ರಾಣೆಬೆನ್ನೂರ: ವಂದೇ ಭಾರತ್ ರೈಲು ಹತ್ತುವ ಸಲುವಾಗಿ ನಗರದಿಂದ ದಾವಣಗೆರೆಯ ರೈಲು ನಿಲ್ದಾಣಕ್ಕೆ ತೆರಳುವ ಪ್ರಯಾಣಿಕರಿಗೆ ವಿಶೇಷ ಬಸ್ ಸಂಪರ್ಕ ಕಲ್ಪಿಸಬೇಕು ನಗರದ ಸ್ಟೇಷನ್ ರಸ್ತೆ ವರ್ತಕರ ಸಂಘದ ಅಧ್ಯಕ್ಷ ಜಿ.ಜಿ. ಹೊಟ್ಟಿಗೌಡ್ರ ಆಗ್ರಹಿಸಿದ್ದಾರೆ.
ವಾರದಲ್ಲಿ (ಮಂಗಳವಾರ ಹೊರತುಪಡಿಸಿ) ಆರು ದಿನ ಬೆಂಗಳೂರಿನಿಂದ ಧಾರವಾಡಕ್ಕೆ ಹಾಗೂ ಧಾರವಾಡದಿಂದ ಬೆಂಗಳೂರಿಗೆ ಸಂಚರಿಸುವ ವಂದೇ ಭಾರತ್ ರೈಲಿಗೆ ಸದ್ಯ ಬೆಂಗಳೂರು, ಯಶವಂತಪುರ ನಿಲ್ದಾಣ ಬಿಟ್ಟರೆ ದಾವಣಗೆರೆ ರೈಲು ನಿಲ್ದಾಣದಲ್ಲಿ ಮಾತ್ರ ನಿಲುಗಡೆಯಿದೆ.
ಆದ್ದರಿಂದ ರಾಣೆಬೆನ್ನೂರಿನಿಂದ ಈ ರೈಲಿನ ಮೂಲಕ ಬೆಂಗಳೂರು ಹಾಗೂ ಧಾರವಾಡದ ಕಡೆ ಸಂಚರಿಸುವ ಪ್ರಯಾಣಿಕರ ಅನುಕೂಲಕ್ಕಾಗಿ ನಗರದ ಬಸ್ ನಿಲ್ದಾಣದಿಂದ ದಾವಣಗೆರೆ ರೈಲು ನಿಲ್ದಾಣದವರೆಗೆ ಹಾಗೂ ಅಲ್ಲಿಂದ ರಾಣೆಬೆನ್ನೂರ ಬಸ್ ನಿಲ್ದಾಣದವರೆಗೆ ಬಸ್ನ ಸೌಲಭ್ಯ ಕಲ್ಪಿಸಲು ರೈಲ್ವೆ ಇಲಾಖೆ ಹಿರಿಯ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.