ನವದೆಹಲಿ: ಟೀಮ್ ಇಂಡಿಯಾದ ಸಂಪೂರ್ಣ ಜವಬ್ದಾರಿ ಹೊತ್ತಿರುವ ಮುಖ್ಯ ಕೋಚ್ ರಾಹುಲ್ ದ್ರಾವಿಡ್ಗೆ ಈ ಬಾರಿ ಸರ್ಪ್ರೈಸ್ ಗಿಫ್ಟ್ ಒಂದು ಕಾದಿದೆ. ನಾಯಕ ರೋಹಿತ್ ಶರ್ಮ ಸೇರಿದಂತೆ ತಂಡದ ಎಲ್ಲ ಆಟಗಾರರು ಸೇರಿ ದ್ರಾವಿಡ್ಗೆ ವೃತ್ತಿ ಜೀವನದಲ್ಲಿ ಎಂದೂ ಮರೆಯದ ಉಡುಗೊರೆಯೊಂದನ್ನು ನೀಡಲು ತೀರ್ಮಾನ ಮಾಡಿದ್ದಾರೆ. ನಿಜವಾಗಿಯೂ ಹೇಳಬೇಕೆಂದರೆ, ದ್ರಾವಿಡ್ಗೆ ಇದಕ್ಕಿಂತ ದೊಡ್ಡ ಗಿಫ್ಟ್ ಬೇರೆ ಯಾವುದೂ ಇಲ್ಲ ಅಂತಾನೇ ಹೇಳಬಹುದು. ಏಕೆಂದರೆ, ಈ ಗಿಫ್ಟ್ ಹಲವರ ಜೀವನದ ಕನನಸಾಗಿದೆ. ಆದರೆ, ಇಂದು ಆ ಕನಸು ದ್ರಾವಿಡ್ ಜೀವನದಲ್ಲಿ ನನಸಾಗುವ ಹಂತಕ್ಕೆ ಬಂದಿದೆ. ಹಾಗಾದ್ರೆ ಟೀಮ್ ಇಂಡಿಯಾ ದ್ರಾವಿಡ್ಗೆ ಕೊಡಲಿರುವ ಆ ಸರ್ಪ್ರೈಸ್ ಗಿಫ್ಟ್ ಯಾವುದು ಅಂತ ಯೋಚನೆ ಮಾಡುತ್ತಿದ್ದೀರಾ? ಉತ್ತರ ಮುಂದಿದೆ ಓದಿ.
ವಿಶ್ವಕಪ್ ಟೂರ್ನಿಯಲ್ಲಿ ಇದುವರೆಗೂ ಆಡಿದ 10 ಪಂದ್ಯಗಳಲ್ಲೂ ಭಾರತ ಗೆಲುವು ಸಾಧಿಸಿ, ಫೈನಲ್ಗೆ ಲಗ್ಗೆ ಇಟ್ಟಿದೆ. ಟ್ರೋಫಿಯನ್ನು ಎತ್ತಿ ಹಿಡಿಯಲು ಇನ್ನೂ ಒಂದು ಹೆಜ್ಜೆ ಮಾತ್ರ ಬಾಕಿ ಇದ್ದು, ಅದಕ್ಕಾಗಿ ಟೀಮ್ ಇಂಡಿಯಾ ಸಕಲ ತಯಾರಿ ಮಾಡಿಕೊಳ್ಳುತ್ತಿದೆ. ಲೀಗ್ ಹಂತದಿಂದ ಫೈನಲ್ ತಲುಪುವರೆಗೂ ಭಾರತ ಈ ಅತ್ಯದ್ಭುತ ಯಶಸ್ಸಿಗೆ ಹೆಡ್ ಕೋಚ್ ಕನ್ನಡಿಗ ರಾಹುಲ್ ದ್ರಾವಿಡ್ ಕಾರಣ ಎಂದು ನಾಯಕ ರೋಹಿತ್ ಶರ್ಮ ಹೇಳಿದ್ದಾರೆ. ಹೀಗಾಗಿ ಈ ಬಾರಿಯ ವಿಶ್ವಕಪ್ ಟ್ರೋಫಿಯನ್ನು ದ್ರಾವಿಡ್ಗೆ ಉಡುಗೊರೆಯಾಗಿ ನೀಡಲು ಟೀಮ್ ಇಂಡಿಯಾ ನಿರ್ಧರಿಸಿದೆ.
