More

    VIDEO | ಐಪಿಎಲ್​ನಲ್ಲಿ ಕಣಕ್ಕಿಳಿಯಲು ಕನ್ನಡಿಗರು ಸಜ್ಜು

    ಬೆಂಗಳೂರು: ಐಪಿಎಲ್​ 13ನೇ ಆವೃತ್ತಿಯನ್ನು ಅರಬ್​ ರಾಷ್ಟ್ರ ಯುಎಇಯಲ್ಲಿ ಆಯೋಜಿಸಲು ಬಿಸಿಸಿಐ ಸಕಲ ಸಿದ್ಧತೆಗಳನ್ನು ನಡೆಸುತ್ತಿರುವ ನಡುವೆ ಕರ್ನಾಟಕದ ಕ್ರಿಕೆಟಿಗರು ಕೂಡ ಟೂರ್ನಿಯಲ್ಲಿ ಕಣಕ್ಕಿಳಿಯಲು ಸಜ್ಜಾಗುತ್ತಿದ್ದಾರೆ. ಈ ಬಾರಿ ಕಿಂಗ್ಸ್​ ಇಲೆವೆನ್​ ತಂಡವನ್ನು ಮುನ್ನಡೆಸಲಿರುವ ಕೆಎಲ್​ ರಾಹುಲ್​, ತಂಡದ ಬ್ಯಾಟ್ಸ್​ಮನ್​ಗಳಾದ ಮಯಾಂಕ್​ ಅಗರ್ವಾಲ್​, ಕರುಣ್​ ನಾಯರ್​, ಈ ಬಾರಿ ರಾಜಸ್ಥಾನ ರಾಯಲ್ಸ್​ ತಂಡವನ್ನು ಪ್ರತಿನಿಧಿಸಲಿರುವ ರಾಬಿನ್​ ಉತ್ತಪ್ಪ, ಆರ್​ಸಿಬಿ ತಂಡದ ಪರ ಕಣಕ್ಕಿಳಿಯಲಿರುವ ದೇವದತ್​ ಪಡಿಕಲ್​ ಮುಂತಾದ ಆಟಗಾರರು ಐಪಿಎಲ್​ ಟೂರ್ನಿಯಲ್ಲಿ ಕಣಕ್ಕಿಳಿಯಲು ಸಿದ್ಧತೆ ನಡೆಸುತ್ತಿರುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

    ಸ್ಟಾರ್​ ಬ್ಯಾಟ್ಸ್​ಮನ್​ ಕೆಎಲ್​ ರಾಹುಲ್​ ಸೋಮವಾರ ಬ್ಯಾಟಿಂಗ್​ ಅಭ್ಯಾಸದ ವಿಡಿಯೋವನ್ನು ಟ್ವಿಟರ್​ನಲ್ಲಿ ಪ್ರಕಟಿಸಿದ್ದು, ‘ನನ್ನ ಕಿವಿಗೆ ಸಂಗೀತ ಕೇಳಿಸುತ್ತಿದೆ’ ಎಂದು ಬರೆದುಕೊಂಡಿದ್ದಾರೆ. ಅವರು ಇದೇ ಮೊದಲ ಬಾರಿಗೆ ಐಪಿಎಲ್​ನಲ್ಲಿ ತಂಡವೊಂದರ ನಾಯಕರಾಗಿ ಕಣಕ್ಕಿಳಿಯಲು ಸಜ್ಜಾಗಿದ್ದಾರೆ. ಅವರಿಗೆ ಕರ್ನಾಟಕದವರೇ ಆದ ಸ್ಪಿನ್​ ದಿಗ್ಗಜ ಅನಿಲ್​ ಕುಂಬ್ಳೆ ಅವರು ಕೋಚ್​ ಆಗಿ ಸಾಥ್​ ನೀಡಲಿದ್ದಾರೆ. 2018ರ ಐಪಿಎಲ್​ ಹರಾಜಿನಲ್ಲಿ ಕೆಎಲ್​ ರಾಹುಲ್ ಬರೋಬ್ಬರಿ 11 ಕೋಟಿ ರೂ. ಮೊತ್ತಕ್ಕೆ ಕಿಂಗ್ಸ್​ ಇಲೆವೆನ್​ ಪಂಜಾಬ್​ ತಂಡ ಸೇರಿಕೊಂಡಿದ್ದರು.

    ಕಿಂಗ್ಸ್​ ಇಲೆವೆನ್​ ಪಂಜಾಬ್​ ತಂಡ ಕರ್ನಾಟಕದ ಒಟ್ಟು 5 ಆಟಗಾರರನ್ನು ಒಳಗೊಂಡಿದೆ. ಐಪಿಎಲ್​ ಟೂರ್ನಿಯಲ್ಲಿ ಈ ಬಾರಿ ಒಟ್ಟು 12 ಕನ್ನಡಿಗರು ಆಡಲಿದ್ದು, ಈ ಪೈಕಿ 5 ಆಟಗಾರರು ಕಿಂಗ್ಸ್​ ಇಲೆವೆನ್​ ಪಂಜಾಬ್​ ತಂಡದಲ್ಲಿರುವುದು ವಿಶೇಷ. ಮಯಾಂಕ್​ ಅಗರ್ವಾಲ್​, ಕರುಣ್​ ನಾಯರ್​, ಆಲ್ರೌಂಡರ್​ ಕೆ. ಗೌತಮ್​ ಮತ್ತು ಸ್ಪಿನ್ನರ್​ ಜೆ. ಸುಚಿತ್​ ಕಿಂಗ್ಸ್​ ಇಲೆವೆನ್​ ಪಂಜಾಬ್​ ತಂಡದಲ್ಲಿರುವ ಇತರ ಕನ್ನಡಿಗರು.

