ಪಡುಬಿದ್ರಿ: ಕಂಚಿನಡ್ಕ ರುದ್ರಭೂಮಿ ಮಾರ್ಗದಲ್ಲಿ ತೆರಳುತ್ತಿದ್ದ ತರಕಾರಿ ಉದ್ಯಮಿ ಮನ್ಸೂರ್ ಎಂಬುವರನ್ನು ಆಟೋ ಹಾಗೂ ಕಾರಿನಲ್ಲಿ ಆಗಮಿಸಿದ ದುಷ್ಕರ್ಮಿಗಳು ಸೋಮವಾರ ರಾತ್ರಿ ಪಿಸ್ತೂಲು, ತಲವಾರು ತೋರಿಸಿ ಹಲ್ಲೆಗೈದು 3 ಲಕ್ಷ ರೂಪಾಯಿ ನಗದು ಹಾಗೂ ಚಿನ್ನದ ಉಂಗುರ ಲಪಟಾಯಿಸಿರುವ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳಾದ ಅಬ್ದುಲ್ ಅಜೀಜ್, ಫಿರೋಜ್, ಹಸನ್ಬಾವ, ರಹೀಂ, ಯೂಸುಫ್, ಇಲಿಯಾಸ್, ಅಬ್ದುಲ್ ರೆಹೆಮಾನ್, ನಜೀರ್ ಆಟೋ ಹಾಗೂ ಕಾರಿನಲ್ಲಿ ಆಗಮಿಸಿ ಅಡ್ಡಗಟ್ಟಿ ಹಲ್ಲೆ ನಡೆಸಿರುವುದಲ್ಲೆ ಅಪಹರಿಸಲು ಪ್ರಯತ್ನಿಸಿದ್ದರು.
ಘಟನೆಯಿಂದ ಗಾಯಗೊಂಡ ಮನ್ಸೂರ್ ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮನ್ಸೂರ್ ಅವರನ್ನು ದಲಿತ ಮುಖಂಡ ಲೋಕೇಶ್ ಕಂಚಿನಡ್ಕ ಅವರಿಗೆ ಜೀವಬೆದರಿಕೆಯೊಡ್ಡಿದ್ದ ಆರೋಪದಲ್ಲಿ ಬಂಧಿಸಲಾಗಿತ್ತು. ವಾರದ ಹಿಂದೆಯಷ್ಟೇ ನ್ಯಾಯಾಲಯದಿಂದ ಜಾಮೀನು ಪಡೆದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.