ನವದೆಹಲಿ : ಭಾರತದಲ್ಲಿ ಕರೊನಾ ಚಿಕಿತ್ಸೆಯಲ್ಲಿ ಬಳಸಲಾಗುವ ರೆಮ್ಡೆಸಿವಿರ್ ಆ್ಯಂಟಿವೈರಲ್ ಔಷಧಿಯ ಉತ್ಪಾದನೆಯನ್ನು 10 ಪಟ್ಟು ಹೆಚ್ಚಿಸಲಾಗಿದೆ. ಕಳೆದ ಏಪ್ರಿಲ್ 12 ರಂದು ದಿನವೊಂದಕ್ಕೆ 33,000 ವಯಲ್ ಔಷಧಿ ಉತ್ಪಾದಿಸಲ್ಪಡುತ್ತಿತ್ತು. ಅದೇ ಇಂದು ದಿನಕ್ಕೆ 3,50,000 ವಯಲ್ಗಳನ್ನು ಉತ್ಪಾದಿಸಲಾಗುತ್ತಿದೆ ಎಂದು ರಾಸಾಯನಿಕ ಮತ್ತು ರಸಗೊಬ್ಬರಗಳ ಸಚಿವ ಮನಸೂಖ್ ಮಾಂಡವೀಯ ಹೇಳಿದ್ದಾರೆ.
ಏಪ್ರಿಲ್ ತಿಂಗಳಲ್ಲಿ 10 ಲಕ್ಷ ವಯಲ್ಗಳು ಉತ್ಪಾದನೆಯಾಗಿದ್ದರೆ, ಮೇ ತಿಂಗಳಲ್ಲಿ 1 ಕೋಟಿ ವಯಲ್ಗಳ ಉತ್ಪಾದನೆ ನಡೆದಿದೆ. ರೆಮ್ಡೆಸಿವಿರ್ ಉತ್ಪಾದನಾ ಘಟಕಗಳ ಸಂಖ್ಯೆಯನ್ನೂ ಸರ್ಕಾರ ಒಂದು ತಿಂಗಳಲ್ಲಿ 20 ರಿಂದ 60 ಕ್ಕೆ ಹೆಚ್ಚಿಸಿದೆ. ಈಗ ಬೇಡಿಕೆಗಿಂತ ಬಹುಪಾಲು ಹೆಚ್ಚು ಪೂರೈಕೆಯಾಗುತ್ತಿರುವುದರಿಂದ ದೇಶದಲ್ಲಿ ಸಾಕಷ್ಟು ರೆಮ್ಡೆಸಿವಿರ್ ಲಭ್ಯವಿದೆ ಎಂದು ಮಾಂಡವೀಯ ತಿಳಿಸಿದ್ದಾರೆ.
ಇದನ್ನೂ ಓದಿ: ಜೂ.15ಕ್ಕೆ ಅನ್ನದಾತರ ಕೈಗೆಟುಕಲಿದೆ ನ್ಯಾನೋ ಗೊಬ್ಬರ
ಕೇಂದ್ರದಿಂದ ಹಂಚಿಕೆ ಇಲ್ಲ : ಪೂರೈಕೆಯಲ್ಲಿ ಕೊರತೆಯಿಲ್ಲದ ಕಾರಣಕ್ಕೆ ಕೇಂದ್ರ ಸರ್ಕಾರದಿಂದ ರಾಜ್ಯಗಳಿಗೆ ರೆಮ್ಡೆಸಿವಿರ್ನ ಹಂಚಿಕೆ ಮಾಡುವುದನ್ನು ನಿಲ್ಲಿಸಲು ನಿರ್ಧರಿಸಲಾಗಿದೆ. ಆದರೆ ನ್ಯಾಷನಲ್ ಫಾರ್ಮಸಿಟಿಕಲ್ಸ್ ಪ್ರೈಸಿಂಗ್ ಅಥಾರಿಟಿ ಮತ್ತು ಸೆಂಟ್ರಲ್ ಡ್ರಗ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಷನ್ಗೆ ದೇಶದಲ್ಲಿ ಈ ಔಷಧಿಯ ಲಭ್ಯತೆಯ ಮೇಲ್ವಿಚಾರಣೆ ನಡೆಸಬೇಕೆಂದು ನಿರ್ದೇಶನ ನೀಡಲಾಗಿದೆ. ತುರ್ತು ಅಗತ್ಯದಲ್ಲಿ ಬಳಸಲು ಸಿದ್ಧವಿರಲೆಂದು 50 ಲಕ್ಷ ವಯಲ್ ರೆಮ್ಡೆಸಿವಿರ್ಅನ್ನು ಖರೀದಿಸಿ ಶೇಖರಿಸಿಡಲು ಕೂಡ ಕೇಂದ್ರ ಸರ್ಕಾರ ನಿರ್ಧರಿಸಿದೆ ಎಂದು ಸಚಿವರು ತಿಳಿಸಿದ್ದಾರೆ. (ಏಜೆನ್ಸೀಸ್)
ರಕ್ಷಿತ್ ಶೆಟ್ಟಿ ಚಿತ್ರ ‘777ಚಾರ್ಲಿ’ಯ ಟೀಸರ್ ಬಿಡುಗಡೆಗೆ ಡೇಟ್ ಫಿಕ್ಸ್