    ಇದನ್ನೂ ಓದಿ: VIDEO | ಜಾಂಟಿ ರೋಡ್ಸ್​ಗೆ ಪೈಪೋಟಿ ನೀಡುವ ಫೀಲ್ಡರ್​ ಪತ್ತೆ ಹಚ್ಚಿದ ಸಚಿನ್​ ತೆಂಡುಲ್ಕರ್​!

    ಬ್ಯಾಟ್ಸ್​ಮನ್​ ಮಯಾಂಕ್​ ಅಗರ್ವಾಲ್​ ಕೂಡ ಈಗಾಗಲೆ ಐಪಿಎಲ್​ನಲ್ಲಿ ಆಡುವ ಬಗ್ಗೆ ಕಾತರ ಹಂಚಿಕೊಂಡಿದ್ದು, ಐಪಿಎಲ್​ನಲ್ಲಿ ಆಡಲು ಎಲ್ಲ ರೀತಿಯಲ್ಲೂ ಸಜ್ಜಾಗಿದ್ದೇನೆ ಎಂದು ಈಗಾಗಲೆ ಇನ್​ಸ್ಟಾಗ್ರಾಂನಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ. ಮತ್ತೋರ್ವ ಬ್ಯಾಟ್ಸ್​ಮನ್​ ಕರುಣ್​ ನಾಯರ್​ ಕೂಡ ಐಪಿಎಲ್​ ಟೂರ್ನಿಗೆ ಸಜ್ಜಾಗುತ್ತಿರುವ ಬಗ್ಗೆ ಟ್ವಿಟರ್​ನಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ.

    ಕೆಕೆಆರ್​ ತಂಡದಿಂದ ಈ ಬಾರಿ ರಾಜಸ್ಥಾನ ರಾಯಲ್ಸ್​ ತಂಡಕ್ಕೆ ಸೇರ್ಪಡೆಗೊಂಡಿರುವ ರಾಬಿನ್​ ಉತ್ತಪ್ಪ ಕೂಡ ಬೆಂಗಳೂರಿನಲ್ಲಿ ಮಳೆಯಿಂದಾಗಿ ಒಳಾಂಗಣ ಅಭ್ಯಾಸ ಆರಂಭಿಸಿದ್ದು, ಇದರ ವಿಡಿಯೋವನ್ನು ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಕಳೆದ ದೇಶೀಯ ಕ್ರಿಕೆಟ್​ ಋತುವಿನಲ್ಲಿ ರನ್​ಪ್ರವಾಹ ಹರಿಸಿ ಗಮನ ಸೆಳೆದಿದ್ದ ಯುವ ಎಡಗೈ ಬ್ಯಾಟ್ಸ್​ಮನ್​ ದೇವದತ್​ ಪಡಿಕಲ್​ ಈ ಬಾರಿ ಆರ್​ಸಿಬಿ ಪರ ಮಿಂಚುವ ಸಿದ್ಧತೆಯಲ್ಲಿದ್ದು, ಯುಎಇಯಲ್ಲಿ ಐಪಿಎಲ್​ ಟೂರ್ನಿ ಆಡಲು ಕಾತರದಿಂದ ಇರುವ ಬಗ್ಗೆ ಇನ್​ಸ್ಟಾಗ್ರಾಂನಲ್ಲಿ ಸಂಭ್ರಮ ವ್ಯಕ್ತಪಡಿಸಿದ್ದಾರೆ. ಅವರು ಆರ್​ಸಿಬಿ ಕಿಟ್​ನೊಂದಿಗೆ ಬ್ಯಾಟಿಂಗ್​ ಅಭ್ಯಾಸ ನಡೆಸುತ್ತಿರುವ ಚಿತ್ರವನ್ನು ಪ್ರಕಟಿಸಿದ್ದಾರೆ. ಮತ್ತೋರ್ವ ಕನ್ನಡಿಗ ಪವನ್​ ದೇಶಪಾಂಡೆ ಕೂಡ ಈ ಬಾರಿ ಆರ್​ಸಿಬಿ ಪರ ಆಡಲಿದ್ದಾರೆ.

    ಮನೀಷ್​ ಪಾಂಡೆ (ಸನ್​ರೈಸರ್ಸ್), ಪ್ರಸಿದ್ಧಕೃಷ್ಣ (ಕೆಕೆಆರ್​), ಶ್ರೇಯಸ್​ ಗೋಪಾಲ್​ (ರಾಜಸ್ಥಾನ)ಮತ್ತು ಅನಿರುದ್ಧ ಜೋಷಿ (ರಾಜಸ್ಥಾನ) ಈ ಬಾರಿ ಐಪಿಎಲ್​ನಲ್ಲಿ ಕಣಕ್ಕಿಳಿಯಲಿರುವ ಇತರ ಕನ್ನಡಿಗರಾಗಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts