ಧಾರವಾಡ: ಕರೊನಾ ಕಾರಣಕ್ಕೆ ನ್ಯಾಯಬೆಲೆ ಅಂಗಡಿಗಳಲ್ಲಿ ಸ್ಥಗಿತಗೊಳಿಸಿದ್ದ ಇ-ಕೆವೈಸಿ ಮರು ಪ್ರಾರಂಭಕ್ಕೆ ಸರ್ಕಾರ ನಿರ್ದೇಶಿಸಿದೆ. ಎಲ್ಲ ಪಡಿತರ ಚೀಟಿಗಳಲ್ಲಿನ ಕುಟುಂಬದ ಮುಖ್ಯಸ್ಥರು ಮತ್ತು ಸಂಬಂಧ, ಎಲ್ಪಿಜಿ ವಿವರ, ಮೊಬೈಲ್ ಸಂಖ್ಯೆಗಳನ್ನು ಸಂಗ್ರಹಿಸಬೇಕಿದೆ. ಈ ಹಿನ್ನೆಲೆಯಲ್ಲಿ ಚಾಲ್ತಿ ಇರುವ ಅಂತ್ಯೋದಯ ಅನ್ನ (ಎಎವೈ), ಆದ್ಯತಾ (ಪಿಎಚ್ಎಚ್) ಪಡಿತರ ಚೀಟಿಗಳ ಇ-ಕೆವೈಸಿ ಸಂಗ್ರಹಿಸುವ ಕಾರ್ಯವನ್ನು ನ್ಯಾಯಬೆಲೆ ಅಂಗಡಿಗಳ ಮೂಲಕ ಜ. 1ರಂದು ಪ್ರಾರಂಭಿಸಲಾಗಿದೆ.
ನ್ಯಾಯಬೆಲೆ ಅಂಗಡಿಗಳು ಹೊಸದಾಗಿ ಸೃಜಿಸಿದ ಜಿಎಸ್ಸಿ ಮಾಡಿದ ಪಡಿತರ ಚೀಟಿಗಳನ್ನು ಬಿಟ್ಟು ಮೊದಲ ಹಂತದಲ್ಲಿ ಇ-ಕೆವೈಸಿ ಮಾಡದಿರುವ ಪಡಿತರ ಚೀಟಿಗಳ ಕೆವೈಸಿ ಮಾಡಬೇಕು. ಈಗಾಗಲೇ ಇ-ಕೆವೈಸಿ ಆಗಿರುವ ಅಥವಾ 2020 ಫೆಬ್ರವರಿ ನಂತರ ವಿತರಿಸುವ ಹೊಸ ಪಡಿತರ ಚೀಟಿ, ಜಿಎಸ್ಸಿ ಆಗಿರುವ ಪಡಿತರ ಚೀಟಿಗಳನ್ನು ಪುನಃ ಇ-ಕೆವೈಸಿ ಮಾಡಿಸುವ ಅಗತ್ಯವಿಲ್ಲ. ಪಡಿತರ ಚೀಟಿದಾರರು ಜಾತಿ ವಿವರ, ಎಲ್ಪಿಜಿ ವಿವರ ನೀಡಬೇಕು. ಕುಷ್ಟರೋಗ, ಅಂಗವಿಕಲರು, ಹಾಸಿಗೆ ಹಿಡಿದವರು, ವಯೋವೃದ್ಧರು, ಮರಣ, ಕುಟುಂಬದ ಜೊತೆ ವಾಸವಾಗಿಲ್ಲದ ಕಾರಣಗಳಿಗೆ ವಿನಾಯ್ತಿ ನೀಡಲಾಗಿದೆ.
ನ್ಯಾಯಬೆಲೆ ಅಂಗಡಿಗಳಲ್ಲಿ ಇ-ಕೆವೈಸಿ ಸಂಗ್ರಹಣೆ ಸಂದರ್ಭದಲ್ಲಿ ಬಯೋಮೆಟ್ರಿಕ್ ಸಂಗ್ರಹಿಸುವುದರಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕಾಲಕಾಲಕ್ಕೆ ಹೊರಡಿಸುವ ಕೋವಿಡ್-19 ನಿಯಮಗಳನ್ನು ಪಾಲಿಸಲು ಅಂಗಡಿಗಳ ಮಾಲೀಕರಿಗೆ ಸೂಚಿಸಲಾಗಿದೆ.
ಆಧಾರ್ ದೃಢೀಕರಣ ಇ-ಕೆವೈಸಿಗೆ ಪ್ರತಿ ಫಲಾನುಭವಿಗೆ 5 ರೂ. ದಂತೆ ಒಟ್ಟಾರೆ ಒಂದು ಕುಟುಂಬದ ಆಧಾರ್ ದೃಢೀಕರಣ ಇ-ಕೆವೈಸಿ ಪೂರ್ಣಗೊಳಿಸಲು ಗರಿಷ್ಠ 20 ರೂ. ಗಳನ್ನು ಇಲಾಖಾವತಿಯಿಂದ ನೇರವಾಗಿ ಅಂಗಡಿಕಾರರ ಬ್ಯಾಂಕ್ಖಾತೆಗೆ ಜಮೆ ಮಾಡಲಾಗುವುದು. ಪಡಿತರ ಚೀಟಿದಾರರು ಅಂಗಡಿಕಾರರಿಗೆ ಹಣ ಪಾವತಿಸುವಂತಿಲ್ಲ. ಒಂದು ವೇಳೆ ಅಂಗಡಿಕಾರರು ಹಣ ಪಡೆದ ಬಗ್ಗೆ ದೂರುಗಳು ಬಂದಲ್ಲಿ ಕಾನೂನು ಕ್ರಮಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.