ಕಂಪ್ಲಿ: ತಾಲೂಕಿನ ಕಣ್ವಿ ತಿಮ್ಮಲಾಪುರದ 7ನೇ ವಾರ್ಡ್ ಕಡೆಮನಿ ಏರಿಯಾದ ಡಾ.ಧನಂಜಯ ಮನೆಯಿಂದ ಶೆಟ್ರು ಮನೆವರಿಗಿನ ರಸ್ತೆ ತಗ್ಗು-ಗುಂಡಿಗಳು ನಿರ್ಮಾಣವಾಗಿ ಸಂಪೂರ್ಣ ಹದಗೆಟ್ಟಿದ್ದು, ಜನರ ಓಡಾಟಕ್ಕೆ ಸಮಸ್ಯೆಯಾಗಿದೆ.
ಚರಂಡಿ ನೀರು ರಸ್ತೆ ಮೇಲೆ ಹರಿಯುತ್ತಿದ್ದು, ಮಕ್ಕಳು, ವೃದ್ಧರು, ಮಹಿಳೆಯರು ಕಾಲುಜಾರಿ ಬೀಳುತ್ತಿದ್ದಾರೆ. ಜತೆಗೆ ಸೊಳ್ಳೆ, ನೊಣ, ಕ್ರಿಮಿಕೀಟಗಳ ಬಾಧೆ ಹೆಚ್ಚಿದೆ. ಜನರ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಗ್ರಾಪಂ ಅಧಿಕಾರಿಗಳಿಗೆ ತಿಳಿಸಿದರೂ ರಸ್ತೆ ದುರಸ್ತಿಗೊಳಿಸುತ್ತಿಲ್ಲ.
ರಸ್ತೆ ಸರಿಪಡಿಸಲು ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ನಿವಾಸಿಗಳಾದ ಚಿನ್ನೂರು ಚಂದ್ರಶೇಖರಗೌಡ, ದೊಡ್ಡಬಸಮ್ಮ, ಗೋವಿಂದಮ್ಮ, ಇಂದಿರಮ್ಮ, ಮರೇಗೌಡ, ನೀಲಕಂಠಪ್ಪ, ಬಿ.ರಾಜಪ್ಪ, ಮಂಜುನಾಥ ಒತ್ತಾಯಿಸಿದ್ದಾರೆ. ಪಿಡಿಒ ಶಿಲ್ಪಾರಾಣಿ ಪ್ರತಿಕ್ರಿಯಿಸಿ, ರಸ್ತೆ ದುರಸ್ತಿ ಕಾಮಗಾರಿಗೆ ಕ್ರಮವಹಿಸುವುದಾಗಿ ಭರವಸೆ ನೀಡಿದರು.