ನವದೆಹಲಿ: ಎಡಗೈ ಬ್ಯಾಟ್ಸ್ಮನ್ ಸುರೇಶ್ ರೈನಾ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಗೆ (ಬಿಸಿಸಿಐ) ಯಾವುದೇ ಮಾಹಿತಿ ನೀಡದೆ ದಿಢೀರ್ ವಿದಾಯ ಪ್ರಕಟಿಸಿರುವುದು ಬೆಳಕಿಗೆ ಬಂದಿದೆ. ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತಿ ನಿರ್ಧಾರವನ್ನು ಸಾರ್ವಜನಿಕವಾಗಿ ಘೋಷಿಸಿದ ಮರುದಿನವಷ್ಟೇ ರೈನಾ ಬಿಸಿಸಿಐಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ.
ಶನಿವಾರ ಧೋನಿ ಬೆನ್ನಲ್ಲೇ ರೈನಾ ಕೂಡ ನಿವೃತ್ತಿ ಪ್ರಕಟಿಸಿದ್ದರೂ, ಬಿಸಿಸಿಐ ಟ್ವಿಟರ್ ಖಾತೆಯಲ್ಲಿ ಧೋನಿ ವಿದಾಯಕ್ಕೆ ಮಾತ್ರ ಗೌರವ ಸಲ್ಲಿಕೆಯಾಗಿತ್ತು. ಈ ಬಗ್ಗೆ ಭಾನುವಾರ ರೈನಾ ಅಭಿಮಾನಿಗಳಿಂದ ಟೀಕೆ ವ್ಯಕ್ತವಾಗಿತ್ತು. ಭಾನುವಾರ ರಾತ್ರಿಯ ವೇಳೆಗಷ್ಟೇ ಬಿಸಿಸಿಐ, ರೈನಾ ನಿವೃತ್ತಿಯ ಬಗ್ಗೆ ಪ್ರಕಟಣೆ ಹೊರಡಿಸಿತ್ತು. ಸೋಮವಾರ ಈ ಬಗ್ಗೆ ಸ್ಪಷ್ಟನೆ ನೀಡಿರುವ ಬಿಸಿಸಿಐ, ರೈನಾ ನಿವೃತ್ತಿ ನಿರ್ಧಾರದ ಬಗ್ಗೆ ಭಾನುವಾರವಷ್ಟೇ ಮಂಡಳಿಗೆ ಅಧಿಕೃತ ಮಾಹಿತಿ ನೀಡಿದ್ದರು ಎಂದಿದೆ. ಕ್ರಿಕೆಟಿಗರು ನಿವೃತ್ತಿ ಪ್ರಕಟಿಸುವುದಕ್ಕೆ ಮುನ್ನ ಬಿಸಿಸಿಐಗೆ ನಿರ್ಧಾರವನ್ನು ತಿಳಿಸುವುದು ಸಾಮಾನ್ಯವಾದ ವಾಡಿಕೆಯಾಗಿದೆ.
ರೈನಾ ಇನ್ಸ್ಟಾಗ್ರಾಂನಲ್ಲಿ ನಿವೃತ್ತಿ ಪ್ರಕಟಿಸಿದ 29 ಗಂಟೆಗಳ ಬಳಿಕವಷ್ಟೇ ಪ್ರಕಟಣೆ ಹೊರಡಿಸಿರುವ ಬಿಸಿಸಿಐ, ಸೀಮಿತ ಓವರ್ ಕ್ರಿಕೆಟ್ನಲ್ಲಿ ರೈನಾ ಭಾರತ ತಂಡದ ಪ್ರಮುಖ ಸದಸ್ಯರಾಗಿದ್ದರು ಎಂದಿದೆ. 33 ವರ್ಷದ ರೈನಾ ಭಾರತ ಪರ 13 ವರ್ಷಗಳ ವೃತ್ತಿಜೀವನದಲ್ಲಿ 18 ಟೆಸ್ಟ್, 226 ಏಕದಿನ ಮತ್ತು 78 ಟಿ20 ಪಂದ್ಯಗಳನ್ನು ಆಡಿದ್ದಾರೆ. ಅಲ್ಲದೆ 3 ಸರಣಿಗಳಲ್ಲಿ ನಾಯಕರೂ ಆಗಿದ್ದರು. ಭಾರತ ಪರ ಎಲ್ಲ 3 ಕ್ರಿಕೆಟ್ ಪ್ರಕಾರಗಳಲ್ಲಿ ಶತಕ ಸಿಡಿಸಿದ ಮೊದಲ ಸಾಧಕರೆನಿಸಿದ್ದಾರೆ.
ಇದನ್ನೂ ಓದಿ: ಧೋನಿ ಸ್ಥಾನ ತುಂಬುವ ಆಟಗಾರ ಗೂಗಲ್ಗೂ ಸಿಗುತ್ತಿಲ್ಲ!
ರೈನಾ ನಿವೃತ್ತಿ ಜೀವನಕ್ಕೆ ಶುಭ ಹಾರೈಸಿರುವ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ‘ಮಧ್ಯಮ ಮತ್ತು ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಇಳಿದು ಪಂದ್ಯ ಗೆಲ್ಲಿಸುವ ಇನಿಂಗ್ಸ್ ಆಡುವುದಕ್ಕೆ ವಿಶೇಷ ಪ್ರತಿಭೆ ಮತ್ತು ಕೌಶಲ ಅಗತ್ಯ. ಏಕದಿನ ಕ್ರಿಕೆಟ್ನಲ್ಲಿ ರೈನಾ ಅವರು ಧೋನಿ ಮತ್ತು ಯುವರಾಜ್ ಜತೆಗೆ ಬಲಿಷ್ಠ ಮಧ್ಯಮ ಕ್ರಮಾಂಕ ರಚಿಸಿದ್ದರು’ ಎಂದಿದ್ದಾರೆ.
ಐಪಿಎಲ್ ಭಾರತದಲ್ಲೇ ನಡೆಯಲಿ, ಹೈಕೋರ್ಟ್ ಮೆಟ್ಟಿಲೇರಿದ ಕ್ರಿಕೆಟ್ ಪ್ರೇಮಿ ವಕೀಲ!