ಚನ್ನಗಿರಿ: ಸರ್ಕಾರ ಜ.1 ರಿಂದ ಸಕಾಲ ಯೋಜನೆಯಡಿ ಆಹಾರ ಇಲಾಖೆಗೆ ಸಂಬಂಧಿಸಿದ ಪಡಿತರ ಚೀಟಿಗಳಲ್ಲಿನ ತಪ್ಪು, ಸಣ್ಣಪುಟ್ಟ ಬದಲಾವಣೆ, ತಿದ್ದುಪಡಿ ಮಾಡಿಕೊಳ್ಳಲು ಅನುವು ಮಾಡಿಕೊಟ್ಟಿದೆ. ಆದರೆ, ಸರ್ವರ್ ತೊಂದರೆಯಿಂದಾಗಿ ಸಾರ್ವಜನಿಕರು ದಿನವಿಡೀ ಕಾದರೂ ಸಮಸ್ಯೆ ಬಗೆಹರಿಯದಂತಾಗಿದೆ.
ಪಡಿತರ ಕಾರ್ಡ್ ತಿದ್ದುಪಡಿಗೆ ಆಹಾರ ಇಲಾಖೆಯಲ್ಲಿ ಪ್ರತಿದಿನ ಮಧ್ಯಾಹ್ನ 2 ಗಂಟೆಯಿಂದ ಸಂಜೆ 5 ಗಂಟೆವರೆಗೆ ಅವಕಾಶ ಕಲ್ಪಿಸಲಾಗಿದೆ. ಆದರೆ, ಜ.1ರಿಂದ ತಿದ್ದುಪಡಿ ಕಾರ್ಯ ನಡೆಯುತ್ತಿದ್ದರೂ ಸರ್ವರ್ ಸಮಸ್ಯೆಯಿಂದಾಗಿ ಈವರೆಗೆ ಕೇವಲ 50 ಪಡಿತರ ಕಾರ್ಡ್ ಮಾಡಲಾಗಿದೆ.
ಸಾರ್ವಜನಿಕರು ಪ್ರತಿದಿನ ಕಚೇರಿಗೆ ಬಂದು ಸರದಿ ಸಾಲಲ್ಲಿ ನಿಂತು, ಬಂದ ದಾರಿಗೆ ಸುಂಕವಿಲ್ಲ ಎನ್ನುತ್ತ ಇಲಾಖೆಗೆ ಹಿಡಿಶಾಪ ಹಾಕಿ ಮರಳುತ್ತಿದ್ದಾರೆ.
ಸರ್ಕಾರದ ಹಲವು ಯೋಜನೆ ಬಳಕೆಗಾಗಿ ಫಲಾನುಭವಿಗಳಿಗೆ ವಿವಿಧ ಕಾರ್ಡ್ ವಿತರಿಸಲಾಗಿದೆ. ಪಡಿತರ, ತಿಂಗಳ ಮಾಶಾಸನ, ಅಂಗವಿಕಲರ ವೇತನ ಸೇರಿ ಹಲವಾರು ಯೋಜನೆ ಪಡೆಯಲು ಕಾರ್ಡ್ ಕಡ್ಡಾಯಗೊಳಿಸಿದೆ. ನೀಡಿರುವ ಕಾರ್ಡ್ಗಳಲ್ಲಿ ಕೆಲವು ನ್ಯೂನತೆಗಳು ಇರುವ ಕಾರಣ ನೂರಾರು ಫಲಾನುಭವಿಗಳು ಯೋಜನೆಯಿಂದ ವಂಚಿತರಾಗಿದ್ದಾರೆ. ಇದನ್ನು ಸರಿಪಡಿಸಲು ಸರ್ಕಾರ ಕಚೇರಿಯಲ್ಲಿ ತಿದ್ದುಪಡಿಗೆ ಅವಕಾಶ ನೀಡಿದೆ.
ಸಾರ್ವಜನಿಕರ ದೂರಿನ ಮೇರೆಗೆ ಸೋಮವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಶಾಸಕ ಮಾಡಾಳು ವಿರೂಪಾಕ್ಷಪ್ಪ ಮಾತನಾಡಿ, ಜನರು ಪ್ರತಿದಿನ ಕಚೇರಿಗೆ ಅಲೆದಾಡುವುದು ಸರಿಯಲ್ಲ. ಇದರಿಂದ ಸಮಯ, ಹಣ ಎರಡೂ ವ್ಯರ್ಥವಾಗಲಿದೆ. ಇಂಟರ್ನೆಟ್ ಸರ್ವರ್ ಸಮಸ್ಯೆ ಕುರಿತು ಅಧಿಕಾರಿಗಳು ನನ್ನ ಗಮನಕ್ಕೆ ತಂದಿದ್ದು, ಸಂಬಂಧಿಸಿದ ಅಧಿಕಾರಿಗಳ ಜತೆ ಚರ್ಚಿಸಿ ಸಮಸ್ಯೆ ಬಗೆಹರಿಸುವೆ ಎಂದು ಭರವಸೆ ನೀಡಿದರು.