ಮುಂಬೈ: ಸಣ್ಣ ಪುಟ್ಟ ವ್ಯಾಪಾರಿಗಳಿಗೆ ಬಿಡಿಗಾಸು ಕೂಡ ತುಂಬಾ ಮಹತ್ವದ್ದಾಗಿರುತ್ತದೆ. ಅದೇ ರೀತಿ 20 ರೂಪಾಯಿಗಾಗಿ ಜಗಳಕ್ಕೆ ನಿಂತ ತಳ್ಳು ಗಾಡಿ ಮಾಲೀಕನೊಬ್ಬ ದುರಂತ ಅಂತ್ಯ ಕಂಡಿರುವ ಘಟನೆ ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ಮೀರಾ ರಸ್ತೆಯಲ್ಲಿ 26 ವರ್ಷದ ವೀರೇಂದ್ರ ಯಾದವ್ ತಳ್ಳು ಗಾಡಿಯಲ್ಲಿ ಬೆಳಗ್ಗಿನ ತಿಂಡಿ ವ್ಯಾಪಾರ ಮಾಡುತ್ತಿದ್ದ. ಆತನಿಗೆ ಅದುವೇ ಜೀವನದ ಆಧಾರವಾಗಿತ್ತು. ಶುಕ್ರವಾರ ಬೆಳಗ್ಗೆ ಆತನ ಗಾಡಿಯ ಬಳಿ ಮೂವರು ತಿಂಡಿ ತಿನ್ನಲೆಂದು ಬಂದಿದ್ದಾರೆ. ಆಗ ವೀರೇಂದ್ರ “ನೀವು ನನಗೆ 20 ರೂಪಾಯಿ ಬಾಕಿ ಕೊಡುವುದಿದೆ” ಎಂದು ನೆನಪಿಸಿದ್ದಾನೆ. ಇದಕ್ಕೆ ಸಿಟ್ಟಿಗೆದ್ದ ಆ ಮೂವರು ಆತನೊಂದಿಗೆ ಜಗಳಕ್ಕೆ ನಿಂತಿದ್ದಾರೆ.
ಜಗಳ ತಾರಕಕ್ಕೇರಿದ್ದು, ಒಬ್ಬರನ್ನೊಬ್ಬರು ತಳ್ಳಾಡಿಕೊಳ್ಳಲು ಆರಂಭಿಸಿದ್ದಾರೆ. ಆ ಸಮಯದಲ್ಲಿ ಆ ಮೂವರಲ್ಲಿ ಒಬ್ಬ ವಿರೇಂದ್ರನನ್ನು ಜೋರಾಗಿ ತಳ್ಳಿದ್ದಾನೆ. ಇದರಿಂದಾಗಿ ಆತ ಹತ್ತಿರದ ಕಲ್ಲಿನ ಬಳಿ ಹೋಗಿ ಬಿದ್ದಿದ್ದಾನೆ. ತಲೆಗೆ ಬಲವಾಗಿ ಪೆಟ್ಟು ಬಿದ್ದಿದೆ. ತಕ್ಷಣ ಆತನನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆಯಾದರೂ ಆತ ಅಷ್ಟರೊಳಗೆ ಕೊನೆಯುಸಿರೆಳೆದಿದ್ದಾನೆ.
ವೀರೇಂದ್ರನ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಮೀರಾ ರಸ್ತೆಯ ನಯಾ ನಗರ ಪೊಲೀಸ್ ಠಾಣೆಯಲ್ಲಿ ಮೂವರು ಆರೋಪಿಗಳ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದೆ. ಮೀರಾ ಭಯಂದರ್-ವಾಸೈ ವಿರಾರ್ ಪೊಲೀಸರು ಆರೋಪಿಗಳನ್ನು ಪತ್ತೆ ಹಚ್ಚಲು ಶೋಧ ನಡೆಸಿದ್ದಾರೆ. (ಏಜೆನ್ಸೀಸ್)
ಯೂಟ್ಯೂಬ್ ಲೈವ್ನಲ್ಲೇ 1.5 ಲೀಟರ್ ವೋಡ್ಕಾ ಕುಡಿದ ಮಹಾಶಯ! ಮುಂದೇನಾಯ್ತು ಗೊತ್ತಾ?
ಡೆತ್ನೋಟ್ನಲ್ಲಿ ಹೀಗೇಕೆ ಬರೆದರು ಧರ್ಮೇಗೌಡ? ಪೊಲೀಸರೂ ಭೇದಿಸಲಾಗದ ರಹಸ್ಯವಿದು!