ಬೆಳಗಾವಿ: ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಅಧಿಕಾರಿಗಳೇ ಎಲ್ಲೆಂದರಲ್ಲಿ ವಾಹನ ಪಾರ್ಕಿಂಗ್ ಮಾಡುತ್ತಿರುವುದರಿಂದ ಸಂಚಾರ ದಟ್ಟಣೆ ಹೆಚ್ಚಾಗುತ್ತಿದೆ.
ಡಿಸಿ ಆವರಣದಲ್ಲಿ ಜಿಲ್ಲಾ ನ್ಯಾಯಾಲಯ, ವಿಭಾಗೀಯ ಆಯುಕ್ತರ ಕಚೇರಿ ಇದೆ. ಜತೆಗೆ ಜಿಲ್ಲಾ ಪಂಚಾಯಿತಿ, ಹಳೇ ತಹಸೀಲ್ದಾರ್ ಕಚೇರಿ, ಭೂ ಮಾಪನ ಇಲಾಖೆ, ಉಪವಿಭಾಗಾಧಿಕಾರಿ, ತಾಲೂಕು ಪಂಚಾಯಿತಿ, ಕಂದಾಯ ಇಲಾಖೆ, ನೋಂದಣಾಧಿಕಾರಿ ಕಚೇರಿ ಹಾಗೂ ಕೇಂದ್ರ ಗ್ರಂಥಾಲಯ ಸೇರಿ ಹಲವು ಇಲಾಖೆಗಳ ಕಚೇರಿಗಳು ಇಲ್ಲಿಯೇ ಕಾರ್ಯನಿರ್ವಹಿಸುತ್ತಿವೆ. ಲಾಕ್ಡೌನ್ ಸಡಿಲಿಕೆಯಿಂದ ಸಾರ್ವಜನಿಕರು ಸರ್ಕಾರಿ ಕಚೇರಿಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಆದರೆ, ಇಲ್ಲಿ ವಾಹನ ನಿಲುಗಡೆ ಮಾಡುತ್ತಿರುವುದರಿಂದ ಸಾರ್ವಜನಿಕರಿಗೆ ಕಿರಿಕಿರಿಯಾಗುತ್ತಿದೆ.
ನಿವಾಸಿಗರಿಗೂ ತೊಂದರೆ: ಪ್ರತಿದಿನ ವಿವಿಧ ಸಭೆಗಳಲ್ಲಿ ಪಾಲ್ಗೊಳ್ಳಲು ಜಿಲ್ಲಾಧಿಕಾರಿ ಕಚೇರಿಗೆ ಬರುವ ಸರ್ಕಾರಿ ಅಧಿಕಾರಿಗಳ ವಾಹನಗಳನ್ನು ನಿಗದಿತ ಸ್ಥಳದಲ್ಲಿ ಪಾರ್ಕ್ ಮಾಡುತ್ತಿಲ್ಲ. ಹೀಗಾಗಿ ಸಾರ್ವಜನಿಕರು ಹಾಗೂ ಕೆಲಸದ ನಿಮಿತ್ತ ಸರ್ಕಾರಿ ಕಚೇರಿಗೆ ಬರುವವರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಜಿಲ್ಲಾಧಿಕಾರಿ ಕಚೇರಿ ಸುತ್ತಮುತ್ತಲಿನ ವಿವಿಧ ರಸ್ತೆಗಳಲ್ಲಿ ವಾಹನ ಸಂಚಾರ ಹೆಚ್ಚಾಗಿರುತ್ತದೆ. ಡಿಸಿ ಕಚೇರಿಗೆ ಆಗಮಿಸುವ ವಿವಿಧ ಇಲಾಖೆ ಅಧಿಕಾರಿಗಳು ಪಾರ್ಕ್ಂಗ್ ಸ್ಥಳದಲ್ಲಿ ವಾಹನ ನಿಲುಗಡೆ ಮಾಡುತ್ತಿಲ್ಲ. ಇದರಿಂದ ಜಿಲ್ಲೆಯ ವಿವಿಧ ತಾಲೂಕುಗಳಿಂದ ಆಗಮಿಸುವ ಸಾರ್ವಜನಿಕರೂ ತೊಂದರೆ ಅನುಭವಿಸುತ್ತಿದ್ದಾರೆ. ಅಲ್ಲದೆ, ಡಿಸಿ ಆರಣದ ಬಳಿ ಇರುವ ಕಚೇರಿ ಗಲ್ಲಿ, ಚವಾಟ್ ಗಲ್ಲಿ, ಖಂಜರ್ ಗಲ್ಲಿ, ಖಡೇಬಜಾರ್, ಗಣಪತಿ ಗಲ್ಲಿ ನಿವಾಸಿಗಳಿಗೂ ತೊಂದರೆಯಾಗುತ್ತಿದೆ.
ಕಂಡೂ ಕಾಣದಂತೆ ಸುಮ್ಮನಿರುವ ಪೊಲೀಸ್ ಅಧಿಕಾರಿಗಳು
ಜನಸಾಮಾನ್ಯರು ನಿಗದಿತ ಸ್ಥಳ ಬಿಟ್ಟು ವಾಹನ ಪಾರ್ಕ್ ಮಾಡಿದರೆ ಪೊಲೀಸರು ಅವರ ವಾಹನ ಒಯ್ಯುತ್ತಾರೆ. ಆದರೆ, ಪಾರ್ಕಿಂಗ್ ನಿಯಮ ಉಲ್ಲಂಘಿಸುವ ಅಧಿಕಾರಿಗಳ ವಾಹನಗಳನ್ನು ಏಕೆ ಒಯ್ಯುವುದಿಲ್ಲ? ಜನಸಾಮಾನ್ಯರಿಗೊಂದು ನಿಯಮ, ಅಧಿಕಾರಗೊಂದು ನಿಯಮವೇ ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ. ಇನ್ನಾದರೂ ಅಧಿಕಾರಿಗಳು ಪಾರ್ಕಿಂಗ್ ನಿಯಮ ಪಾಲಿಸಿ ತಮ್ಮ ವಾಹನಗಳನ್ನು ನಿಗದಿತ ಸ್ಥಳದಲ್ಲೇ ನಿಲುಗಡೆ ಮಾಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.