ಗದಗ: ಲೋಕ ಕಲ್ಯಾಣ ಮಾಡುವ ಗುರಿ ಹೊಂದಿದ್ದ ಮಹಾತ್ಮರಲ್ಲಿ ವೀರಶೈವ ಧರ್ಮ ಸ್ಥಾಪನಾಚಾರ್ಯ ಜಗದ್ಗುರು ರೇಣುಕಾಚಾರ್ಯರೂ ಒಬ್ಬರಾಗಿದ್ದರು ಎಂದು ಗದುಗಿನ ರೇಣುಕಾ ಮಂದಿರದ ಚಂದ್ರಶೇಖರ ದೇವರು ಅಭಿಪ್ರಾಯಪಟ್ಟರು.
ಅಡವೀಂದ್ರಸ್ವಾಮಿ ಮಠದಲ್ಲಿ ನಡೆದ ಮಾಸಿಕ ಶಿವಾನುಭವ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದ ಅವರು ಪ್ರಾಚೀನ ಕಾಲದಿಂದ ಹಿಡಿದು ಇಂದಿನವರೆಗೂ ಆಗಿಹೋದ ಮಹಾತ್ಮರ ಜೀವನ ಅವಲೋಕಿಸಿದಾಗ ಅವರ ಪರಮಗುರಿ ಲೋಕಕಲ್ಯಾಣ ಮಾಡುವದಾಗಿತ್ತು. ನಮ್ಮ ಬದುಕು ಲೋಕಕಲ್ಯಾಣಕ್ಕೆ ಅರ್ಪಿತ ಎಂಬ ತತ್ವದೊಂದಿಗೆ ಸಮಾಜಮುಖಿಯಾಗಿ ಕಾರ್ಯ ಮಾಡಿದ್ದು ಕಟು ಸತ್ಯ ಎಂಬುದು ಆಧ್ಯಾತ್ಮ ತಿಳಿಸುತ್ತದೆ ಎಂದರು.
ಧರ್ಮದರ್ಶಿ ಮಹೇಶ್ವರ ಸ್ವಾಮಿಗಳು ಎಸ್.ಹೊಸಳ್ಳಿಮಠ ಮಾತನಾಡಿ ಶಿವನ ರೂಪಧರಿಸಿ ಧರೆಗೆ ಅವತರಿಸಿ ಮನುಕುಲವನ್ನು ಉದ್ಧರಿಸಿದ ಮಹಾನ್ಶಕ್ತಿ ಜಗದ್ಗುರು ರೇಣುಕಾಚಾರ್ಯರಾಗಿದ್ದರು ಎಂದರು. ಮೃತ್ಯುಂಜಯ ಹಿರೇಮಠ ಮತ್ತು ಸಂಗಡಿಗರಿಂದ ಸಂಗೀತ ಜರುಗಿತು.
ವಿಕಲಚೇತನ ಮಕ್ಕಳ ಕ್ಷೇತ್ರದಲ್ಲಿ ಗಣನೀಯ ಸೇವೆಗೈದು ರಾಜ್ಯಮಟ್ಟದ ಪ್ರಶಸ್ತಿಗೆ ಭಾಜನರಾದ ಗದಗ ಬಿ.ಇ.ಓ ಕಾರ್ಯಾಲಯದ ಸಂಪನ್ಮೂಲ ವ್ಯಕ್ತಿ ಶ್ರೀಮತಿ ಕೆ.ಎಸ್.ಬೇಲೇರಿ ಅವರಿಗೆ ಗುರುರಕ್ಷೆಗೆ ಸನ್ಮಾನ ಜರುಗಿತು. ಸನ್ಮಾನಕ್ಕೆ ಉತ್ತರವಾಗಿ ಮಾತನಾಡಿದ ಅವರು ವಿಕಲಚೇತನರನ್ನು ಪ್ರೀತಿ ಗೌರವದಿಂದ ಕಾಣಬೇಕು, ಅವರಲ್ಲಿರುವ ಅದಮ್ಯ ಚೈತನ್ಯ ಸಾಹಸ ಮನೋಭಾವನೆಗೆ ಸ್ಪೂರ್ತಿ ನೀಡಬೇಕೆಂದರು.
ಬಿ.ಬಿ.ಪಾಟೀಲ ಸ್ವಾಗತಿಸಿದರು ಬಿ.ಎನ್.ಬಂಡಿ ಪರಿಚಯಿಸಿದರು, ವ್ಹಿ.ಎಂ.ಕುಂದ್ರಾಳಹಿರೇಮಠ ನಿರೂಪಿಸಿದರು. ಪ್ರಕಾಶ ಬಾಕಳೆ, ರಾಚಪ್ಪ ಕಾಳಗಿ, ವಿಶ್ವನಾಥ ಅಂಗಡಿ, ಎಸ್.ಎಸ್.ಸಜ್ಜನರ, ಯು.ಬಿ.ಭೂಸನೂರಮಠ, ಪ್ರಕಾಶ ಅಣ್ಣಿಗೇರಿ, ವೀರೇಶ ಹೊಸಳ್ಳಿಮಠ ಹಾಗೂ ಸದ್ಭಕ್ತರು ಪಾಲ್ಗೋಂಡಿದ್ದರು.