More

    ಜೀವನದ ಉನ್ನತಿಗೆ ಧರ್ಮಾಚರಣೆಯೇ ಮೂಲ

    ಸಕಲೇಶಪುರ: ಜನ್ಮಗಳ ಪುಣ್ಯದ ಫಲವಾಗಿ ಮಾನವ ಜನ್ಮ ಪ್ರಾಪ್ತಿಯಾಗಿದ್ದು, ಜೀವನದ ಉನ್ನತಿ ಮತ್ತು ಬದುಕಿನ ಶ್ರೇಯಸ್ಸಿಗೆ ಧರ್ಮಾಚರಣೆಯೇ ಮೂಲ ಎಂದು ರಂಭಾಪುರಿ ಜಗದ್ಗುರು ಶ್ರೀವೀರಸೋಮೇಶ್ವರ ಸ್ವಾಮೀಜಿ ಹೇಳಿದರು.

    ತಾಲೂಕಿನ ಯಸಳೂರು ತೆಂಕಲಗೂಡು ಬೃಹನ್ಮಠದಲ್ಲಿ ಶುಕ್ರವಾರ ಆಯೋಜಿಸಿದ್ದ ಜಗದ್ಗುರು ಶ್ರೀ ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಮನುಷ್ಯ ಯಾವಾಗಲೂ ಸುಖಾಪೇಕ್ಷಿ. ಸುಖದಾಯಕ, ಶಾಂತಿ ಮತ್ತು ನೆಮ್ಮದಿ ಬದುಕಿಗೆ ಧರ್ಮ ಮತ್ತು ಧರ್ಮಾಚರಣೆ ಬಹಳಷ್ಟು ಮುಖ್ಯ. ಹೀಗಾಗಿ ಅರಿವು ಮತ್ತು ಆಚರಣೆಗಳನ್ನು ಮೈಗೂಡಿಸಿಕೊಂಡು ಬಾಳಿದರೆ ಜೀವನ ಉಜ್ವಲಗೊಳ್ಳಲಿದೆ ಎಂದರು.

    ಜಗದ್ಗುರು ರೇಣುಕಾಚಾರ್ಯರು ವಿಶ್ವ ಬಂಧುತ್ವದ ಸಾಮರಸ್ಯ ಮತ್ತು ಸೌಹಾರ್ದತೆಯ ಅಮೂಲ್ಯ ಬೋಧಾಮೃತವನ್ನು ಬೋಧಿಸಿದ್ದಾರೆ. ಅಹಿಂಸಾದಿ ಧ್ಯಾನ ಪರ್ಯತರವಾದ ದಶ ಧರ್ಮ ಸೂತ್ರ ಸಕಲರ ಬಾಳಿನ ಉತ್ಕರ್ಷತೆಗೆ ಕಾರಣವಾಗಿವೆ. ಅಲ್ಲದೆ ಮಾನವೀಯ ಆದರ್ಶ ಮೌಲ್ಯಗಳನ್ನು ವೀರಶೈವ ಧರ್ಮ ಎತ್ತಿ ಹಿಡಿದಿದ್ದು, ಜಾತಿ ಜನಾಂಗಗಳ ಗಡಿ ಮೀರಿ ಸರ್ವರ ಒಳಿತಿಗಾಗಿ ಸದಾ ಶ್ರಮಿಸಿದೆ ಎಂದು ಹೇಳಿದರು.

    ವೀರಶೈವ ಧರ್ಮ ವೃಕ್ಷದ ಮೂಲ ಪರಮಾಚಾರ್ಯರಾದ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಹಮ್ಮಿಕೊಂಡಿರುವುದು ಸಂತಸದ ವಿಚಾರ. ಲಿಂ.ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ತೆಂಕಲಗೂಡು ಬೃಹನ್ಮಠದ ಉನ್ನತಿಗಾಗಿ ಶ್ರಮಿಸಿದ್ದರು. ಪ್ರಸ್ತುತ ಶ್ರೀ ಚನ್ನಸಿದ್ದೇಶ್ವರ ಶ್ರೀಗಳು ಹಿಂದಿನ ಶ್ರೀಗಳ ಸತ್ಯ ಸಂಕಲ್ಪಗಳನ್ನು ಸಾಕಾರಗೊಳಿಸಿರುವುದು ಭಕ್ತ ಸಮೂಹಕ್ಕೆ ಸಂತೋಷ ತಂದಿದೆ ಎಂದರು.

