ಬೆಂಗಳೂರು : ಕರೊನಾ ಸೋಂಕಿತರಿಗೆ ನೀಡುವ ರೆಮ್ಡಿಸಿವಿರ್ ಚುಚ್ಚುಮದ್ದನ್ನು ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದ ನಾಲ್ವರನ್ನು ಇಂದು ಬೆಂಗಳೂರು ನಗರ ಪೊಲೀಸರು ಬಂಧಿಸಿದ್ದಾರೆ. ದುಬಾರಿ ಬೆಲೆಗೆ ಮಾರಾಟವಾಗುತ್ತಿದ್ದ ಒಟ್ಟು 22 ವಯಲ್ ರೆಮ್ಡೆಸಿವಿರ್ಅನ್ನು ವಶಪಡಿಸಿಕೊಳ್ಳಲಾಗಿದೆ.
ಹೆಣ್ಣೂರ್ ಕ್ರಾಸ್ನಲ್ಲಿ ರೆಮ್ಡೆಸಿವಿರ್ ಹೆಚ್ಚಿನ ಬೆಲೆಗೆ ಮಾರುತ್ತಿದ್ದ ಇಬ್ಬರನ್ನು ಹೆಣ್ಣೂರು ಪೊಲೀಸರು ಬಂಧಿಸಿದ್ದಾರೆ. ಯಾದಗಿರಿ ಮೂಲದ ಷಣ್ಮುಗಯ್ಯ ಸ್ವಾಮಿ (32) ಮತ್ತು ಮಾಲತೇಶ (31) ಬಂಧಿತರು. ಈ ಇಬ್ಬರು ಮೆಡಿಕಲ್ ಶಾಪ್ನಲ್ಲಿ ಕೆಲಸ ಮಾಡುತ್ತಿದ್ದು, ಅಂಗಡಿಯಿಂದ ತಂದು ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದರು ಎಂದು ಪೂರ್ವ ವಿಭಾಗ ಡಿಸಿಪಿ ಡಾ. ಎಸ್.ಡಿ.ಶರಣಪ್ಪ ತಿಳಿಸಿದ್ದಾರೆ.
ಇದನ್ನೂ ಓದಿ: ಎಚ್ಚರಿಕೆ ! ಸತ್ತವರ ಬಟ್ಟೆಯನ್ನೂ ಕದಿಯುವವರಿದ್ದಾರೆ !
ರೆಮ್ಡಿಸಿವಿರ್ ಔಷಧಿಗಳ ಕಾಳಸಂತೆ ಜಾಲದ ಮೇಲೆ ಪೂರ್ವ ವಿಭಾಗ ಪೊಲೀಸರು ನಿಗಾ ವಹಿಸಿದ್ದರು. ಮೇ 8 ರ ರಾತ್ರಿ 8.30 ಗಂಟೆಗೆ ಹೆಣ್ಣೂರು ಕ್ರಾಸ್ ರಿಲಯನ್ಸ್ ಫ್ರೆಶ್ ಹತ್ತಿರ ರೆಮ್ಡಿಸಿವಿರ್ ಔಷಧಿಯನ್ನು ಅಧಿಕ ಬೆಲೆಗೆ ಮಾರಾಟ ಮಾಡುತ್ತಿದ್ದುದರ ಬಗ್ಗೆ ಖಚಿತ ಮಾಹಿತಿ ಲಭ್ಯವಾಯಿತು. ಇನ್ಸ್ಪೆಕ್ಟರ್ ವಸಂತಕುಮಾರ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಈರ್ವರು ಆರೋಪಿಗಳನ್ನು ಬಂಧಿಸಿ 57 ಸಾವಿರ ರೂ. ಮೌಲ್ಯದ 17 ಚುಚ್ಚುಮದ್ದುಗಳನ್ನು ಜಪ್ತಿ ಮಾಡಿದ್ದಾರೆ.
