ಮುಂಬೈ: ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ, ವೇಗಿ ಜಸ್ಪ್ರೀತ್ ಬುಮ್ರಾ ಸೇರಿದಂತೆ ಹಲವು ಕ್ರಿಕೆಟಿಗರಿಂದ ಬಯೋಬಬಲ್ ಕುರಿತು ಸಾಕಷ್ಟು ಟೀಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಮುಂಬರುವ ನ್ಯೂಜಿಲೆಂಡ್ ವಿರುದ್ಧದ ದ್ವಿಪಕ್ಷೀಯ ಸರಣಿಗೆ ಆವರ್ತನ ಪದ್ಧತಿ ಜಾರಿಗೊಳಿಸಲು ಬಿಸಿಸಿಐ ಚಿಂತನೆ ನಡೆಸಿದೆ. ಭಾರತ ತಂಡದ ನೂತನ ಕೋಚ್ ರಾಹುಲ್ ದ್ರಾವಿಡ್ ಸಲಹೆ ಮೇರೆಗೆ ಇಂಗ್ಲೆಂಡ್ ಹಾಗೂ ವೇಲ್ಸ್ ಕ್ರಿಕೆಟ್ ಮಂಡಳಿ ಮಾದರಿಯಲ್ಲಿ ಜಾರಿಗೊಳಿಸಲು ಬಿಸಿಸಿಐ ತೀರ್ಮಾನಿಸಲಾಗಿದೆ ಎನ್ನಲಾಗಿದೆ.
ಆಟಗಾರರನ್ನು ಮಾನಸಿಕ ಒತ್ತಡದಿಂದ ದೂರ ಇಡುವುದು, ಸತತವಾಗಿ ಬಯೋಬಬಲ್ ವ್ಯಾಪ್ತಿಯಿಂದ ಹೊರಗುಳಿಯುವಂತೆ ಅನುವು ಮಾಡಿಕೊಡುವುದೇ ಆವರ್ತನ ಪದ್ಧತಿಯ ಉದ್ದೇಶ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 2022 ಹಾಗೂ 2023ರಲ್ಲಿ ಭಾರತ ತಂಡಕ್ಕೆ ನಿಬಿಡಾ ವೇಳಾಪಟ್ಟಿಯಿದ್ದು, ತಲಾ ಒಂದು ಟಿ20 ಹಾಗೂ ಏಕದಿನ ವಿಶ್ವಕಪ್ಗಳನ್ನು ಆಡಬೇಕಿದೆ.
ಹೀಗಾಗಿ ಬಯೋಬಬಲ್ ಕುರಿತು ಗಂಭೀರವಾಗಿ ಚರ್ಚಿಸಿರುವ ಬಿಸಿಸಿಐ, ಮುಂಬರುವ ದಕ್ಷಿಣ ಆಫ್ರಿಕಾ ಪ್ರವಾಸದ ದೃಷ್ಟಿಯಿಂದ ಹಲವು ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಲಾಗಿದೆ. ದ.ಆಫ್ರಿಕಾ ಪ್ರವಾಸದ ಭಾಗವಾಗಿ ದೇಶೀಯ ಕ್ರಿಕೆಟ್ನ ಯುವ ಆಟಗಾರರಿಗೆ ಮಣೆ ಹಾಕಲಾಗಿದೆ. ಇಂಗ್ಲೆಂಡ್ನಲ್ಲಿ ಮೂರು ಮಾದರಿಗೂ ಕೆಲ ತಜ್ಞ ಆಟಗಾರರಿಗಷ್ಟೇ ಮಣೆ ಹಾಕಲಾಗಿದೆ.