ಮಾನ್ವಿ: ಅಯೋಧ್ಯೆ ರಾಮಮಂದಿರ ನಿರ್ಮಾಣ ಕಾರ್ಯದಲ್ಲಿ ತಾಲೂಕಿನ ಜಾನೇಕಲ್ ಗ್ರಾಮದ ಯುವ ಶಿಲ್ಪಿ ವೀರೇಶ ಸಣ್ಣ ವೀರಭದ್ರಪ್ಪ ಬಡಿಗೇರ ತೊಡಗಿದ್ದಾರೆ.
ಧಾರವಾಡದ ಹಿರಿಯ ಕಲಾವಿದ ರವೀಂದ್ರ ಆಚಾರ್ ಅವರ ಶಿಫಾರಸಿನ ಮೇರೆಗೆ ವೀರೇಶ ಬಡಿಗೇರ ಅಕ್ಟೋಬರ್ನಲ್ಲಿ ಅಯೋಧ್ಯೆಗೆ ತೆರಳಿದ್ದರು. ಅ.20 ರಿಂದ ನ.25 ರವರೆಗೆ ರಾಮ ಮಂದಿರದ ಗೋಪುರ, ಗರ್ಭಗುಡಿ ಮುಂಭಾಗ ಹಾಗೂ ಕಂಬಗಳಲ್ಲಿ ನವಿಲು, ವಿವಿಧ ವಿನ್ಯಾಸದ ಬಳ್ಳಿಗಳ ಕೆತ್ತನೆ, ಕುಸುರಿ ಕೆಲಸ ನಿರ್ವಹಿಸಿದ್ದಾರೆ. ಕರ್ನಾಟಕದಿಂದ ಎಂಟು ಜನ ಕಲಾವಿದರು ಅಯೋಧ್ಯೆಗೆ ತೆರಳಿದ್ದು ಈ ಪೈಕಿ ನಾನು ಕೂಡ ಒಬ್ಬ ಎಂದು ವೀರೇಶ ಬಡಿಗೇರ ತಿಳಿಸಿದ್ದಾರೆ.
ವೀರೇಶ ಬಡಿಗೇರ ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ಕೆಂಗಲ್ ಗ್ರಾಮದಲ್ಲಿರುವ ಶ್ರೀ ಗಂಗರಸ ಶಿಲ್ಪಕಲಾ ಶಿಕ್ಷಣ ಕೇಂದ್ರದಲ್ಲಿ ಬಿವಿಎ (ಸಾಂಪ್ರದಾಯಿಕ ಶಿಲ್ಪಕಲಾ) ಪದವಿ ಪಡೆದಿದ್ದಾರೆ. ಕಳೆದ 10 ವರ್ಷಗಳಿಂದ ಶಿಲ್ಪಕಲಾ ವೃತ್ತಿಯಲ್ಲಿ ತೊಡಗಿಕೊಸಿಕೊಂಡಿದ್ದಾರೆ. ರಾಜ್ಯದ ವಿವಿಧೆಡೆ ಆಯೋಜಿಸಲಾಗಿದ್ದ ಶಿಲ್ಪ ಕಲಾ ಶಿಬಿರಗಳಲ್ಲಿ ಭಾಗವಹಿಸಿದ್ದಾರೆ. ಇದುವರೆಗೆ ಮೂವತ್ತಕ್ಕೂ ಅಧಿಕ ಮೂರ್ತಿಗಳು ಹಾಗೂ ಮಂಟಪಗಳ ಕೆತ್ತನೆ ಮಾಡಿದ್ದಾರೆ.