಿಗೆ ಹಳ್ಳಿ ಹುಡುಗಿಯಾಗಿ ಕಾಣಿಸಿಕೊಳ್ಳುತ್ತಿದ್ದೇನೆ. ಎಲ್ಲರೂ ಸಿನಿಮಾ ನೋಡಿ ಹಾರೈಸುವಂತೆ ಅಭಿಮಾನಿಗಳಲ್ಲಿ ಮನವಿ ಮಾಡಿದರು. ಕಲಾವಿದರಾದ ಮಾಲತೇಶ್, ಏಕಾಂತ್, ರುದ್ರ, ಮಣಿಕಂಠ, ಸೂರ್ಯ, ಸಾಂಬಾಶಿವ, ಸಂದೇಶ್ಕುಮಾರ್ ಮತ್ತಿತರರಿದ್ದರು.
23ರಂದು ರಾಜ್ಯಾದ್ಯಂತ ಬಿಡುಗಡೆ:
ನಟ ಶರಣ್, ನಟಿ ನಿಶ್ವಿಕಾ ನಾಯ್ಡು ಅಭಿಯನದ ಮತ್ತು ತರುಣ್ ಸುಧೀರ್ ಆಕ್ಷೃನ್ ಕಟ್ ಹೇಳಿರುವ ಗುರುಶಿಷ್ಯರು ಕನ್ನಡ ಸಿನಿಮಾ ಸೆ.23ರಂದು ರಾಜ್ಯಾದ್ಯಂತ ಬಿಡುಗಡೆಗೊಳ್ಳುತ್ತಿದೆ. ಲಡ್ಡು ಸಿನಿಮಾ ಹೌಸ್ನಲ್ಲಿ ಮೂಡಿಬಂದಿರುವ ಸಿನಿಮಾದಲ್ಲಿ ಶೇ.80 ಕಲಾವಿದರು ರಂಗಭೂಮಿಯಿಂದ ಬಂದವರಿದ್ದು, ಮೊದಲ ಬಾರಿಗೆ ಶರಣ್ ಮತ್ತು ತರುಣ್ ಸುಧೀರ್ ನಿರ್ಮಾಣ ಮಾಡುತ್ತಿದ್ದಾರೆ. ಕುಟುಂಬ ಸಮೇತ ವೀಕ್ಷಿಸಬಹುದಾದ ‘ಯು’ ಸರ್ಟಿಫಿಕೇಟ್ ಕೂಡ ಸಿಕ್ಕಿದೆ.