ಬೆಂಗಳೂರು: ಹೃದಯಾಘಾತದಿಂದ ನಿಧನರಾದ ಖ್ಯಾತ ಹಿರಿಯ ಪತ್ರಕರ್ತ ರವಿ ಬೆಳಗೆರೆಯವರ ಅಂತ್ಯ ಸಂಸ್ಕಾರ ಬ್ರಾಹ್ಮಣ ಸಂಪ್ರದಾಯದಂತೆ ಬನಶಂಕರಿಯ ಚಿತಗಾರದಲ್ಲಿ ಶುಕ್ರವಾರ ಸಂಜೆ ನೆರವೇರಿತು.
ಇಬ್ಬರು ಪುರೋಹಿತರ ಸಮ್ಮುಖದಲ್ಲಿ ಪುತ್ರರಾದ ಕರ್ಣ ಮತ್ತು ಹಿಮವಂತ್ರಿಂದ ಅಂತಿಮ ವಿಧಿ ವಿಧಾನಗಳು ನೆರವೇರಿದವು. ಕೊನೆಗೆ ಪುತ್ರರಿಬ್ಬರು ತಂದೆಯ ಚಿತೆಗೆ ಅಗ್ನಿ ಸ್ಪರ್ಶ ಮಾಡಿದರು.
ಗುರುವಾರ ತಡರಾತ್ರಿ ಹೃದಯಾಘಾತಕ್ಕೆ ಒಳಗಾದ ಅವರನ್ನು ತಕ್ಷಣ ಆಸ್ಪತ್ರೆ ದಾಖಲಿಸಲಾಯಿತಾದರೂ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟರು. ಸಾವಿಗೂ ಮುನ್ನವೂ ಬೆಳಗೆರೆ ಅವರು ಬರವಣಿಗೆಯಲ್ಲೇ ತೊಡಗಿಕೊಂಡಿದ್ದರು. ಬರೆಯುತ್ತಲೇ ಬದುಕು ಮುಗಿಸಿದ ಅಕ್ಷರ ಮಾಂತ್ರಿಕ ರವಿ ಬೆಳಗೆರೆ ಅವರನ್ನು ಕಳೆದುಕೊಂಡು ಕನ್ನಡ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ.
ರವಿ ಬೆಳಗೆರೆ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿರುವುದರಿಂದ ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಬೆಳಗ್ಗೆ 10ರ ಬಳಿಕ ಬೆಂಗಳೂರಿನ ಪದ್ಮನಾಭನಗರದ ಪ್ರಾರ್ಥನಾ ಶಾಲೆಯ ಆವರಣದಲ್ಲಿ ವ್ಯವಸ್ಥೆ ಮಾಡಲಾಗಿತ್ತು. ಆದರೆ, ಅಂತಿಮ ನಮನಕ್ಕೆ ವರುಣನ ಅಡ್ಡಿಯಾದ್ದರಿಂದ ಬಹುಬೇಗನೇ ಪಾರ್ಥನ ಶಾಲೆಯಿಂದ ನೇರವಾಗಿ ಬನಶಂಕರಿ ಚಿತಾಗಾರಕ್ಕೆ ಪಾರ್ಥೀವ ಶರೀರ ತೆಗೆದುಕೊಂಡು ಹೋಗಲಾಯಿತು. ಮಳೆಯ ಕಾರಣದಿಂದ ಬೇಗನ ವಿಧಿವಿಧಾನ ಪೂರೈಸಲು ಸಿದ್ಧತೆ ಮಾಡಿಕೊಳ್ಳಲಾಯಿತು.
ಇದಕ್ಕೂ ಮುನ್ನ ರಾಜಕೀಯ ನಾಯಕರು, ಚಿತ್ರರಂಗದ ಗಣ್ಯರು, ಬಂಧು ಬಳಗ, ಆಪ್ತರು ಹಾಗೂ ಅಭಿಮಾನಿಗಳು ಸೇರಿದಂತೆ ಸಾವಿರಾರು ಮಂದಿ ಅಕ್ಷರ ಮಾಂತ್ರಿಕನಿಗೆ ಅಂತಿಮ ನಮನ ಸಲ್ಲಿಸಿದರು. ಅಂತ್ಯ ಸಂಸ್ಕಾರದಲ್ಲೂ ಸಾಕಷ್ಟು ಅಭಿಮಾನಿಗಳು ಭಾಗಿಯಾಗಿ, ಅಕ್ಷರ ರಾಕ್ಷಸನಿಗೆ ಅಂತಿಮ ವಿದಾಯ ಹೇಳಿದರು. (ದಿಗ್ವಿಜಯ ನ್ಯೂಸ್)