ಬೆಂಗಳೂರು: ‘ಸ್ವಾತಿ ಮುತ್ತಿನ ಮಳೆಹನಿಯೇ’ ಎಂಬ ಶೀರ್ಷಿಕೆಯನ್ನು ಯಾರಿಗೂ ಕೊಡಬಾರದು ಎಂದು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದ ಹಿರಿಯ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಅವರಿಗೆ ಹಿನ್ನೆಡೆ ಉಂಟಾಗಿದೆ. ರಾಜೇಂದ್ರ ಸಿಂಗ್ ಬಾಬು ಪರವಾಗಿ ನೀಡಿದ್ದ ಮಧ್ಯಂತರ ತಡೆಯನ್ನು ತೆರವುಗೊಳಿಸಿ ಸಿಟಿಸಿವಿಲ್ ಕೋರ್ಟ್ ಆದೇಶ ಹೊರಡಿಸಿದ್ದು, ಚಿತ್ರ ನಿರ್ಮಾಣ ಮಾಡುವುದಕ್ಕೆ ಇದ್ದ ಅಡ್ಡಿ ನಿವಾರಣೆಯಾಗಿದೆ.
ಇದನ್ನೂ ಓದಿ: ಕಾಲಿಗೆ ಬೇಕಾದ್ರೂ ಬೀಳ್ತೀನಿ ಆ ಫೋಟೋ ಡಿಲೀಟ್ ಮಾಡಿ: ಸೀತಾ ಮಹಾಲಕ್ಷ್ಮೀಗೆ ಫ್ಯಾನ್ಸ್ ಮನವಿ
ಇದಕ್ಕೂ ಮುನ್ನ, ಸ್ಯಾಂಡಲ್ವುಡ್ ನಟಿ ರಮ್ಯಾ ನಿರ್ಮಾಣದಲ್ಲಿ ‘ಸ್ವಾತಿಮುತ್ತಿನ ಮಳೆ ಹನಿಯೇ’ ಎಂಬ ಚಿತ್ರ ಕಳೆದ ವರ್ಷ ಸೆಟ್ಟೇರಿತ್ತು. ಚಿತ್ರದ ಚಿತ್ರೀಕರಣ ಮುಗಿದು ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿರುವಾಗಲೇ, ಆ ಶೀರ್ಷಿಕೆಯನ್ನು ಬಳಸಬಾರದು ಮತ್ತು ಆ ಶೀರ್ಷಿಕೆಯನ್ನು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ನೀಡುವಂತಿಲ್ಲ ಎಂದು ಹಿರಿಯ ನಿರ್ದೇಶಕ ಎಸ್ ವಿ ರಾಜೇಂದ್ರಸಿಂಗ್ ಬಾಬು ನೊಟೀಸ್ ನೀಡಿದ್ದರು.
‘ಸ್ವಾತಿ ಮುತ್ತಿನ ಮಳೆ ಹನಿಯೇ’ ಶೀರ್ಷಿಕೆ ತಮಗೆ ಸೇರಿದ್ದು ಎಂದಿದ್ದ ಬಾಬು, ”ಸ್ವಾತಿ ಮುತ್ತಿನ ಮಳೆ ಹನಿಯೇ’ ಹಾಡು ನನ್ನ ‘ಬಣ್ಣದ ಗೆಜ್ಜೆ’ ಚಿತ್ರದ್ದು. ಅದನ್ನು ನನ್ನ ಬಿಟ್ಟರೆ ಯಾರೂ ಬಳಸುವಂತಿಲ್ಲ. ರಮ್ಯಾ ಅವರು ಟೈಟಲ್ ರಿಜಿಸ್ಟರ್ ಮಾಡದೇ ಸಿನಿಮಾ ಮಾಡಿದ್ದಾರೆ. ನಾನು ಕೂಡ ಈ ಟೈಟಲ್ ರಿಜಿಸ್ಟರ್ ಮಾಡಿಸಿಲ್ಲ. ಆ ಶೀರ್ಷಿಕೆಯನ್ನು ರಿಜಿಸ್ಟರ್ ಮಾಡಿಸುವ ಅವಶ್ಯಕತೆಯೂ ಇಲ್ಲ. ಏಕೆಂದರೆ, ಅದು ನನ್ನ ಸಿನಿಮಾದ ಸಾಹಿತ್ಯದ ಸಾಲಾಗಿದೆ. ಆ ಟೈಟಲ್ ನನಗೆ ಸೇರಬೇಕು. ಈ ಸಂಬಂಧ ನ್ಯಾಯಾಲಯದಲ್ಲೂ ನನಗೆ ಜಯ ಸಿಕ್ಕಿದ್ದು, ಆ ಶೀರ್ಷಿಕೆ ತಡೆಹಿಡಿಯುವಂತೆ ಮಧ್ಯಂತರ ತಡೆ ಸಿಕ್ಕಿದೆ. ಹಾಗಾಗಿ, ಯಾರೂ ಆ ಹೆಸರನ್ನು ಬಳಸುವಂತಿಲ್ಲ’ ಎಂದು ಹೇಳಿದ್ದರು.
ಇದನ್ನೂ ಓದಿ: ಬಿಜೆಪಿ ಸೇರ್ಪಡೆ ಹಾಗೂ ಬೆದರಿಕೆ ಪತ್ರ ವಿಚಾರ: ನಟ ಸುದೀಪ್ ಕೊಟ್ಟ ಸ್ಪಷ್ಟನೆ ಹೀಗಿದೆ…
ಆದರೆ, ಆ ನಿರ್ಬಂಧವನ್ನು ನ್ಯಾಯಾಲಯವು ತೆರವುಗೊಳಿಸಿ, ರಮ್ಯಶ ಪರವಾಗಿ ಕೋರ್ಟ್ ಆದೇಶ ಹೊರಡಿಸಿದೆ. ಇದರಿಂದ ‘ಸ್ವಾತಿಮುತ್ತಿನ ಮಳೆ ಹನಿಯೇ’ ಹೆಸರಿನ ಸಿನಿಮಾ ನಿರ್ಮಾಣ ಮಾಡಲು ರಮ್ಯಾ ಅವರಿಗಿದ್ದ ಅಡ್ಡಿ ನಿವಾರಣೆಯಾಗಿದ್ದು, ಅದೇ ಹೆಸರಿನಲ್ಲಿ ಸಿನಿಮಾ ಬಿಡುಗಡೆ ಮಾಡಬಹುದಾಗಿದೆ.