ಕಾಳಸಂತೆಯಲ್ಲಿ ಸರ್ಕಾರಿ ನೌಕರರು
ಮತ್ತೊಂದು ಪ್ರಕರಣದಲ್ಲಿ, ಎಸ್.ಜೆ.ಪಿ.ರಸ್ತೆಯ ದಾಸಪ್ಪ ಆಸ್ಪತ್ರೆ ಸಮೀಪ ಕಾಳಸಂತೆಯಲ್ಲಿ ರೆಮ್ಡಿಸಿವಿರ್ ಮಾರಾಟ ನಡೆಸುತ್ತಿದ್ದ ಇನ್ನೂ ಇಬ್ಬರನ್ನು ಎಸ್.ಜೆ.ಪಾರ್ಕ್ ಪೊಲೀಸರು ಬಂಧಿಸಿದ್ದಾರೆ. ಕೋಣನಕುಂಟೆಯ ಡಾಕ್ಟರ್ಸ್ ಕಾಲನಿಯ ಬಿಬಿಎಂಪಿ ನೌಕರ ಪ್ರವೀಣ್ (42) ಮತ್ತು ಕೆ.ಆರ್.ಪುರದ ಸ್ಟೇಟ್ ಡ್ರಗ್ಸ್ ಆ್ಯಂಡ್ ಲಾಜಿಸ್ಟಿಕ್ ನೌಕರ ಶ್ರೀನಾಥ್ (35) ಬಂಧಿತರು. ಮತ್ತೊಬ್ಬ ಆರೋಪಿ ಸ್ಟೇಟ್ ಡ್ರಗ್ಸ್ ಆ್ಯಂಡ್ ಲಾಜಿಸ್ಟಿಕ್ ನೌಕರ ಮುದ್ದಣ್ಣ ಎಂಬಾತ ತಲೆಮರೆಸಿಕೊಂಡಿದ್ದು, ಬಂಧನಕ್ಕೆ ಬಲೆಬೀಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಲಸಿಕೆ ವಿಷಯದಲ್ಲಿ ನ್ಯಾಯಾಂಗ ಮಧ್ಯಪ್ರವೇಶಿಸುವುದು ಬೇಡ ಎಂದ ಸರ್ಕಾರ
ಮುದ್ದಣ್ಣ ಒಂದು ರೆಮ್ಡಿಸಿವಿರ್ ಚುಚ್ಚುಮದ್ದಿಗೆ 15 ಸಾವಿರ ರೂ. ಪಡೆದು ಪೂರೈಸುತ್ತಿದ್ದ. ಅದನ್ನು ತಂದು 25 ಸಾವಿರ ರೂ.ಗೆ ಮಾರಾಟ ಮಾಡುತ್ತಿದ್ದುದಾಗಿ ಬಂಧಿತರಾದ ಪ್ರವೀಣ್ ಮತ್ತು ಶ್ರೀನಾಥ್ ಒಪ್ಪಿಕೊಂಡಿದ್ದಾರೆ. 5 ವಯಲ್ ಚುಚ್ಚುಮದ್ದು ವಶಕ್ಕೆ ಪಡೆಯಲಾಗಿದ್ದು, ಎಸ್.ಜೆ.ಪಾರ್ಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪೊಲೀಸರಿಗೆ ತಿಳಿಸಿ : ಅಧಿಕ ಬೆಲೆಗೆ ರೆಮ್ಡಿಸಿವಿರ್ ಚುಚ್ಚುಮದ್ದು ಮಾರಾಟ ಮಾಡುವ ವ್ಯಕ್ತಿಗಳ ಬಗ್ಗೆ ಮಾಹಿತಿ ಸಿಕ್ಕರೆ ಕೂಡಲೇ ಪೊಲೀಸರಿಗೆ ತಿಳಿಸಬೇಕೆಂದು ಡಿಸಿಪಿ ಶರಣಪ್ಪ ಜನರಿಗೆ ಮನವಿ ಮಾಡಿದ್ದಾರೆ.