ಬೆಂಗಳೂರು: ಆಗಷ್ಟೇ ಹೋಟೆಲ್ನಲ್ಲಿ ಊಟ ಮಾಡಿಕೊಂಡು ಹೊರ ಬಂದ ರೌಡಿಶೀಟರ್ನನ್ನು ಇನೋವಾ ಕಾರಿನಲ್ಲಿ ಬಂದ ದುಷ್ಕರ್ಮಿಗಳ ಗುಂಪೊಂದು ಮಾರಕಾಸ್ತ್ರಗಳಿಂದ ಮನಸೋಇಚ್ಛೆ ದಾಳಿ ಮಾಡಿ ಸ್ಥಳದಲ್ಲೇ ಕೊಂದುಹಾಕಿದೆ.
ಮೈಸೂರು ರಸ್ತೆ ಕೆಂಗೇರಿ ಬಳಿಯ ಚೆಕ್ಪೋಸ್ಟ್ ಸಮೀಪ ಶುಕ್ರವಾರ ರಾತ್ರಿ ರೌಡಿಶೀಟರ್ ಬೆಸ್ತಮಾನಹಳ್ಳಿಯ ಸುನೀಲ್ ಕುಮಾರ್(30) ಎಂಬಾತನನ್ನು ಹತ್ಯೆ ಮಾಡಲಾಗಿದೆ. ಹಲವು ಅಪರಾಧ ಪ್ರಕರಣಗಳಲ್ಲಿ ಜೈಲಿಗೆ ಹೋಗಿದ್ದ ಸುನೀಲ್ ಕುಮಾರ್ ಜಾಮೀನು ಪಡೆದು ಹೊರಬಂದಿದ್ದ. ನಿನ್ನೆ(ಶುಕ್ರವಾರ) ರಾತ್ರಿ 8 ಗಂಟೆ ಸುಮಾರಿನಲ್ಲಿ ಸುನೀಲ್, ತನ್ನ ಕಾರು ಚಾಲಕನೊಂದಿಗೆ ಮೈಸೂರು ರಸ್ತೆ ಕೆಂಗೇರಿ ಬಳಿಯ ಕದಂಬ ಹೋಟೆಲ್ಗೆ ಉಪಹಾರ ಸೇವಿಸಲು ಬಂದಿದ್ದ. ಹೋಟೆಲ್ನಿಂದ ವಾಪಸ್ ತೆರಳಲು ಕಾರು ಹಿಂದಕ್ಕೆ ತೆಗೆಯುತ್ತಿದ್ದ ವೇಳೆ ಇನೋವಾ ಕಾರಿನಲ್ಲಿ ಬಂದ ಆರೇಳು ಮಂದಿಯ ತಂಡ ಏಕಾಏಕಿ ಮಾರಕಾಸ್ತ್ರಗಳಿಂದ ಸುನೀಲ್ ಮೇಲೆ ದಾಳಿ ಮಾಡಿತು. ಕಾರಿನ ಗಾಜು ಪುಡಿಪುಡಿ ಮಾಡಿ ಸುನೀಲ್ನನ್ನು ಹೊರಕ್ಕೆ ಎಳೆದು ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಸುನೀಲ್ ಮೇಲಿನ ದಾಳಿ ತಡೆಯಲು ಯತ್ನಿಸಿದ ಚಾಲಕನ ಮೇಲೂ ಹಲ್ಲೆಯಾಗಿದ್ದು, ಜಿಗಣಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ತೀವ್ರ ಗಾಯಗೊಂಡ ಸುನೀಲ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಇದನ್ನೂ ಓದಿರಿ ಹಳೇ ಲವ್ ವಿಷ್ಯ ಮುಚ್ಚಿಹಾಕಲು ಉದ್ಯಮಿ ಜತೆ ಅಕ್ರಮ ಸಂಬಂಧ ಬೆಳೆಸಿ ಮತ್ತೆ ಪೇಚಿಗೆ ಸಿಲುಕಿದ್ಳು!
ಆನೇಕಲ್, ಹೊಸಕೋಟೆ, ಅತ್ತಿಬೆಲೆ ಸುತ್ತಮುತ್ತಲ ಪ್ರದೇಶದಲ್ಲಿ ಹಲವು ದುಷ್ಕೃತ್ಯದಲ್ಲಿ ತೊಡಗಿದ್ದ ಸುನೀಲ್ ವಿರುದ್ಧ ಅತ್ತಿಬೆಲೆ ಮತ್ತು ಆನೇಕಲ್ ಠಾಣೆಯಲ್ಲಿ ರೌಡಿಶೀಟರ್ ತೆರೆಯಲಾಗಿತ್ತು.
ಹಲವು ಅಪರಾಧ ಪ್ರಕರಣಗಳಲ್ಲಿ ಜೈಲಿಗೆ ಹೋಗಿದ್ದ ಸುನೀಲ್, ಜಾಮೀನು ಪಡೆದು ಹೊರಬಂದ ಮೇಲೆ ಹಳೇ ಚಾಳಿ ಬಿಟ್ಟಿರಲಿಲ್ಲ. 2019ರಲ್ಲಿ ನ್ಯಾಯ ಪಂಚಾಯಿತಿ ನೆಪದಲ್ಲಿ ಸ್ನೇಹಿತ ಜಯಂತ್ ಎಂಬಾತನನ್ನು ಕರೆದು ಹತ್ಯೆ ಮಾಡಿದ್ದ. ಈ ಕೇಸಿನಲ್ಲಿ ಸುನೀಲ್ ಎ1 ಆರೋಪಿಯಾಗಿದ್ದ.
ಹಳೇ ದ್ವೇಷಕ್ಕೆ ದುಷ್ಕರ್ಮಿಗಳು ಹತ್ಯೆ ಮಾಡಿರುವ ಸಾಧ್ಯತೆ ಇರುವುದಾಗಿ ಪೊಲೀಸರು ತಿಳಿಸಿದ್ದಾರೆ. ಕುಂಬಳಗೂಡು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಭೇಟಿ ನೀಡಿದ ರಾಮನಗರ ಎಸ್ಪಿ ಡಾ. ಅನೂಪ್ ಶೆಟ್ಟಿ ಪರಿಶೀಲನೆ ನಡೆಸಿದರು. ಸುನೀಲ್ ಕುಮಾರ್ ಹತ್ಯೆ ಪ್ರಕರಣದ ಆರೋಪಿಗಳ ಪತ್ತೆಗೆ ಕುಂಬಳಗೂಡು ಠಾಣೆಯಲ್ಲಿ ವಿಶೇಷ ತಂಡ ರಚಿಸಲಾಗಿದೆ ಎಂದು ಎಸ್ಪಿ ತಿಳಿಸಿದ್ದಾರೆ.