ಹನೂರು: ತಾಲೂಕಿನ ಹಿರಿಯಂಬಲ ಗ್ರಾಮದಲ್ಲಿ 15 ಹಸುಗಳಿಗೆ ಮಚ್ಚಿನಿಂದ ಹಲ್ಲೆ ನಡೆಸಿರುವ ಟಿಬೆಟಿಯನ್ ವ್ಯಕ್ತಿಯನ್ನು ಗಡಿಪಾರು ಮಾಡುವಂತೆ ಒತ್ತಾಯಿಸಿ ಸೋಮವಾರ ಒಡೆಯರಪಾಳ್ಯದಲ್ಲಿ ರೈತ ಸಂಘ ಹಾಗೂ ಹಸಿರು ಸೇನೆಯ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು.
ಈ ವೇಳೆ ಜಿಲ್ಲಾಧ್ಯಕ್ಷ ಹೊನ್ನೂರು ಪ್ರಕಾಶ್ ಮಾತನಾಡಿ, ಕಳೆದ 15 ದಿನದ ಹಿಂದೆ ಒಡೆಯರಪಾಳ್ಯದ ಟಿಬೆಟಿಯನ್ ಕ್ಯಾಂಪ್ ನಿವಾಸಿಯೊಬ್ಬ 15 ಹಸುಗಳ ಕಾಲುಗಳಿಗೆ ಮಚ್ಚಿನಿಂದ ಹಲ್ಲೆ ನಡೆಸಿರುವುದು ಅಕ್ಷಮ್ಯ ಅಪರಾಧ. ಇದರಿಂದ ಜಾನುವಾರುಗಳನ್ನು ನಂಬಿದ್ದ ಕುಟುಂಬಗಳು ತುಂಬ ತೊಂದರೆ ಅನುಭವಿಸುವಂತಾಗಿದೆ. ಆದರೆ ಜಾಮೀನಿನ ಮೇಲೆ ಬಿಡುಗಡೆಗೊಂಡಿರುವ ಆ ವ್ಯಕ್ತಿ ಗ್ರಾಮಕ್ಕೆ ಆಗಮಿಸಿ ರೈತರ ಮೇಲೆ ಭಯ ಉಂಟು ಮಾಡುತ್ತಿದ್ದಾನೆ. ಇದರಿಂದ ಘರ್ಷಣೆಗೆ ಕಾರಣವಾಗುತ್ತದೆ. ಆದರೆ ಈ ಬಗ್ಗೆ ಅಧಿಕಾರಿಗಳು ಕ್ರಮವಹಿಸದಿರುವುದು ಎಷ್ಟರ ಮಟ್ಟಿಗೆ ಸರಿ? ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಹಸುಗಳ ಮೇಲೆ ಹಲ್ಲೆ ನಡೆಸಿದ ವ್ಯಕ್ತಿಯನ್ನು ಗಡಿಪಾರು ಮಾಡಬೇಕು. ಈ ಸಂಬಂಧ ಟಿಬೆಟಿಯನ್ ಮುಖ್ಯಸ್ಥರೇ ಜವಾಬ್ದಾರಿ ವಹಿಸಿಕೊಳ್ಳುವುದರ ಮೂಲಕ ಪೊಲೀಸ್ ಠಾಣೆಯಲ್ಲಿ ದೂರು ನೀಡಬೇಕು. ಜತೆಗೆ ಇಂತಹ ಘಟನೆಗಳು ಮುಂದಿನ ದಿನಗಳಲ್ಲಿ ಮರುಕಳಿಸದಂತೆ ನೋಡಿಕೊಳ್ಳಬೇಕು. ಸ್ಥಳೀಯರೊಂದಿಗೆ ಶಾಂತಿ, ಸೌಹರ್ದತೆ ಕಾಪಾಡಿಕೊಳ್ಳಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಈ ವೇಳೆ ಟಿಬೆಟಿಯನ್ ಆಡಳಿತಾಧಿಕಾರಿ ಗೆಲಾಕ್ ಮಾತನಾಡಿ, ಗಡಿಪಾರು ಮಾಡುವ ಸಂಬಂಧ ಅಗತ್ಯ ಕ್ರಮಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ ಬಳಿಕ ಪ್ರತಿಭಟನೆ ಕೈ ಬಿಡಲಾಯಿತು. ಈ ಸಂದರ್ಭದಲ್ಲಿ ಉಪ ತಹಸೀಲ್ದಾರ್ ವೆಂಕಟೇಶ್, ಆರ್ಐ ಮಾದೇಶ್, ರೈತ ಮುಖಂಡರಾದ ಮಂಜುನಾಥ್, ನವೀನ್, ಬಸವರಾಜು, ಶಿವಾನಂದ, ಪುಟ್ಟೇಗೌಡ, ಶಿವು, ಮಹೇಶ್, ಶ್ರೀನಿವಾಸ್ ಇನ್ನಿತರರು ಇದ್ದರು.