ಬೆಂಗಳೂರು: ಬೆಳ್ಳಂ ಬೆಳಗ್ಗೆ ಸಚಿವೆ ಶಶಿಕಲಾ ಜೊಲ್ಲೆ ಮನೆ ಮುಂದೆಯೇ ಸ್ನೇಹಿತರಿಂದ ರೌಡಿಶೀಟರ್ ಗಗನ್ ಶರ್ಮಾ ಕೊಲೆಗೆ ಯತ್ನ ನಡೆದಿದೆ. ದುಷ್ಕರ್ಮಿಗಳು ರೌಡಿಶೀಟರ್ ಮೇಲೆ ಮೂರ್ನಾಲ್ಕು ಬಾರಿ ಕಾರು ಹತ್ತಿಸಿ ಹತ್ಯೆ ಮಾಡಲು ಮುಂದಾಗಿದ್ದು, ಗಗನ್ ಶರ್ಮಾ ಗಂಭೀರವಾಗಿ ಗಾಯಗೊಂಡು ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಮಾರ್ಚ್ 21ರ ಮುಂಜಾನೆ 5.30 ರಿಂದ 6 ಗಂಟೆಗೆ ಆಸುಪಾಸಿನಲ್ಲಿ ಘಟನೆ ನಡೆದಿದೆ.
ಗಗನ್ ಶರ್ಮಾ ಹೌಗ್ರೌಂಡ್ ಪೊಲೀಸ್ ಠಾಣೆಯಲ್ಲಿ ರೌಡಿಶೀಟರ್ ಆಗಿ ಗುರುತಿಸಿಕೊಂಡಿದ್ದಾನೆ. ಬಿಬಿಎಂಪಿ ಟ್ಯಾಕ್ಸ್ ಕಲೆಕ್ಟರ್ ಆಗಿರುವ ಸುನೀಲ್ ಕುಮಾರ್, ಅರುಣ್, ಕೃಷ್ಣ ಎಂಬುವರು ಈತನ ಹತ್ಯೆಗೆ ಸಂಚು ರೂಪಿಸಿದ್ದಾರೆ. ರೌಡಿಶೀಟರ್ ಗಗನ್ ಹಾಗೂ ಕೃತ್ಯ ಎಸಗಿರುವ ಹಂತಕರು ಸ್ನೇಹಿತರು. ಆಸ್ತಿ ವಿಚಾರದಲ್ಲಿ ಗಗನ್ ಮತ್ತು ಸುನೀಲ್ ನಡುವೆ ಮನಸ್ತಾಪ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ಕೊಲೆ ಮಾಡಲು ಮುಂದಾಗಿದ್ದಾರೆ.
ಇದನ್ನೂ ಓದಿ: ವೇಗದ ಚಾಲನೆ; ಇಬ್ಬರ ಪ್ರಾಣವನ್ನೇ ಕಿತ್ತುಕೊಂಡ ಆಂಬ್ಯುಲೆನ್ಸ್ ಚಾಲಕ!
ಸುನಿಲ್ ಮಾರ್ಚ್ 20ರಂದು ರಾತ್ರಿ 10 ಗಂಟೆಗೆ ಫೋನ್ ಮಾಡಿ ಮಾತನಾಡಬೇಕು ಎಂದು ಗಗನ್ನನ್ನು ಫ್ರೇಜರ್ ಟೌನ್ ಬಳಿ ಕರೆಸಿಕೊಂಡಿದ್ದ. ಅಲ್ಲಿಂದ ಕಾರಿನಲ್ಲಿ ಕೂರಿಸಿಕೊಂಡು ಸಿಟಿ ರೌಂಡ್ಸ್ ಹೋಗಿದ್ದಾರೆ. 21ರ ಬೆಳಗ್ಗೆ ಜಯಮಹಲ್ ರಸ್ತೆ ಬಳಿ ಬಂದು ಕಾರು ನಿಲ್ಲಿಸದ್ದಾರೆ. ಕಾರಿನಲ್ಲಿ ನಾಲ್ವರು ಇರುವಾಗಲೇ ಗಲಾಟೆ ಪ್ರಾರಂಭವಾಗಿದ್ದು, ದೊಣ್ಣೆಯಿಂದ ಗಗನ್ ಮೇಲೆ ಮೂವರ ಹಲ್ಲೆ ಮಾಡಿದ್ದಾರೆ. ನಂತರ ಕೆಳಗೆ ತಳ್ಳಿ ಮೂರ್ನಾಲ್ಕು ಬಾರಿ ಕಾರು ಹತ್ತಿಸಿದ್ದಾರೆ.
ಈ ಬಗ್ಗೆ ಸ್ಥಳೀಯರು ಜೆಸಿ ನಗರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸದ್ಯ ಗಾಯಾಳು ಗಗನ್ನನ್ನು ಪೊಲೀಸರು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ಘಟನೆ ಸಂಬಂಧ ಜೆಸಿ ನಗರ ಠಾಣೆಯಲ್ಲಿ ಕೊಲೆಯತ್ನ ಪ್ರಕರಣ ದಾಖಲಾಗಿದ್ದು, ಆರೋಪಿ ಸುನೀಲ್ನನ್ನು ಬಂಧಿಸಿದ್ದಾರೆ. ತಲೆಮರೆಸಿಕೊಂಡಿರುವ ಇಬ್ಬರಿಗಾಗಿ ಶೋಧಕಾರ್ಯ ಮುಂದುವರೆದಿದೆ. ಇದನ್ನೂ ಓದಿ: ಐಫೋನ್ ಬಳಕೆದಾರರೇ ಎಚ್ಚರ; ನಿಮ್ಮ ಬೆಲೆಬಾಳುವ ಫೋನ್ಗಳೇ ಇವರ ಟಾರ್ಗೆಟ್