ಉಡುಪಿ: ಶಾಲೆಯಿಂದ ಬರುವ ಮಗನನ್ನು ಕರೆದುಕೊಂಡು ಹೋಗಲು ಕೊರ್ಗಿ ಕ್ರಾಸ್ ಬಳಿ ನಿಂತಿದ್ದ ಮಹಿಳೆಗೆ ಕಬ್ಬಿಣದ ರಾಡ್ನಿಂದ ಹಲ್ಲೆ ಮಾಡಿ ಚಿನ್ನಾಭರಣ ದರೋಡೆ ಮಾಡಿದ್ದ ಆರೋಪಿಯನ್ನು ಕುಂದಾಪುರ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ.ಪ್ರವೀಣ್ ಆರೋಪಿ
ಆಗಸ್ಟ್ 5ರಂದು ಕಾಡಿನಬೆಟ್ಟು ನಿವಾಸಿ ದೇವಕಿ ಪೂಜಾರ್ತಿ ಎಂಬುವರು ಶಾಲಾ ಬಸ್ನಲ್ಲಿ ಬರುವ ಮಗನನ್ನು ಮನೆಗೆ ಕರೆದೊಯ್ಯುವ ಸಲುವಾಗಿ ಕೊರ್ಗಿ ಕ್ರಾಸ್ ಬಳಿಯ ಕಾಡಿನಬೆಟ್ಟು ಎಂಬಲ್ಲಿ ನಿಂತಿದ್ದರು. ಈ ಸಂದರ್ಭ ಆಕೆಯ ಹಿಂದಿನಿಂದ ಬಂದ ಆರೋಪಿ ಪ್ರವೀಣ್ ಕಬ್ಬಿಣದ ರಾಡ್ನಿಂದ ತಲೆಯ ಭಾಗಕ್ಕೆ ಹೊಡೆದಿದ್ದಾನೆ. ಘಟನೆಯಿಂದ ಕುಸಿದುಬಿದ್ದಿದ್ದ ದೇವಕಿ ಅವರ ಕುತ್ತಿಗೆಯಿಂದ ಚಿನ್ನದ ಕರಿಮಣಿಸರ, ಕೈಯಲ್ಲಿದ್ದ ಬಳೆ ಹಾಗೂ ಉಂಗುರ ಸಹಿತ 1.60 ಲಕ್ಷ ರೂ ಮೌಲ್ಯದ ಚಿನ್ನಾಭರಣ ಸುಲಿಗೆ ಮಾಡಿ ಆತ ಬೈಕ್ನಲ್ಲಿ ಪರಾರಿಯಾಗಿದ್ದ.
ಪ್ರಕರಣ ದಾಖಲಿಸಿಕೊಂಡ ಕುಂದಾಪುರ ಗ್ರಾಮಾಂತರ ಠಾಣೆ ಪೊಲೀಸರು ಹಾಲಾಡಿ ಹಾಗೂ ಕುಂದಾಪುರ ಮುಖ್ಯರಸ್ತೆಯಲ್ಲಿ ಅಳವಿಡಿಸಿದ್ದ ಸಿಸಿಟಿವಿ ದೃಶ್ಯಾವಳಿ ಪರಿಶೀಲಿಸಿ ಬುಧವಾರ ರಾತ್ರಿ ಗಂಗೊಳ್ಳಿಯ ತ್ರಾಸಿ ಎಂಬಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ. ಕೃತ್ಯಕ್ಕೆ ಬಳಸಿರುವ ಬೈಕ್ ಹಾಗೂ ಚಿನ್ನಾಭರಣಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.