ಬೆಂಗಳೂರು: ಭಾರತ ಮತ್ತು ಅಮೆರಿಕ ಆರ್ಥಿಕತೆಗೂ ಸಾಕಷ್ಟು ವ್ಯತ್ಯಾಸವಿದೆ. 2008ರಲ್ಲಿನ ಆರ್ಥಿಕ ಹಿಂಜರಿತದ ಸಮಯ ಮತ್ತು ಕರೊನಾ ವೇಳೆ ಇತರೆ ದೇಶಗಳಿಗಿಂತ ದೇಶದ ಆರ್ಥಿಕ ಪರಿಸ್ಥಿತಿ ಗಟ್ಟಿಯಾಗಿರಲು ಭಾರತೀಯ ಆರ್ಥಿಕ ವ್ಯವಸ್ಥೆ ಕಾರಣವೆಂದು ವಿಸ್ತಾರ ನ್ಯೂಸ್ ಪ್ರಧಾನ ಸಂಪಾದಕ ಹರಿಪ್ರಕಾಶ್ ಕೋಣೆಮನೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕೆಂಪೇಗೌಡ ರಸ್ತೆಯಲ್ಲಿರುವ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ (ಕೆಯುಡಬ್ಲುಜೆ) ಕಚೇರಿಯಲ್ಲಿ ಸೋಮವಾರ ವಿಸ್ತಾರ ನ್ಯೂಸ್ ಕಾರ್ಯನಿರ್ವಾಹಕ ಸಂಪಾದಕ ಶರತ್ ಎಂ.ಎಸ್. ರಚಿತ ಬಹುರೂಪಿ ಪ್ರಕಾಶನ ಪ್ರಕಟಿಸಿರುವ ‘ಮನಿ ಸೀಕ್ರೆಟ್ಸ್ ಆ್ಯಂಡ್ ಸ್ಟಾಕ್ ಮಾರ್ಕೆಟ್ ಸೀಕ್ರೆಟ್ಸ್’ ಎಂಬ ಪುಸ್ತಕ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಅಮೆರಿಕದ ಆರ್ಥಿಕತೆಯು ದೊಡ್ಡ ದೊಡ್ಡ ಬ್ಯಾಂಕುಗಳಲ್ಲಿ ನಡೆದರೆ, ನಮ್ಮ ಆರ್ಥಿಕ ವ್ಯವಸ್ಥೆಯು ಸಹಕಾರಿ ಬ್ಯಾಂಕ್ಗಳು, ಗುಡಿ ಕೈಗಾರಿಕೆ, ಕೃಷಿ ಹಿಡುವಳಿಯಲ್ಲಿ ನಡೆಯುತ್ತಿವೆ. ಅದಕ್ಕಿಂತ ಹೆಚ್ಚಾಗಿ ಮಹಿಳೆಯರು ಅಡುಗೆ ಮನೆಯಲ್ಲಿ ಡಬ್ಬಿಯಲ್ಲಿ ಹಣವಿಟ್ಟುಕೊಳ್ಳುವುದರಿಂದಲೇ ಸಾಕಷ್ಟು ಸಮಸ್ಯೆಯಾಗದಿರಲು ಕಾರಣವೆಂದು ಹೇಳಿದರು.
ದೇಶ ಅಥವಾ ಕುಟುಂಬ ನಿರ್ವಹಣೆಗೆ ಪ್ರತಿಯೊಬ್ಬರಿಗೂ ಆರ್ಥಿಕ ಜ್ಞಾನ ಬಹಳ ಮುಖ್ಯ. ಶರತ್ ತಮ್ಮ ಪುಸ್ತಕದಲ್ಲಿ ತಾವು ಕೂಡಿಡುವ ಹಣದಿಂದಲೇ ದುಡಿಯುವುದು ಹೇಗೆ ಎಂಬ ಸಾಕಷ್ಟು ಮಾಹಿತಿಯನ್ನು ನೀಡಿದ್ದಾರೆ ಎಂದು ಉದಾಹರಣೆ ಸಹಿತ ವಿವರಿಸಿದರು.
ಪುಸ್ತಕ ಬಿಡುಗಡೆಗೂ ಮುನ್ನವೇ 3 ಸಾವಿರ ಪ್ರತಿಗಳು ಮಾರಾಟ…
ಬಹುರೂಪಿ ಪ್ರಕಾಶನದ ಜಿ.ಎನ್. ಮೋಹನ್ ಮಾತನಾಡಿ, ಪುಸ್ತಕ ಬಿಡುಗಡೆಗೂ ಮುನ್ನವೇ 3 ಸಾವಿರ ಪ್ರತಿಗಳು ಮಾರಾಟವಾಗಿವೆ. ಇದು ಕನ್ನಡ ಪುಸ್ತಕ ಮಾರುಕಟ್ಟೆಯಲ್ಲಿ ದಾಖಲೆಯ ಸಂಗತಿಯಾಗಿದೆ. ಬಹುರೂಪಿ ಇಲ್ಲಿಯವರೆಗೂ 70 ಪುಸ್ತಕಗಳನ್ನು ಪ್ರಕಟಿಸಿದೆ. ಈ ಪೈಕಿ 8 ಪುಸ್ತಕಗಳು ರಾಷ್ಟ್ರೀಯ ಪುರಸ್ಕಾರಕ್ಕೆ ಭಾಜನವಾಗಿವೆ. ಇದೀಗ ಬಹುರೂಪಿಗೆ ಟಾಟಾ ಟ್ರಸ್ಟ್ ಮತ್ತು ಮಧ್ಯಪ್ರದೇಶದ ಏಕತಾರಾ ಜತೆ ಸಹಯೋಗ ಹೊಂದುವ ಮೂಲಕ ಕನ್ನಡ ಮಾರುಕಟ್ಟೆಯನ್ನು ವಿಸ್ತರಿಸಿಕೊಳ್ಳುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಇದನ್ನೂ ಓದಿ: ಸೋಲಾರ್ ಚಾಲಿತ ಉಳುಮೆ ಯಂತ್ರ; ರೈತಸ್ನೇಹಿ ಯಂತ್ರ ಸಿದ್ಧಪಡಿಸಿದ ವಿದ್ಯಾರ್ಥಿ
ದೇಶದಲ್ಲಿ ಸಾಕಷ್ಟು ಜನರು ಸಾಕ್ಷರತೆ ಹೊಂದಿದ್ದರೂ ಆರ್ಥಿಕ ಸಾಕ್ಷರತೆ ಹೊಂದಿರುವವರ ಸಂಖ್ಯೆ ಕೇವಲ ಶೇ.24 ಅಷ್ಟೇ. ಆದ್ದರಿಂದ ಆರ್ಥಿಕ ಜ್ಞಾನ ಹೊಂದಲು ಮನಿ ಸೀಕ್ರೆಟ್ಸ್ ಪುಸ್ತಕ ಪ್ರತಿಯೊಬ್ಬರಿಗೂ ಸಹಾಯವಾಗಲಿದೆ ಎಂದು ಹೇಳಿದರು.
ಹೊಸ ಮಾದರಿ ಹೂಡಿಕೆಗಳು ಅಗತ್ಯ…
ಲೇಖಕ ಶರತ್ ಎಂ.ಎಸ್. ಮಾತನಾಡಿ, ಸಾಂಪ್ರದಾಯಿಕ ಹೂಡಿಕೆಗಳಾದ ಅಂಚೆ ಕಚೇರಿ, ಬ್ಯಾಂಕಿನಲ್ಲಿ ಎಫ್ಡಿ ಇಡುವುದು ಇವತ್ತಿನ ಹಣದುಬ್ಬರವನ್ನು ನಿಲ್ಲಲು ಸಾಧ್ಯವಿಲ್ಲ. ಆದ್ದರಿಂದ ಹೊಸ ಮಾದರಿ ಹೂಡಿಕೆಗಳು ಅಗತ್ಯ. ಇಂತಹ ವಿಷಯಗಳನ್ನು ಪುಸ್ತಕದಲ್ಲಿ ತಿಳಿಸಲಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕೆಯುಡಬ್ಲುಜೆ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, ಪ್ರಧಾನ ಕಾರ್ಯದರ್ಶಿ ಜಿ.ಸಿ. ಲೋಕೇಶ್ ಮತ್ತು ಫ್ರೀಡಂ ಆ್ಯಪ್ ಸ್ಥಾಪಕ ಸಿ.ಎಸ್. ಸುಧೀರ್ ಉಪಸ್ಥಿತರಿದ್ದರು.
ಆರ್ಥಿಕ ಸಾಕ್ಷರತೆ ಇಲ್ಲದಿದ್ದರೆ ಜೀವನ ಕಳೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗುವ ಸಾಧ್ಯತೆಗಳಿರುತ್ತವೆ. ಯಶಸ್ಸು ಗಳಿಸಲು ಕೂಡ ಆರ್ಥಿಕ ತಿಳಿವಳಿಕೆ ಅಗತ್ಯ. ಹಣವನ್ನು ಯಾವ ರೀತಿಯಲ್ಲಿ ಹೂಡಿಕೆ ಮತ್ತು ಉಳಿಕೆ ಮಾಡಬಹುದು ಎಂಬ ಜ್ಞಾನ ಹೊಂದಿರಬೇಕು.
– ಕೆ.ಎನ್. ಚನ್ನೇಗೌಡ, ವಿಜಯವಾಣಿ ಸಂಪಾದಕ