ನಾಳಿನ ಫೈನಲ್ ಪಂದ್ಯಕ್ಕೂ ಮುನ್ನ ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರೋಹಿತ್ ಶರ್ಮ, ತಂಡದ ಪ್ರತಿಯೊಬ್ಬ ಆಟಗಾರನಿಗೂ ತನ್ನದೇಯಾದ ಆಟವಾಡಲು ಸ್ವಾತಂತ್ರ್ಯ ನೀಡುವ ದ್ರಾವಿಡ್ ಅವರ ವಿಧಾನವನ್ನು ರೋಹಿತ್ ಹೊಗಳಿದರು. ಸವಾಲಿನ ಸಂದರ್ಭಗಳಲ್ಲಿ ಪ್ರತಿ ಆಟಗಾರನಿಗೆ ದ್ರಾವಿಡ್ ಅವರು ನೀಡುವ ಅಚಲ ಬೆಂಬಲವನ್ನು ಒತ್ತಿ ಹೇಳಿದರು. ಅಲ್ಲದೆ, ರಾಹುಲ್ ದ್ರಾವಿಡ್ಗಾಗಿ ವಿಶ್ವಕಪ್ ಗೆಲ್ಲಲು ಬಯಸಿರುವುದಾಗಿ ತಿಳಿಸಿದ ರೋಹಿತ್, ದ್ರಾವಿಡ್ಗಾಗಿ ವಿಶ್ವಕಪ್ ಗೆಲ್ಲುವ ಬಹುದೊಡ್ಡ ಜವಾಬ್ದಾರಿ ಈಗ ತಂಡದ ಮೇಲಿದೆ ಎಂದರು.
ಪ್ರಸಕ್ತ ಟೂರ್ನಿಯಲ್ಲಿ ಟೀಮ್ ಇಂಡಿಯಾದ ಯಶಸ್ಸಿನಲ್ಲಿ ದ್ರಾವಿಡ್ ಅವರ ಪಾತ್ರವು ಸಂಪೂರ್ಣವಾಗಿ ದೊಡ್ಡದಾಗಿದೆ. ಆ ಸ್ಪಷ್ಟತೆಯನ್ನು ಪಡೆದೇ ನಾನು ಅದರ ಬಗ್ಗೆ ಮಾತನಾಡುತ್ತಿದ್ದೇನೆ. ಕೆಲವು ವಿಚಾರಗಳನ್ನು ಕೋಚ್ ಒಪ್ಪದೇ ಇದ್ದರೆ ಏನು ಮಾಡೋದು ಎಂಬ ಚಿಂತೆ ಎಲ್ಲರಂತೆ ನನಗೂ ಕಾಡಿತು. ರಾಹುಲ್ ಭಾಯ್ ಅವರು ಕ್ರಿಕೆಟ್ ಅನ್ನು ಹೇಗೆ ಆಡಿದ್ದಾರೆ ಮತ್ತು ಈ ದಿನಗಳಲ್ಲಿ ನಾನು ಹೇಗೆ ಆಡುತ್ತಿದ್ದೇನೆ ಎಂದು ನಿಮಗೆಲ್ಲರಿಗೂ ತಿಳಿದಿದೆ. ನಿಜಕ್ಕೂ ಇದು ಸಾಕಷ್ಟು ವ್ಯತಿರಿಕ್ತವಾಗಿದೆ. ಆದರೆ, ಎಲ್ಲಿಯೂ ನಮ್ಮ ಮೇಲೆ ಕಮ್ಯಾಂಡ್ ಮಾಡದೇ ನಮ್ಮದೇ ರೀತಿಯಲ್ಲಿ ನಾವು ಆಟವಾಡಲು ಸ್ವಾತಂತ್ರ್ಯ ನೀಡಿದರು. ಇದೇ ಗುಣ ಅವರು ಏನು ಎಂಬುದನ್ನು ಹೇಳುತ್ತದೆ ಎಂದು ರೋಹಿತ್ ತಿಳಿಸಿದರು.
