ಕಳಸ: ತಾಲೂಕಿನಾದ್ಯಂತ ಸೋಮವಾರ ಸಂಜೆಯಿಂದ ಗಾಳಿಯೊಂದಿಗೆ ಬಿರುಸಿನ ಮಳೆಯಾಗುತ್ತಿದೆ.
ಮಂಗಳವಾರ ಬೆಳಗ್ಗೆ ಪಟ್ಟಣದ ವನಜಾ ಅವರ ಮನೆ ಹಿಂಭಾಗ ಮರ ಬಿದ್ದು ಮನೆಗೆ ಹಾನಿಯಾಗಿದೆ. ಹೆಮ್ಮಕ್ಕಿ ಗ್ರಾಮದ ಮಣಿ ಅವರ ಮನೆ ಮೇಲೆ ಮರ ಬಿದ್ದು ಹಾನಿಯಾಗಿದೆ.
ಕಳಸ-ಕುದುರೆಮುಖ ರಸ್ತೆಯ ಬಿಳುಗೋಡು ಎಂಬಲ್ಲಿ ಗುಡ್ಡ ಕುಸಿದಿದೆ. ಅಡಕೆ, ಕಾಫಿ, ಗಿಡಗಳು ಮಣ್ಣು ಪಾಲಾಗಿದೆ. ಬಲಿಗೆಗೆ ಹೋಗುವ ರಸ್ತೆಯಲ್ಲಿ ಮರಗಳು ಬಿದ್ದು ಪ್ರಯಾಣಿಕರಿಗೆ ತೊಂದರೆಯಾಗಿದೆ. ಚನ್ನಡ್ಲು ಪ್ರದೇಶದಲ್ಲಿ ಗುಡ್ಡಗಳು ಜರಿದು ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಯಾಗಿದೆ. ತಾಲೂಕಿನ ಬಹುತೇಕ ಕಡೆ ರಸ್ತೆ ಅಂಚಿನ ಧರೆಗಳು ಸಣ್ಣ ಪ್ರಮಾಣದಲ್ಲಿ ಜರಿಯುತ್ತಿವೆ.
ತಾಲೂಕಿನ ಭದ್ರಾ ನದಿ ಮತ್ತು ಸೋಮವತಿ ನದಿಗಳು ತುಂಬಿ ಹರಿದು ನದಿ ಪಾತ್ರದ ಹೆಚ್ಚಿನ ಕೃಷಿ ಭೂಮಿಗಳು ಜಲಾವೃತವಾಗಿವೆ. ಭದ್ರಾ ನದಿ ತುಂಬಿ ಹರಿಯುತ್ತಿದ್ದು ಹೆಬ್ಬಾಳೆ ಸೇತುವೆ ಮುಳುಗುವ ಭೀತಿ ಉಂಟಾಗಿದೆ.