    ಯಡಿಯೂರು ಶ್ರೀ ಕ್ಷೇತ್ರದ ರೇಣುಕಾಶಿವಚಾರ್ಯ ಸ್ವಾಮೀಜಿ ಮಾತನಾಡಿ, ಪ್ರಸ್ತುತ ವೀರಶೈವ ಸಮಾಜದ ಮೂಲ ಪುರುಷ ಜಗದ್ಗುರು ರೇಣಕಾಚಾರ್ಯರ ಜನ್ಮದಿನವನ್ನು ಎಲ್ಲ ಮಠ, ಮಂದಿರಗಳಲ್ಲೂ ಆಚರಿಸುತ್ತಿರುವುದು ಸಂತಸದ ಬೆಳವಣಿಗೆ. ಮಠಮಂದಿರಗಳ ಉದ್ಧಾರದಿಂದ ಸಮಾಜದಲ್ಲಿ ಸಂಸ್ಕಾರ,ಸಂಸ್ಕೃತಿ ವೃದ್ಧಿಸಲಿದೆ. ಇದರಿಂದ ಹಳ್ಳಿಗಳು ಆರ್ಥಿಕವಾಗಿ ಸಂವೃದ್ಧಿಗೊಳ್ಳಲಿವೆ. ಆದ್ದರಿಂದ ಮಲೆನಾಡಿನ ಭಾಗದಲ್ಲಿರುವ ಮಠಗಳ ಅಭಿವೃದ್ಧಿಗೆ ಭಕ್ತರು ಸಹಕರಿಸಬೇಕು ಎಂದರು.

    ತೆಂಕಲಗೋಡು ಮಠದ ಶ್ರೀ ಚನ್ನಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ವೀರಶೈವ ಧರ್ಮ ಕಾಯಕ ಮತ್ತು ದಾಸೋಹಕ್ಕೆ ಪ್ರಾಮುಖ್ಯತೆ ಕೊಟ್ಟಿದೆ. ಸುಸಂಸ್ಕೃತ ಸಮಾಜ ನಿರ್ಮಾಣಕ್ಕೆ ಸಂಸ್ಕಾರ ಮುಖ್ಯ. ಲಿಂ. ಚನ್ನಮಲ್ಲಿಕಾರ್ಜುನ ಶ್ರೀಗಳು ಹಾಕಿಕೊಟ್ಟ ದಾರಿಯಲ್ಲಿ ಮುನ್ನಡೆಯಲಾಗುವುದು ಎಂದರು.

    ಅಖಿಲ ಭಾರತ ವೀರಶೈವ ಸಮಾಜದ ಜಿಲ್ಲಾಧ್ಯಕ್ಷ ಬಿ.ಆರ್.ಗುರುದೇವ್ ಮಾತನಾಡಿ, ಮಲೆನಾಡಿನಲ್ಲಿ ಧಾರ್ಮಿಕ ಸಂಸ್ಕಾರ ಆರಂಭವಾಗಿದ್ದು ಜಗದ್ಗುರುಗಳ ಸಂಚಾರದಿಂದ. ಪಂಚಪೀಠದಿಂದ ಧರ್ಮ ಪ್ರಚಾರ ಸಾವಿರಾರು ವರ್ಷದಿಂದ ನಡೆಯುತ್ತಿದೆ. ಇದರಿಂದಾಗಿ ಇಂದು ನಾಡಿನಲ್ಲಿ ಧರ್ಮ ನೆಲೆಗೊಂಡಿದೆ ಎಂದರು.

    ಸಮಾರಂಭದ ಅಂಗವಾಗಿ ನೂತನ ಗುರು ನಿವಾಸ ಉದ್ಘಾಟನೆ, ಮೃತ್ಯುಂಜಯ ಹೋಮ, ಮಾಸ ಪತ್ರಿಕೆ ಬಿಡುಗಡೆ, ಪುಸ್ತಕ ಬಿಡುಗಡೆ ಹಾಗೂ ಜಂಗಮ ವಟುಗಳಿಗೆ ಶಿವದೀಕ್ಷೆ ನೀಡಲಾಯಿತು. ಸಮಾರಂಭದ ನಂತರ ಅನ್ನದಾಸೋಹ ನೆರವೇರಿತು. ವಿವಿಧ ಕ್ಷೇತ್ರದಲ್ಲಿ ಸಾಧನೆಗೈದವರನ್ನು ರಂಭಾಪುರಿ ಶ್ರೀಗಳು ಸನ್ಮಾನಿಸಿದರು.

    ಮುದ್ದಿನಕಟ್ಟೆಮಠದ ಶ್ರೀ ಅಭಿನವ ಸಿದ್ದಲಿಂಗ ಸ್ವಾಮೀಜಿ, ಚಂಗಡಿಹಳ್ಳಿಯ ಹೆಗ್ಗಡಹಳ್ಳಿ ಮಠದ ಶ್ರೀ ಶಿವಚಾರ್ಯ ಸ್ವಾಮೀಜಿ, ಕಾರ್ಜುವಳ್ಳಿ ಹಿರೇಮಠದ ಶ್ರೀ ಸದಾಶಿವ ಶಿವಾಚಾರ್ಯ ಸ್ವಾಮೀಜಿ, ಮಲೆನಾಡು ವೀರಶೈವ ಸಮಾಜದ ಅಧ್ಯಕ್ಷ ದಿವಾನ್ ಮುಂತಾದವರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts