ರೇವತಗಾಂವ: ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ನಡೆಸಿದ ಗ್ರಾಮ ವಾಸ್ತವ್ಯ ಮಾದರಿಯಲ್ಲೇ ಈಗ ಜಿಲ್ಲೆಯಲ್ಲೇ ಮೊದಲ ಬಾರಿ ಜಿಪಂ ಅಧ್ಯಕ್ಷೆ ಸುಜಾತಾ ಕಳ್ಳಿಮನಿ ಅವರು ಗ್ರಾಮ ವಾಸ್ತವ್ಯಕ್ಕೆ ಅಣಿಯಾಗಿದ್ದಾರೆ.
ಭೀಮಾ ತೀರದ ಪ್ರವಾಹ ಸಂತ್ರಸ್ತರ ನೋವು-ನಲಿವು, ಸಂಕಷ್ಟಗಳೇನು? ಎಂಬುದನ್ನು ಅರಿಯುವ ಮೂಲಕ, ಗ್ರಾಮಗಳ ಸ್ಥಿತಿಗತಿ ಸುಧಾರಣೆ ಪರಮೋದ್ದೇಶದೊಂದಿಗೆ ನ.2 ರಂದು ಸಂಜೆ ಉಮರಜ ಗ್ರಾಮದಲ್ಲಿ ಒಂದು ದಿನದ ಗ್ರಾಮ ವಾಸ್ತವ್ಯ ಮಾಡಲಿದ್ದಾರೆ. ತಾಲೂಕು ಮಟ್ಟದ ಎಲ್ಲ ಅಧಿಕಾರಿಗಳು ಅವರ ಜತೆಗಿರುವರು.
ಉಮರಜದ ಪ್ರಮುಖ ಬೀದಿಗಳನ್ನು ಸ್ವಚ್ಛಗೊಳಿಸಿ ಬೀದಿ ದೀಪ ಅಳವಡಿಸಲಾಯಿತು. ವಾಸ್ತವ್ಯ ಮಾಡಲಿರುವ ಉಮರಜದ ಸರ್ಕಾರಿ ಪ್ರೌಢಶಾಲೆ ಆವರಣ ಶುಚಿಗೊಳಿಸುತ್ತಿದ್ದಾರೆ. ಅಲ್ಲದೆ, ಕುಡಿಯುವ ನೀರು, ವಿದ್ಯುತ್ ದೀಪ, ಶೌಚಗೃಹ, ಕೊಠಡಿಗಳನ್ನು ಸ್ವಚ್ಛಗೊಳಿಸುವ ಕಾರ್ಯದಲ್ಲಿ ಸ್ಥಳೀಯ ಮಟ್ಟದ ಅಧಿಕಾರಿಗಳು ಭರ್ಜರಿ ತಯಾರಿ ನಡೆಸುತ್ತಿದ್ದಾರೆ.
ಸೋಮವಾರ ಸಂಜೆ 5 ಗಂಟೆಗೆ ಉಮರಜದ ಪ್ರವಾಹಕ್ಕೊಳಗಾದ ಶ್ರೀ ರೇವಣಸಿದ್ಧೇಶ್ವರ ದೇವಾಸ್ಥಾನಕ್ಕೆ ಭೇಟಿ ನೀಡಿ ನಂತರ ಶಾಲೆ ಆವರಣದಲ್ಲಿ ಹಮ್ಮಿಕೊಳ್ಳಲಾಗುವ ಸನ್ಮಾನ ಹಾಗೂ ನೆರೆ ಸಂತ್ರಸ್ತರೊಂದಿಗೆ ಸಂವಾದ ನಡೆಸುವರು. ನಂತರ ನೆರೆ ಸಂತ್ರಸ್ತರ ಮನೆಯಲ್ಲಿ ವಾಸ್ತವ್ಯ ಹೂಡುವ ಸಾಧ್ಯತೆ ಇದೆ.
ತಹಸೀಲ್ದಾರ್ ಭೇಟಿ
ಉಮರಜ ಗ್ರಾಮದಲ್ಲಿ ಜಿಪಂ ಅಧ್ಯಕ್ಷರು ವಾಸ್ತವ್ಯ ಮಾಡಲಿರುವ ಸರ್ಕಾರಿ ಪ್ರೌಢಶಾಲೆಗೆ ಚಡಚಣ ತಹಸೀಲ್ದಾರ್ ಸುರೇಶ ಚವಲರ, ಕಂದಾಯ ನಿರೀಕ್ಷಕ ಪಿ.ಜೆ. ಕೊಡಹೊನ್ನ ಭೇಟಿ ನೀಡಿ ಕೊಠಡಿ ಪರಿಶೀಲಿಸಿದರು.
ಪಿಡಿಒ ಎಸ್.ಆರ್. ಕೊಟ್ಟಲಗಿ ಮಾತನಾಡಿ, ವಾಸ್ತವ್ಯ ಮಾಡಲಿರುವ ಎಲ್ಲ ಅಧಿಕಾರಿಗಳ ಕೊಠಡಿಗಳಿಗೆ ಸ್ಯಾನಿಟೈಸರ್ ಸಿಂಪಡಣೆ ಮಾಡಲಾಗುವುದು. ಕಾರ್ಯಕ್ರಮದಲ್ಲಿ ಭಾಗಿಯಾಗುವ ಪ್ರತಿಯೊಬ್ಬರೂ ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ. ಎಲ್ಲ ರೀತಿಯ ಮುನ್ನೆಚ್ಚರಿಕೆಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.