More

    ಮಾರ್ಗಸೂಚಿ ಅನ್ವಯ ಕೈಗಾರಿಕೆ ಆರಂಭಕ್ಕೆ ಅವಕಾಶ

    ಬೆಳಗಾವಿ: ಕೇಂದ್ರ ಸರ್ಕಾರ ಕೈಗೊಳ್ಳಲಿರುವ ತೀರ್ಮಾನ ಹಾಗೂ ಮಾರ್ಗಸೂಚಿ ಆಧರಿಸಿ ಮೇ 3ರ ಬಳಿಕ ಕೈಗಾರಿಕೆಗಳನ್ನು ಆರಂಭಿಸಲು ಅನುವು ಮಾಡಿಕೊಡಲಾಗುವುದು ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಭರವಸೆ ನೀಡಿದರು.

    ಬೆಳಗಾವಿ ಉದ್ಯಮಬಾಗದ ಫೌಂಡ್ರಿ ಕ್ಲಸ್ಟರ್ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಕೈಗಾರಿಕೋದ್ಯಮಿಗಳ ಸಭೆಯಲ್ಲಿ ಅವರು ಮಾತನಾಡಿದರು. ಮೇ 3ರ ಬಳಿಕ ಕೈಗಾರಿಕೆಗಳನ್ನು ಆರಂಭಿಸಲು ಅವಕಾಶ ನೀಡಬೇಕು ಎಂದು ಕೈಗಾರಿಕೋದ್ಯಮಿಗಳ ಮನವಿಗೆ ಸ್ಪಂದಿಸಿದ ಸಚಿವ ಅಂಗಡಿ, ಮುಂಬರುವ ದಿನಗಳಲ್ಲಿ ಕಾರ್ಮಿಕರು, ಗಾರಿಕೋದ್ಯಮಿಗಳು ಹಾಗೂ ಉತ್ಪಾದನೆ ಮೇಲೆ ಯಾವುದೇ ವ್ಯತಿರಿಕ್ತ ಪರಿಣಾಮ ಉಂಟಾಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದರು.

    ಕಚ್ಚಾವಸ್ತು ಪೂರೈಸಿ: ಕೈಗಾರಿಕೋದ್ಯಮಿಗಳು ಮಾತನಾಡಿ, ಕರೊನಾ ವೈರಸ್ ಭೀತಿಯಿಂದ ಕಾರ್ಮಿಕರು ತಮ್ಮ ಊರು ಹಾಗೂ ರಾಜ್ಯಗಳಿಗೆ ಹಿಂದಿರುಗುತ್ತಿದ್ದಾರೆ. ಎಲ್ಲ ಕಾರ್ಮಿಕರೂ ಊರಿಗೆ ತೆರಳಿದರೆ ಬರುವ ದಿನಗಳಲ್ಲಿ ತಕ್ಷಣ ಕೈಗಾರಿಕೆ ಆರಂಭಿಸುವುದು ಕಷ್ಟವಾಗುತ್ತದೆ. ಹಾಗಾಗಿ ಸೂಕ್ತ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಕೈಗಾರಿಕೆ ಆರಂಭಿಸಲು ಅವಕಾಶ ನೀಡಬೇಕು.

    ಸರ್ಕಾರದ ಮಾರ್ಗಸೂಚಿ ಪ್ರಕಾರ ಕೈಗಾರಿಕೆ ಆರಂಭಿಸಲು ತಾವು ಸಿದ್ಧರಿದ್ದು, ಕಾರ್ಮಿಕರಿಗೆ ಪಾಸ್ ಹಾಗೂ ಉದ್ಯಮಕ್ಕೆ ಅಗತ್ಯವಿರುವ ಕಚ್ಚಾ ವಸ್ತು ಪೂರೈಸಬೇಕು ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಅಂಗಡಿ, ಕರೊನಾ ಸೋಂಕು ಪತ್ತೆಯಾಗಿರುವ ಪ್ರದೇಶದಿಂದ ಕೈಗಾರಿಕಾ ವಲಯಗಳು ದೂರದಲ್ಲಿವೆ. ಹಾಗಾಗಿ ಕೈಗಾರಿಕೆಗಳು ಹಾಗೂ ಕಾರ್ಮಿಕ ಹಿತದೃಷ್ಟಿಯಿಂದ ಕೈಗಾರಿಕೆ ಆರಂಭಿಸಲು ಕ್ರಮ ಕೈಗೊಳ್ಳಲಾಗುವುದು.

    ಕಾರ್ಮಿಕರ ಆರೋಗ್ಯ, ಊಟ-ವಸತಿ ಮತ್ತು ಇತರೆ ಮೂಲಸೌಕರ್ಯ ಒದಗಿಸುವುದು ಆಯಾ ಕೈಗಾರಿಕೋದ್ಯಮಿಗಳ ಹೊಣೆಯಾಗಿರಲಿದೆ ಎಂದರು. ಶಾಸಕರಾದ ಅಭಯ ಪಾಟೀಲ, ಅನಿಲ ಬೆನಕೆ, ಬುಡಾ ಅಧ್ಯಕ್ಷ ಗೂಳಪ್ಪ ಹೊಸಮನಿ, ಜಿಲ್ಲಾ ಕೋವಿಡ್-19 ನೋಡಲ್ ಅಧಿಕಾರಿ ರಾಜೇಂದ್ರ ಚೋಳನ್, ಡಿಸಿ ಡಾ. ಎಸ್.ಬಿ. ಬೊಮ್ಮನಹಳ್ಳಿ, ಪೊಲೀಸ್ ಆಯುಕ್ತ ಬಿ.ಎಸ್. ಲೋಕೇಶಕುಮಾರ್, ಜಿಪಂ ಸಿಇಒ ಡಾ. ಕೆ.ವಿ. ರಾಜೇಂದ್ರ, ಎಸ್‌ಪಿ ಲಕ್ಷ್ಮಣ ನಿಂಬರಗಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts