ಬೆಂಗಳೂರು: ರಾಜ್ಯದ ವಿವಿಧೆಡೆ ಸುರಿಯುತ್ತಿರುವ ಮಳೆ ಮುಂದಿನ ಐದು ದಿನ ಮುಂದುವರಿಯಲಿದೆ. ಕರಾವಳಿಯ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಹಾಗೂ ಮಲೆನಾಡು ಜಿಲ್ಲೆಗಳಾದ ಚಿಕ್ಕಮಗಳೂರು, ಶಿವಮೊಗ್ಗ, ಕೊಡಗು ಮತ್ತು ಹಾಸನದಲ್ಲಿ ಜುಲೈ 10, 11 ರಂದು ಆರೆಂಜ್ ಅಲರ್ಟ್ ಇದ್ದರೆ, 12, 13 ರಂದು ಅತಿ ಹೆಚ್ಚು ಮಳೆ ಬೀಳಲಿರುವ ಹಿನ್ನೆಲೆಯಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ.
ಈ ವೇಳೆ 204 ಮಿಮೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮೂನ್ಸೂಚನೆ ನೀಡಿದೆ. ಸಮುದ್ರದ ಆಸುಪಾಸಿನಲ್ಲಿ ವಾಸಿಸುತ್ತಿರುವ ನಿವಾಸಿಗಳು ಹಾಗೂ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಇಲಾಖೆ ಎಚ್ಚರಿಕೆ ನೀಡಿದೆ.
ಉತ್ತರ ಒಳನಾಡಿನ ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ ಮತ್ತು ವಿಜಯಪುರದಲ್ಲಿ ಮುಂದಿನ 5 ದಿನ ಯೆಲ್ಲೋ ಅಲರ್ಟ್ ಇರಲಿದೆ. ದಕ್ಷಿಣ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ ಸಾಧಾರಣ ಮಳೆ ಮುಂದುವರಿಯಲಿದೆ.
ಜೂನ್ 23 ರಿಂದ ಜುಲೈ 4 ರವರೆಗೆ ರಾಜ್ಯಾದ್ಯಂತ ಮಳೆ ಕ್ಷೀಣಿಸಿತ್ತು. ಗಾಳಿಯ ವೇಗ ಹೆಚ್ಚಿರುವ ಹಾಗೂ ತೇವಾಂಶ ಭರಿತ ಮೋಡಗಳ ಹಿನ್ನೆಲೆಯಲ್ಲಿ ಜುಲೈ ಎರಡು, ಮೂರು ಮತ್ತು ನಾಲ್ಕನೇ ವಾರದಲ್ಲಿ ರಾಜ್ಯದಲ್ಲಿ ಹೆಚ್ಚು ಮಳೆಯಾಗುವ ಸಾಧ್ಯತೆಯಿದೆ ಎಂದು ಇಲಾಖೆ ನಿರ್ದೇಶಕ ಸಿ.ಎಸ್.ಪಾಟೀಲ್ ಮಾಹಿತಿ ನೀಡಿದ್ದಾರೆ.
ಹೈಕೋರ್ಟ್ ಮತ್ತು ಜಿಲ್ಲಾ ಕೋರ್ಟ್ಗಳಿಗೆ ಟೆಲಿಗ್ರಾಂ ಚ್ಯಾನೆಲ್, ಚ್ಯಾಟ್ಬಾಟ್
ರಸ್ತೆಯಲ್ಲಿ ಉಗುಳಿ 33 ಲಕ್ಷ ರೂಪಾಯಿ ದಂಡ ಕಕ್ಕಿದ ಮುಂಬೈಕರರು!