ಹೊಸದುರ್ಗ: ಉಪ್ಪಾರ ಸಮುದಾಯಕ್ಕೆ ಎಸ್ಟಿ ಮೀಸಲಾತಿ ಕಲ್ಪಿಸುವಂತೆ ಆಗ್ರಹಿಸಿ ಮೇ ತಿಂಗಳಿನಲ್ಲಿ ಭಗೀರಥ ಮಠದಿಂದ ಬೆಂಗಳೂರಿಗೆ ಪಾದಯಾತ್ರೆ ನಡೆಸಲಾಗುವುದು ಎಂದು ಶ್ರೀ ಪುರುಷೋತ್ತಮಾನಂದಪುರಿ ಸ್ವಾಮೀಜಿ ತಿಳಿಸಿದರು.
ತಾಲೂಕಿನ ಬ್ರಹ್ಮವಿದ್ಯಾನಗರದ ಭಗೀರಥ ಮಠದಲ್ಲಿ ಸೋಮವಾರ ಸಂಜೆ ಆಯೋಜಿಸಿದ್ದ ಉಪ್ಪಾರ ಸಮುದಾಯದ ಕುಲಶಾಸ್ತ್ರೀಯ ಅಧ್ಯಯನ ಕಾರ್ಯಾಗಾರದ ಸಮಾರೋಪದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಹಂಪಿಯ ಕನ್ನಡ ವಿವಿ ಯೋಜನಾ ನಿರ್ದೇಶಕ, ಉಪ್ಪಾರ ಕುಲಶಾಸ್ತ್ರಿಯ ಅಧ್ಯಯನ ತಂಡದ ಮುಖ್ಯಸ್ಥ ಪ್ರೊ.ಕೆ.ಎಂ.ಮೈತ್ರಿ ನೇತೃತ್ವದಲ್ಲಿ ಐದು ದಿನಗಳಿಂದ ಮಠದಲ್ಲಿ ಅಧ್ಯಯನ ಕಾರ್ಯಾಗಾರ ನಡೆದಿದ್ದು, ಕುಲಶಾಸ್ತ್ರೀಯ ಅಧ್ಯಯನಕ್ಕೆ ಅಧಿಕೃತ ಚಾಲನೆ ದೊರೆತಿದೆ ಎಂದರು.
ರಾಜ್ಯ ಉಪ್ಪಾರ ಸಮಾಜದ ಅಧ್ಯಕ್ಷ, ಶಾಸಕ ಸಿ.ಪುಟ್ಟರಂಗಶೆಟ್ಟಿ ಮಾತನಾಡಿ, ಉಪ್ಪಾರ ಸಮುದಾಯ ಸಂಘಟನೆ ಕೊರತೆಯಿಂದ ಸರ್ಕಾರದ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುವಲ್ಲಿ ವಿಫಲವಾಗಿದೆ ಎಂದು ಬೇಸರಿಸಿದರು.
ಶಾಸಕ ಗೂಳಿಹಟ್ಟಿ ಡಿ.ಶೇಖರ್, ತಾಪಂ ಸದಸ್ಯ ಮಲ್ಲಿಕಾರ್ಜುನ್, ಉಪ್ಪಾರ ಸಮುದಾಯದ ತಾಲೂಕಾಧ್ಯಕ್ಷ ಡಿ.ಮಂಜುನಾಥ್, ಭಗೀರಥ ಬ್ಯಾಂಕ್ ಅಧ್ಯಕ್ಷ ಮಲ್ಲೇಶಪ್ಪ, ಗುರುಮೂರ್ತಿ ಮತ್ತಿತರಿದ್ದರು.