ಹಾವೇರಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿರುದ್ಧ ಶಿಗ್ಗಾಂವಿಯಿಂದ ಸ್ಪರ್ಧಿಸಲು ನಾನು ಅರ್ಜಿ ಸಲ್ಲಿಸಿಲ್ಲ.
ಆದರೆ, ಕಾರ್ಯಕರ್ತರು ಒತ್ತಾಯಿಸುತ್ತಿದ್ದಾರೆ. ಒಂದು ವೇಳೆ ಹೈಕಮಾಂಡ್ ತೀರ್ಮಾನಿಸಿದರೆ ಸ್ಪರ್ಧಿಸುತ್ತೇನೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ವಿಧಾನ ಪರಿಷತ್ ಸದಸ್ಯ ಸಲೀಂ ಅಹ್ಮದ್ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿಗ್ಗಾಂವಿ ಕಾಂಗ್ರೆಸ್ ಟಿಕೆಟ್ಗಾಗಿ ಅರ್ಜಿ ಸಲ್ಲಿಸಿದ್ದ 14 ಆಕಾಂಕ್ಷಿಗಳಲ್ಲಿ 8 ಹೆಸರನ್ನು ಹೈಕಮಾಂಡ್ಗೆ ಕಳುಹಿಸಲಾಗಿದೆ.
ಅದರಲ್ಲಿ ವಿನಯ ಕುಲಕರ್ಣಿ ಹೆಸರು ಇರಲಿಲ್ಲ. 8 ಜನರಿಗೂ ಸಿಎಂ ಸೋಲಿಸುವ ತಾಕತ್ತು ಇದೆ ಎಂದರು.
ಮುಖ್ಯಮಂತ್ರಿ ಗೆ ಶೋಭೆ ತರುವಂಥದ್ದಲ್ಲ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮೊನ್ನೆ ಶಿಗ್ಗಾಂವಿಯಲ್ಲಿ ನೀಡಿರುವ ಹೇಳಿಕೆ ಅವರ ಸ್ಥಾನಕ್ಕೆ ಶೋಭೆ ತರುವಂಥದ್ದಲ್ಲ.
ಶಿಗ್ಗಾಂವಿಯಲ್ಲಿ ಬಿಜೆಪಿ ಸೋಲು ಖಚಿತವಾಗಿದೆ. ಹಾಗಾಗಿ, ಈ ರೀತಿ ಹೇಳಿಕೆ ನೀಡಿದ್ದಾರೆ.
ಏ. 13ರೊಳಗೆ ನಾವು 224 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡುತ್ತೇವೆ. ಆದರೆ, ಬಿಜೆಪಿಯವರಿಗೆ ಈವರೆಗೆ ಒಂದೇ ಒಂದು ಪಟ್ಟಿ ಬಿಡುಗಡೆ ಮಾಡಲು ಆಗಿಲ್ಲ ಎಂದು ಟೀಕಿಸಿದರು.
ಇಡೀ ಸರ್ಕಾರವೇ ಬಂದರೂ, ನೂರಾರು ಕೋಟಿ ರೂ. ಖರ್ಚು ಮಾಡಿದರೂ ಹಾನಗಲ್ಲ ಉಪ ಚುನಾವಣೆ ಗೆಲ್ಲಲು ಬಿಜೆಪಿಗೆ ಆಗಲಿಲ್ಲ.
ಬಂಕಾಪುರ ಸ್ಥಳೀಯ ಚುನಾವಣೆಯಲ್ಲಿ, ಎಂಎಲ್ಸಿ ಚುನಾವಣೆಯಲ್ಲಿ ನಾವು ಗೆದ್ದಿದ್ದೇವೆ. ನಿಮ್ಮ ಕೆಲಸದ ಮೇಲೆ ಗ್ಯಾರಂಟಿ ಇದ್ದಿದ್ದರೆ ಸುದೀಪ ಅವರನ್ನು ಯಾಕೆ ಕರೆದುಕೊಂಡು ಬರಬೇಕಿತ್ತು? ಎಂದು ಪ್ರಶ್ನಿಸಿದರು.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ರುದ್ರಪ್ಪ ಲಮಾಣಿ, ಮಂಜುನಾಥ ಕುನ್ನೂರ, ಅಜೀಮ್ಪೀರ್ ಖಾದ್ರಿ, ಸಂಜೀವ ನೀರಲಗಿ, ಎಂ.ಎಂ. ಮೈದೂರ, ಕೊಟ್ರೇಶ ಬಸೇಗೆಣ್ಣಿ, ಇತರರು ಇದ್ದರು.
16ರಂದು ರಾಹುಲ್ ಕೋಲಾರಕ್ಕೆ
ಭಾರತ ಜೋಡೋ ಪಾದಯಾತ್ರೆಯಲ್ಲಿ ರಾಹುಲ್ ಗಾಂಧಿ ಅವರಿಗೆ ಸಿಕ್ಕ ಜನಬೆಂಬಲ ಬಿಜೆಪಿಗೆ ಭಯ ಹುಟ್ಟಿಸಿದೆ. ಅದಕ್ಕಾಗಿ ಬಿಜೆಪಿ ರಾಹುಲ್ರನ್ನು ತಡೆಯುವ ಯತ್ನ ಮಾಡುತ್ತಿದೆ. ಈ ಹಿಂದೆ ಕೋಲಾರದಲ್ಲಿ ರಾಹುಲ್ ಗಾಂಧಿ ಅವರು ಮಾಡಿದ್ದ ಭಾಷಣವನ್ನು ಬಿಜೆಪಿಯವರು ಟೀಕಿಸಿದ್ದರು. ಅದೇ ಜಾಗದಿಂದ ಏ. 16ರಂದು ‘ಜೈ ಭಾರತ’ ಸಮಾವೇಶ ಹಮ್ಮಿಕೊಳ್ಳಲಾಗಿದ್ದು, ರಾಹುಲ್ ಗಾಂಧಿ ಉದ್ಘಾಟಿಸಲಿದ್ದಾರೆ. ಅಂದಿನಿಂದ ಮೂರು ದಿನ ರಾಜ್ಯದಲ್ಲಿ ಪ್ರಚಾರ ಮಾಡಲಿದ್ದಾರೆ ಎಂದು ಸಲೀಂ ಅಹ್ಮದ್ ಹೇಳಿದರು.