ರಾಣೆಬೆನ್ನೂರ: ಧರ್ಮವನ್ನು ಬಿಟ್ಟು ಬದುಕಲು ಸಾಧ್ಯವಿಲ್ಲ. ನಿತ್ಯವೂ ಸ್ನಾನ ಮಾಡಿ ಪೂಜೆ ಮಾಡಿದ ನಂತರ ಪ್ರಸಾದ ಸ್ವೀಕರಿಸುವ ಪದ್ಧತಿ ರೂಢಿಸಿಕೊಳ್ಳಬೇಕು. ಆಗ ಮಾತ್ರ ಉತ್ತಮ ಸಂಸ್ಕಾರ ಹೊಂದಲು ಸಾಧ್ಯ ಎಂದು ರಟ್ಟಿಹಳ್ಳಿ ಕಬ್ಬಿಣಕಂತಿಮಠದ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಇಲ್ಲಿನ ಗುರುಕೊಟ್ಟೂರೇಶ್ವರ ಮಠದ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಿದ್ದ ಜಂಗಮ ವಟುಗಳಿಗೆ ಉಚಿತ ಸಾಮೂಹಿಕ ಶಿವದೀಕ್ಷಾ (ಅಯ್ಯಚಾರ) ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ನಾವು ಮಾಡುವ ಕಾಯಕದಲ್ಲಿ ಆನಂದ ಕಾಣುತ್ತಾ ಭಗವಂತನನ್ನು ಸಾಕ್ಷಾತ್ಕಾರ ಮಾಡಿಕೊಳ್ಳಬೇಕಿದೆ. ಈ ಮೂಲಕ ನಮ್ಮ ಹೃದಯದಲ್ಲಿ ಸ್ಥಾಪಿಸಿಕೊಳ್ಳಬೇಕು. ಆಗ ಆತ ಅಲ್ಲಿಂದ ಹೊರ ಹೋಗಲು ಸಾಧ್ಯವಿಲ್ಲ. ಜಂಗಮರಾದವರು ಬೇರೆಯವರ ಬದುಕಿಗೆ ಸಂಸ್ಕಾರ ನೀಡುವ ಕಾರ್ಯ ಮಾಡಬೇಕಿದೆ ಎಂದರು.
ನೆಗಳೂರು ಹಿರೇಮಠದ ಗುರುಶಾಂತೇಶ್ವರ ಶಿವಾಚಾರ್ಯ ಸ್ವಾಮೀಜಿ ಅವರು ಮಾತನಾಡಿ, ಭಸ್ಮ, ಮಂತ್ರ, ಪೂಜೆ, ಶಿವನ ಆರಾಧನೆ, ಗುರುಕಾರುಣ್ಯ ಜಂಗಮ ಮೂಲ ಮಂತ್ರವಾಗಿದೆ. ಜನನ ಮತ್ತು ಮರಣದಲ್ಲಿಯೂ ಸಹ ಜಂಗಮರ ಅಗತ್ಯವಿದೆ. ಎಲ್ಲರಿಗೂ ಉಪದೇಶ ನೀಡುವುದರ ಮೂಲಕ ಸ್ವಾಸ್ಥ್ಯ ಸಮಾಜದ ನಿರ್ಮಾಣಕ್ಕೆ ನೆರವಾಗುತ್ತಾರೆ ಎಂದರು.
ಗುಡ್ಡದ ಆನ್ವೇರಿಯ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದರು.
ಪ್ರಮುಖರಾದ ವಿಶ್ವನಾಥ ಅಜ್ಜೇವಡಿಮಠ, ಕೊಟ್ರೇಶ ಕೆಂಚಪ್ಪನವರ, ಪರಮೇಶ ಯಡಿಯಾಪುರ, ಸುಜೀತ ಜಂಬಿಗಿ, ಸತೀಶ ಅಜ್ಜೇವಡಿಮಠ, ಸರೋಜಾ ಅಜ್ಜೇವಡಿಮಠ, ಅರ್ಚಕರಾದ ಶಾಂತಯ್ಯ ಕೊಟಿಕಲ್ಮಠ, ಹಾಲಶಿದ್ದ ಶಾಸ್ತ್ರಿ, ಶಿವಕುಮಾರ ಹಿರೇಮಠ, ಶಶಿಧರ ಮಠ, ಗೌರಿಶಂಕರ ನೆಗಳೂರುಮಠ, ರವಿಕುಮಾರ ಪಾಟೀಲ ಮತ್ತಿತರರು ಇದ್ದರು.