ಟಿ20 ವಿಶ್ವಕಪ್ನಲ್ಲಿ ಸೆಮಿಫೈನಲ್ವರೆಗೆ ಹೋಗಿ ಅಲ್ಲಿ ಸೋತೆವು. ಇಂತಹ ಕಠಿಣ ಸಮಯದಲ್ಲೂ ಪ್ರತಿಯೊಬ್ಬ ಆಟಗಾರನ ಪರವಾಗಿ ದ್ರಾವಿಡ್ ನಿಂತುಕೊಂಡರು. ಕೆಲವು ಕಷ್ಟದ ಸಂದರ್ಭಗಳಲ್ಲಿ ಡ್ರಾವಿಡ್ ಅವರು ಆಟಗಾರರೊಂದಿಗೆ ಪ್ರತಿಕ್ರಿಯಿಸುತ್ತಿದ್ದ ರೀತಿ ಆಟಗಾರರಿಗೆ ಸಾಕಷ್ಟು ಸಹಾಯ ಮಾಡಿದೆ. ದ್ರಾವಿಡ್ ಅವರು ಈ ದೊಡ್ಡ ಸಂದರ್ಭದ (ವಿಶ್ವಕಪ್) ಭಾಗವಾಗಲು ಬಯಸುತ್ತಾರೆ ಮತ್ತು ಅವರಿಗಾಗಿ ನಾವು ಅದನ್ನು ಮಾಡಬೇಕಾಗಿದೆ ಅಂದರೆ, ವಿಶ್ವಕಪ್ ಗೆಲ್ಲಲೇಬೇಕಾಗಿದೆ ಎಂದು ರೋಹಿತ್ ಹೇಳಿದರು.
ತಂಡದಲ್ಲಿ ನಾನು ಮತ್ತು ರಾಹುಲ್ ಭಾಯ್ ಸೃಷ್ಟಿಸಿದ ವಾತಾವರಣದ ಬಗ್ಗೆ ನನಗೆ ತುಂಬಾ ಸಂತೋಷವಾಗಿದೆ. ಆಟಗಾರರು ಪಂದ್ಯದ ಹೊರಗಿನ ಗದ್ದಲ, ಟೀಕೆ ಅಥವಾ ಸ್ಕೋರ್ಗಳ ಬಗ್ಗೆ ಚಿಂತಿಸದೆ ಉತ್ತಮವಾಗಿ ಪ್ರತಿಕ್ರಿಯಿಸಿದ್ದಾರೆ ಎಂದು ರೋಹಿತ್ ಹೇಳಿದರು.
ನಾಳೆ ಫಿನಾಲೆ
ಅಂದಹಾಗೆ ಭಾರತ ವಿಶ್ವಕಪ್ ಟೂರ್ನಿಯಲ್ಲಿ ಲೀಗ್ ಹಂತದಲ್ಲಿ 9 ಮತ್ತು ಒಂದು ಸೆಮಿಫೈನಲ್ ಸೇರಿ ಆಡಿದ 10 ಪಂದ್ಯಗಳಲ್ಲೂ ಜಯ ಸಾಧಿಸಿದೆ. ಪ್ರತಿಯಾಗಿ ಆಸ್ಟ್ರೇಲಿಯಾ ತಂಡ 10 ಪಂದ್ಯಗಳಲ್ಲಿ ಎರಡರಲ್ಲಿ ಸೋತು ಉಳಿದ ಎಂಟು ಪಂದ್ಯಗಳಲ್ಲಿ ಜಯಸಿದೆ. ಅ.8ರಂದು ಚೆನ್ನೈ ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಲೀಗ್ ಪಂದ್ಯದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಭಾರತ ಗೆಲುವು ಸಾಧಿಸಿತು. ಇದೀಗ ನಾಳೆ (ನ.19) ಗುಜರಾತಿನ ಅಹಮದಾಬಾದ್ನಲ್ಲಿರುವ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಉಭಯ ತಂಡಗಳು ಮುಖಾಮುಖಿಯಾಗಲಿದ್ದು, ಟ್ರೋಫಿ ಯಾರಾ ಪಾಲಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ. ಭಾರತ ಗೆದ್ದರೆ, ಟ್ರೋಫಿ ರೋಹಿತ್ ಹೇಳಿದಂತೆ ದ್ರಾವಿಡ್ಗೆ ಗಿಫ್ಟ್ ಆಗಲಿದೆ. ಭಾರತ ಗೆಲ್ಲಲಿ ಎಂದು ನಾವೆಲ್ಲರು ಪ್ರಾರ್ಥಿಸೋಣ. (ಏಜೆನ್ಸೀಸ್)
ವಿಶ್ವಕಪ್ ಫಿನಾಲೆ: ರೋಹಿತ್ಗೆ ಕಾಡುತ್ತಿದೆ ಈ ಚಿಂತೆ, ಆದ್ರೂ ಆಸಿಸ್ ಬಗ್ಗೆ ಸ್ಪಷ್ಟ ಅರಿವಿದೆ ಎಂದ ನಾಯಕ