ಬೆಂಗಳೂರು: ಇತ್ತೀಚೆಗೆ,ಪ್ಯಾನ್ ಇಂಡಿಯನ್ಸಿನಿಮಾಗಳ ಪ್ರಮೋಷನ್ ಗೆಂದು ಆ ಚಿತ್ರದ ದೊಡ್ಡ ದೊಡ್ಡ ಸ್ಟಾರ್ ನಟರು ಭಾರತದಾದ್ಯಂತ ಪ್ರಮುಖ ಮಹಾನಗರಗಳಲ್ಲಿ ಪತ್ರಿಕಾಗೋಷ್ಠಿಯನ್ನು ಮಾಡುತ್ತಿದ್ದಾರೆ. ಇದರ ಅಂಗವಾಗಿ ‘ಪುಷ್ಪ‘ ಚಿತ್ರತಂಡ ಸಹ ಬೆಂಗಳೂರಿನಲ್ಲಿ ಇಂದು ಪತ್ರಿಕಾಗೋಷ್ಠಿ ಆಯೋಜಿಸಿತ್ತು. ಇದಕ್ಕಾಗಿ, ಈ ಸಿನಿಮಾದ ನಟರಾದ ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ಮತ್ತು ಇತರರು ಬೆಂಗಳೂರಿಗೆ ಬಂದಿಳಿದರು. ಈ ಸಂದರ್ಭದಲ್ಲಿ ತೆಲುಗು ಸೇರಿದಂತೆ ಹಲವು ಚಿತ್ರರಂಗಗಳಲ್ಲಿ ಬಹುಬೇಡಿಕೆಯ ನಟಿಯಾಗಿರುವ ಕನ್ನಡತಿ ರಶ್ಮಿಕಾ ಮಂದಣ್ಣ ಕನ್ನಡ ಪತ್ರಕರ್ತರ ಜೊತೆ ಕನ್ನಡದಲ್ಲಿ ಮಾತಾಡಲು ಪರದಾಡುತ್ತಿದ್ದದು ಕಾಣಿಸಿದೆ.
ಕನ್ನಡ ಕುವರಿ ರಶ್ಮಿಕಾ ಮಂದಣ್ಣ ಟಾಲಿವುಡ್ ಮತ್ತು ಬಾಲಿವುಡ್ನಲ್ಲಿ ಸಿನಿಮಾಗಳು ಮಾಡುವುದು ಆರಂಭಿಸಿದ ನಂತರ ಕನ್ನಡ ಸಿನಿಮಾಗಳಲ್ಲಿ ನಟಿಸುವುದು ತುಂಬಾನೆ ಕಡಿಮೆ ಮಾಡಿದ್ದಾರೆ. ಜೊತೆಗೆ, ಕನ್ನಡ ಮಾತಾಡಲು ಬರುವುದಿಲ್ಲ ಎಂಬಂತೆ ವರ್ತಿಸಿ ಹಲವು ಬಾರಿ ಟೀಕೆಗೆ ಗುರಿಯಾಗಿದ್ದಾರೆ. ಇದಕ್ಕೆ, ಹಲವು ಬಾರಿ ಟ್ರೋಲ್ ಸಹ ಆಗಿದ್ದಾರೆ. ಆದರೆ, ಇಂದು ‘ಪುಷ್ಪ‘ ಚಿತ್ರದ ಪತ್ರಿಕಾಗೋಷ್ಠಿಯಲ್ಲೂ ಕನ್ನಡದಲ್ಲಿ ಮಾತಾಡದೆ ತಮ್ಮ ಹಳೆ ಚಾಳಿಯನ್ನು ಮುಂದುವರಿಸಿದ್ದಾರೆ. ಇದು ಕೂಡ ಈಗ ಕನ್ನಡಿಗರನ್ನು ಇರಿಟೇಟ್ ಮಾಡಿದೆ.
