ಮುಂಬೈ: ಐಪಿಎಲ್ 13ನೇ ಆವೃತ್ತಿ ಯುಎಇಗೆ ಬದಲಾಗಿ ಭಾರತದಲ್ಲೇ ನಡೆಯಬೇಕೆಂದು ಕ್ರಿಕೆಟ್ ಪ್ರೇಮಿಯೂ ಆಗಿರುವ ವಕೀಲರೊಬ್ಬರು ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಟೂರ್ನಿಯನ್ನು ಭಾರತದಲ್ಲೇ ಆಯೋಜಿಸಲು ಬಿಸಿಸಿಐಗೆ ಸೂಚಿಸಬೇಕೆಂದು ಅವರು ನ್ಯಾಯಾಲಯವನ್ನು ಕೇಳಿಕೊಂಡಿದ್ದಾರೆ.
ಪುಣೆ ಮೂಲದ ವಕೀಲ ಅಭಿಷೇಕ್ ಲಗೂ ಎಂಬವರು ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದು, ಐಪಿಎಲ್ ಟೂರ್ನಿ ಭಾರತದಿಂದ ಹೊರಗೆ ನಡೆದರೆ ದೇಶಕ್ಕೆ ಆರ್ಥಿಕವಾಗಿ ಭಾರಿ ನಷ್ಟ ಉಂಟಾಗುತ್ತದೆ. ಭಾರತ ಸರ್ಕಾರಕ್ಕೂ ಭಾರಿ ಆದಾಯ ತಪ್ಪಿಹೋಗಲಿದೆ. ಅದೇ ದೇಶದಲ್ಲಿ ಐಪಿಎಲ್ ಆಯೋಜಿಸಿದರೆ ದೊಡ್ಡ ಆರ್ಥಿಕ ಶಕ್ತಿ ಸಿಗಲಿದೆ ಎಂದು ತಿಳಿಸಿದ್ದಾರೆ. ಕೇಂದ್ರ ಸರ್ಕಾರ ಈಗಾಗಲೆ ದೇಶದಲ್ಲಿ ಅನ್ಲಾಕ್ ಜಾರಿಗೊಳಿಸಿದೆ. ಹೀಗಾಗಿ ದೇಶದಲ್ಲಿ ಐಪಿಎಲ್ ಟೂರ್ನಿ ಆಯೋಜಿಸಲು ಯಾವುದೇ ತೊಂದರೆ ಇಲ್ಲ. ಸುರಕ್ಷೆ, ಭದ್ರತೆ ಮತ್ತು ಮುನ್ನೆಚ್ಚರಿಕೆಯ ಕ್ರಮಗಳನ್ನು ತೆಗೆದುಕೊಂಡು ಟೂರ್ನಿ ನಡೆಸಬಹುದು ಎಂದು ಅವರು ವಿವರಿಸಿದ್ದಾರೆ.
ಐಪಿಎಲ್ ಟೂರ್ನಿ ಅತ್ಯಂತ ಜನಪ್ರಿಯವಾದ ಟಿ20 ಕ್ರಿಕೆಟ್ ಲೀಗ್ ಆಗಿದ್ದು, 2019ರ ಅನ್ವಯ 475 ಶತಕೋಟಿ ರೂಪಾಯಿ ಬ್ರಾಂಡ್ ಮೌಲ್ಯ ಹೊಂದಿದೆ. ಬಿಸಿಸಿಐಗೂ ಇದು ಭಾರಿ ಆದಾಯ ತಂದುಕೊಡುತ್ತದೆ ಎಂದು ಅಭಿಷೇಕ್ ನ್ಯಾಯಾಲಯಕ್ಕೆ ವಿವರಿಸಿದ್ದಾರೆ.
ಇದನ್ನೂ ಓದಿ: ಐಪಿಎಲ್ ಪ್ರಾಯೋಜಕತ್ವಕ್ಕೆ ಪತಂಜಲಿ ವಿಧಿಸಿದ ಷರತ್ತು ಏನು ಗೊತ್ತೇ?
ಈ ಅರ್ಜಿಯು ಮಂಗಳವಾರ ಮುಖ್ಯ ನ್ಯಾಯಮೂರ್ತಿ ದೀಪಾಂಕರ್ ದತ್ತ ಮತ್ತು ನ್ಯಾಯಮೂರ್ತಿ ರೇವತಿ ಮೋಹಿತೆ ಅವರನ್ನೊಳಗೊಂಡ ವಿಭಾಗೀಯ ಪೀಠದ ಎದುರು ವಿಚಾರಣೆಗೆ ಬರುವ ನಿರೀಕ್ಷೆ ಇದೆ. ಮಾರ್ಚ್ನಿಂದ ಮೇವರೆಗೆ ನಡೆಯಬೇಕಾಗಿದ್ದ ಐಪಿಎಲ್ ಟೂರ್ನಿ ಕರೊನಾ ವೈರಸ್ ಹಾವಳಿ ಮತ್ತು ಲಾಕ್ಡೌನ್ನಿಂದಾಗಿ ಮುಂದೂಡಿಕೆಯಾಗಿತ್ತು. ಇದೀಗ ಸೆಪ್ಟೆಂಬರ್ 19ರಿಂದ ನವೆಂಬರ್ 10ರವರೆಗೆ ಯುಎಇಯಲ್ಲಿ ನಿಗದಿಯಾಗಿದೆ.