ರಾಮನಗರ: ನಿಖಿಲ್ ಮತ್ತು ರೇವತಿ ಮದುವೆಯನ್ನು ಸರಳವಾಗಿ ಮಾಡಲು ನಿರ್ಧರಿಸುವುದಾಗಿ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ತಿಳಿಸಿದ್ದಾರೆ.
ರಾಮನಗರದ ಕೇತಗಾನಹಳ್ಳಿಯ ತೋಟದ ಮನೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನಿಖಿಲ್-ರೇವತಿ ವಿವಾಹವನ್ನು ಬೆಂಗಳೂರಿನಲ್ಲಿ ನಡೆಸಲು ಸಿದ್ಧತೆ ಮಾಡಿದ್ದೆವು. ಆದರೆ, ಕರೊನಾ ಸೋಂಕಿನ ವಿಚಾರದಲ್ಲಿ ಬೆಂಗಳೂರು ರೆಡ್ ಜೋನ್ನಲ್ಲಿ ಇರುವುದರಿಂದ ಸರ್ಕಾರದ ನಿಯಮದ ಪ್ರಕಾರ ಬೆಂಗಳೂರಿನಲ್ಲಿ ಮದುವೆ ಮಾಡಲು ಸಾಧ್ಯವಾಗಲಿಲ್ಲ. ರಾಮನಗರದಲ್ಲಿ ಮದುವೆ ಮಾಡಬೇಕು ಅಂದುಕೊಂಡಿದ್ದೆವು. ಅದೇ ರೀತಿ ನಮ್ಮ ತೋಟದ ಮನೆಯಲ್ಲಿ ಸರಳವಾಗಿ ಮದುವೆ ಮಾಡಲಾಗುತ್ತಿದೆ ಎಂದು ತಿಳಿಸಿದರು.
ನಮ್ಮ ಕುಟುಂಬದ ಆಪ್ತರು ಮಾತ್ರ ಮದುವೆ ಕಾರ್ಯದಲ್ಲಿ ಭಾಗಿಯಾಗ್ತಾರೆ. ದಯವಿಟ್ಟು ನಮ್ಮ ಕಾರ್ಯಕರ್ತರು, ಪಕ್ಷದ ಮುಖಂಡರಲ್ಲಿ ಕೈ ಮುಗಿದು ಪ್ರಾರ್ಥನೆ ಮಾಡುತ್ತೇನೆ. ಯಾರು ಸಹ ಮದುವೆ ಕಾರ್ಯಕ್ಕೆ ಬರಬೇಡಿ. ನಿಮ್ಮೆಲ್ಲರ ನಡುವೆ ಮದುವೆ ಮಾಡಲು ಆಗುತ್ತಿಲ್ಲ ಎಂಬ ನೋವು ನನಗಿದೆ. ಎಲ್ಲರೂ ಮನೆಯಲ್ಲೇ ಇದ್ದು ನಿಖಿಲ್- ರೇವತಿಗೆ ಆಶಿರ್ವಾದ ಮಾಡಿ ಎಂದು ಕೇಳಿಕೊಂಡರು.
ಎಲ್ಲರೂ ಮದುವೆಗೆ ಬಂದರೆ ಸರ್ಕಾರದ ಆದೇಶ ಉಲ್ಲಂಘನೆ ಮಾಡಿದ ರೀತಿ ಆಗುತ್ತೆ. ನಮ್ಮ ಕುಟುಂಬದ ಸದಸ್ಯರ ನಡುವೆ ಅತ್ಯಂತ ಸಣ್ಣದಾಗಿ ವಿವಾಹ ಸಮಾರಂಭ ಮಾಡ್ತಿದ್ದೇವೆ. ನಮ್ಮ ಜಿಲ್ಲೆಯಲ್ಲಿ ಒಂದೇ ಒಂದು ಪಾಸಿಟಿವ್ ಕೇಸ್ ದಾಖಲಾಗಿಲ್ಲ. ಅದು ನನ್ನ ಅದೃಷ್ಟವೆಂದರು.
ಮದುವೆ ನಡೆಸಲು ಸರ್ಕಾರದಿಂದಲೂ ಅನುಮತಿ ಪಡೆದಿದ್ದೇನೆ. ವೈದ್ಯರ ಸಲಹೆ ಪಡೆದುಕೊಂಡೆ ನಾನು ಈ ರೀತಿ ನಿರ್ಧಾರ ಮಾಡಿದ್ದೇನೆ. ದಯವಿಟ್ಟು ಕಾರ್ಯಕರ್ತರು ಬಂದು ಗೊಂದಲ ಸೃಷ್ಟಿ ಮಾಡುವುದು ಬೇಡ. ಮುಂದಿನ ದಿನಗಳಲ್ಲಿ ನಿಮ್ಮೆಲ್ಲರ ಸಮ್ಮುಖದಲ್ಲೇ ಆರತಕ್ಷತೆ ಮಾಡ್ತೇನೆ ಎಂದು ಹೇಳಿದರು. (ದಿಗ್ವಿಜಯ ನ್ಯೂಸ್)