ಕಾರ್ಯಕ್ರಮದ ನಿರೂಪಕಿ ಚಿತ್ರದ ಕನ್ನಡದ ಡೈಲಾಗ್ ಹೇಳಲು ವಿನಂತಿಸಿದಾಗ ಕೂಡ, ”ತೆಲುಗು ಡಬ್ಬಿಂಗ್ ಮಾಡಿ ಮಾಡಿ ಈಗ ಕನ್ನಡ ಬರುತ್ತಿಲ್ಲ” ಎಂದಿದ್ದಾರೆ. ಇಡೀ ಕಾರ್ಯಕ್ರಮದಲ್ಲಿ ಮಾತಾಡುತ್ತಿರುವಾಗ ನಟಿ ರಶ್ಮಿಕಾ ಮಾತುಗಳಲ್ಲಿ ಶೇ.80ಕ್ಕೂ ಹೆಚ್ಚು ಇಂಗ್ಲೀಷ್ ಕೇಳಿಬಂದಿತ್ತು. ಕೆಲ ಹೊತ್ತಿನ ನಂತರ ಹಿಂದಿಯಲ್ಲಿ ಮಾತಾಡಲು ಆರಂಭಿಸಿದ ನಟಿ ರಶ್ಮಿಕಾ, ಅಯ್ಯೋ ”ಹಿಂದಿಯಲ್ಲಿ ಮಾತಾಡಲು ಆರಂಭಿಸಿದ್ದೇನೆ. ಕನ್ನಡಾನೆ ಬರುತ್ತಿಲ್ಲ. ಎಲ್ಲಾ ಭಾಷೆಗಳು ಮಾತಾಡಿ ಈಗ ಎಲ್ಲಾ ಭಾಷೆಗಳು ಮಿಕ್ಸ್ ಆಗುತ್ತಿವೆ ನಂಗೆ” ಎಂಬಂತೆ ತಮಗೆ ತಾವು ಬುದ್ಥಿವಾದ ಹೇಳಿಕೊಂಡಂಗೆ ಮಾತಾಡಿದ್ದಾರೆ.
ಈ ಹಿಂದೆ ಸಿನಿಮಾದ ಟ್ರೈಲರ್ ಬಿಡುಗಡೆಯಾದಾಗ, ‘ಪುಷ್ಪ‘ ಚಿತ್ರದ ತೆಲುಗಿನ ಭಾಷೆಯಲ್ಲಿ ನಟಿ ರಶ್ಮಿಕಾ ಅವರೆ ಡಬ್ಬಿಂಗ್ ನೀಡಿದ್ದು ಕಂಡುಬಂದಿದೆ. ಆದರೆ, ‘ಪುಷ್ಪ‘ ಸಿನಿಮಾದ ಕನ್ನಡ ಅವತರಣೆಕೆಗೆ ರಶ್ಮಿಕಾ ಡಬ್ಬಿಂಗ್ ನೀಡಿಲ್ಲ. ಇದು, ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿತ್ತು. ಕನ್ನಡದಲ್ಲಿ ಡಬ್ಬಿಂಗ್ ನೀಡದಕ್ಕೆ ಕಾರಣ ಇವತ್ತು ಪತ್ರಿಕಾಗೋಷ್ಠಿಯಲ್ಲಿ ನೀಡಿದ್ದಾರೆ ರಶ್ಮಿಕಾ. ಸಮಯದ ಆಭಾವದಿಂದ ಚಿತ್ರದ ಕನ್ನಡ ಅವತರಣೆಕೆಗೆ ಡಬ್ಬಿಂಗ್ ನೀಡಲು ಆಗಿಲ್ಲ ಎಂದು ಹೇಳಿದ್ದಾರೆ ನ್ಯಾಷನಲ್ ಕ್ರಶ್. ‘ಪುಷ್ಪ‘ ಚಿತ್ರ 2 ಭಾಗಗಳಲ್ಲಿ ಮೂಡಿಬರಲಿದ್ದು, ಮೊದಲ ಭಾಗ ”ಪುಷ್ಪ: ದಿ ರೈಸ್” ಡಿ. 17ರಂದು ತೆರೆಗೆ ಅಪ್ಪಳಿಸಲಿದೆ. ಚಿತ್ರತಂಡ ಸಿನಿಮಾ ಬಿಡುಗಡೆಯ ಕೊನೆಯ ಹಂತದವರೆಗೂ ಪ್ರಚಾರದಲ್ಲಿ ತೊಡಗಿಕೊಂಡಿದೆ.