ಸಕಲೇಶಪುರ: ತಾಲೂಕಿನಲ್ಲಿ ಸಂಚರಿಸಲಿರುವ ಸಂವಿಧಾನ ಪೀಠಿಕೆ ಜಾಥಾಕ್ಕೆ ತಾಲೂಕಿನ ಎಲ್ಲ ಗಾಮ ಪಂಚಾಯಿತಿಗಳು ಆದ್ದೂರಿ ಸ್ವಾಗತ ಕೋರುವಂತೆ ಶಾಸಕ ಸಿಮೆಂಟ್ ಮಂಜು ಸೂಚಿಸಿದರು.
ಪಟ್ಟಣದ ತಾಲೂಕು ಪಂಚಾಯಿತಿ ಸಂಭಾಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಸಂವಿಧಾನ ಪೀಠಿಕೆ ಜಾಥಾದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ತಾಲೂಕಿನಲ್ಲಿ ಫೆ. 6ರಿಂದ 11ರವರೆಗೆ ಜಾಥಾ ಸಂಚರಿಸಲಿದ್ದು, ತಾಲೂಕಿನ ಎಲ್ಲ ಗ್ರಾ.ಪಂ.ಗಳಲ್ಲಿ ಜಾಥಾಕ್ಕೆ ಸಕಲ ಗೌರವಗಳೊಂದಿಗೆ ಸ್ವಾಗತ ಕೋರಬೇಕು. ತಾಲೂಕಿನಲ್ಲಿ ಐದು ದಿನಗಳ ಕಾಲ ಸಂಚರಿಸಲಿರುವ ಜಾಥಾ ಪ್ರತಿ ದಿನ ನಾಲ್ಕರಿಂದ ಐದು ಗ್ರಾ.ಪಂ.ಗಳಲ್ಲಿ ಸಂಚರಿಸಲಿದೆ. ಅಂತಿಮ ದಿನ ಪಟ್ಟಣದ ಹಳೇ ತಾಲೂಕು ಕಚೇರಿ ಆವರಣದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಕಾರ್ಯಕ್ರಮ ಸಹ ಅದ್ದೂರಿಯಾಗಿ ಆಯೋಜನೆ ಮಾಡಬೇಕು ಎಂದು ತಾಲೂಕು ಆಡಳಿತಕ್ಕೆ ನಿರ್ದೇಶನ ನೀಡಿದರು.
ದಲಿತ ಮುಖಂಡರಿಂದ ಸಭೆ ಬಹಿಷ್ಕಾರ: ಪೂರ್ವಬಾವಿ ಸಭೆಗೆ ಶಾಸಕ ಸಿಮೆಂಟ್ ಮಂಜು ವಿಳಂಬವಾಗಿ ಆಗಮಿಸಿದರು ಎಂಬ ಕಾರಣ ನೀಡಿ ಶಾಸಕರು ಸಭೆಗೆ ಆಗಮಿಸಿದ ವೇಳೆ ದಲಿತ ಮುಖಂಡರು ಸಭೆ ಬಹಿಷ್ಕರಿಸಿ ಹೊರನಡೆದರು.
ಪೂರ್ವಭಾವಿ ಸಭೆಯಲ್ಲಿ ಡಿವೈಎಸ್ಪಿ ಪ್ರಮೋದ್ ಜೈನ್, ತಾಪಂ ಇಒ ರಾಮಕೃಷ್ಣ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಆನಂದಸ್ವಾಮಿ ಮುಂತಾದವರಿದ್ದರು.