ನವದೆಹಲಿ: ಸುಸ್ಥಿ ಸಾಲಗಳಿಂದಾಗಿ ತೀವ್ರ ಆರ್ಥಿಕ ಸಂಕಷ್ಟಕ್ಕೆ ಈಡಾಗಿರುವ ಖಾಸಗಿ ವಲಯದ ಯೆಸ್ ಬ್ಯಾಂಕ್ಅನ್ನು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ತನ್ನ ಸುಪರ್ದಿಗೆ ತೆಗೆದುಕೊಂಡಿದ್ದು, ಬ್ಯಾಂಕ್ನ ಆಡಳಿತ ಮಂಡಳಿಯನ್ನು ಸೂಪರ್ಸೀಡ್ ಮಾಡಿದೆ. ಜತೆಗೆ ಗ್ರಾಹಕರ ಹಣ ವಿತ್ಡ್ರಾ ಮಿತಿಯನ್ನು 50 ಸಾವಿರ ರೂಪಾಯಿಗೆ ಮಿತಿಗೊಳಿಸಿದೆ.
ಈ ಕುರಿತು ಹಣಕಾಸು ಸಚಿವಾಲಯ ಮತ್ತು ಆರ್ಬಿಐ ಈ ಬಗ್ಗೆ ಪ್ರತ್ಯೇಕ ಸುತ್ತೋಲೆಗಳನ್ನು ಹೊರಡಿಸಿದೆ. 2020ರ ಏ.3ರವರೆಗೆ ಈ ನಿರ್ಬಂಧ ಜಾರಿಯಲ್ಲಿರುತ್ತದೆ. ಬ್ಯಾಂಕಿನ ಆರ್ಥಿಕ ಸ್ಥಿತಿ ಗಂಭೀರವಾಗಿ ಕುಸಿದಿರುವ ಹಿನ್ನೆಲೆ ಈ ಕ್ರಮ ಕೈಗೊಳ್ಳಲಾಗಿದ್ದು, ಮುಂದಿನ ಕೆಲ ದಿನಗಳಲ್ಲಿ ಬ್ಯಾಂಕಿನ ಮರು ನಿರ್ವಣಕ್ಕಾಗಿ ಆರ್ಬಿಐ ಯೋಜನೆಯೊಂದನ್ನು ಅನ್ವೇಷಿಸುತ್ತದೆ. ಬ್ಯಾಂಕ್ ಠೇವಣಿದಾರರನ್ನು ದೀರ್ಘಕಾಲದವರೆಗೆ ಸಂಕಷ್ಟಕ್ಕೆ ಒಳಪಡಿಸುವುದಿಲ್ಲ ಎಂದು ಆರ್ಬಿಐ ಸ್ಪಷ್ಟಪಡಿಸಿದೆ.
ಯೆಸ್ ಬ್ಯಾಂಕ್ನ ಎಲ್ಲ ಕಾರ್ಯ ಚಟುವಟಿಕೆಗಳ ಆರಂಭ ಮತ್ತು ಮುಂದುವರಿಕೆಗೆ ತಡೆಯಾಜ್ಞೆ ನೀಡಲಾಗಿದ್ದು, ಬ್ಯಾಂಕ್ನ ಆಡಳಿತಾಧಿಕಾರಿಯನ್ನಾಗಿ ಎಸ್ಬಿಐನ ಮಾಜಿ ಸಿಎಫ್ಒ ಪ್ರಶಾಂತ್ ಕುಮಾರ್ರನ್ನು ನೇಮಿಸಲಾಗಿದೆ. ಮಾಡಲಾಗಿದೆ. ವೈದ್ಯಕೀಯ ಅವಶ್ಯಕತೆ, ಉನ್ನತ ಶಿಕ್ಷಣ, ಮದುವೆ ಹಾಗೂ ಇನ್ನಿತರ ಕೆಲ ಕಾರಣಗಳಿಗೆ ಮಾತ್ರ ವಿತ್ ಡ್ರಾ ಮಿತಿಯಲ್ಲಿ ವಿನಾಯಿತಿ ನೀಡಲಾಗಿದೆ. ಈ ಕಾರಣಗಳಿಗಾಗಿ ಗ್ರಾಹಕರು ಗರಿಷ್ಠ 5 ಲಕ್ಷ ರೂ. ವರೆಗೆ ಹಣ ಪಡೆಯಬಹುದು. ಪಂಜಾಬ್ ಮಹಾರಾಷ್ಟ್ರ ಕೋ-ಆಪರೇಟಿವ್ ಬ್ಯಾಂಕ್ನಲ್ಲಿ ಸಾವಿರಾರು ಕೋಟಿ ರೂಪಾಯಿ ವಂಚನೆ ನಡೆದ ಪ್ರಕರಣ ಬೆಳಕಿಗೆ ಬಂದಾಗ ಆರ್ಬಿಐ ಇದೇ ರೀತಿ ಕ್ರಮಗಳನ್ನು ತೆಗೆದುಕೊಂಡಿತ್ತು.
ಯೆಸ್ ಬ್ಯಾಂಕ್ ಆನ್ಲೈನ್ ಸೇವೆ ಸ್ಥಗಿತ: ಈ ಬೆಳವಣಿಗೆ ನಂತರ ಯೆಸ್ ಬ್ಯಾಂಕ್ನ ಆನ್ಲೈನ್ ಬ್ಯಾಂಕಿಂಗ್ ಸೇವೆ ಜಾಮ್ ಆಗಿದೆ. ಇದಕ್ಕೆ ಹೆಚ್ಚಿನ ಜನ ಹಣ ಹಿಂಪಡೆಯಲು ಮುಗಿಬಿದ್ದಿರುವುದೂ ಕಾರಣ ಎನ್ನಲಾಗಿದೆ. ನೆಟ್ ಬ್ಯಾಂಕಿಂಗ್ನಲ್ಲಿ ಇಕ್ಕಟ್ಟು ಸೃಷ್ಟಿಯಾಗಿರುವ ಪರಿಣಾಮ ಗ್ರಾಹಕರ ಬೇಡಿಕೆಗೆ ತ್ವರಿತವಾಗಿ ಸ್ಪಂದಿಸಲು ಸಾಧ್ಯವಾಗುತ್ತಿಲ್ಲ ಎಂಬ ಸಂದೇಶ ಬ್ಯಾಂಕ್ ಗ್ರಾಹಕರಿಗೆ ರವಾನೆಯಾಗುತ್ತಿದೆ.