ಮಂಗಳೂರು/ಉಡುಪಿ : ದಕ್ಷಿಣ ಕನ್ನಡ ಜಿಲ್ಲೆಯ ಹಲವೆಡೆ ಶನಿವಾರ ಸಾಧಾರಣದಿಂದ ಭಾರಿ ಪ್ರಮಾಣದಲ್ಲಿ ಮಳೆ ಸುರಿದಿದೆ.
ಮಂಗಳೂರು ಸೇರಿದಂತೆ ಕರಾವಳಿಯಾದ್ಯಂತ ಉರಿಸೆಕೆಯೂ ಮುಂದುವರಿದಿದೆ.
ಶನಿವಾರ ಬೆಳಗ್ಗೆಯೇ ಮೋಡ ಕವಿದಿತ್ತು. ಮಧ್ಯಾಹ್ನ ಬಳಿಕ ಬೆಳ್ತಂಗಡಿ ತಾಲೂಕಿನ ನಾರಾವಿ, ದಿಡುಪೆ, ಸುಳ್ಯದ ಕೆಲವೆಡೆ ಉತ್ತಮ ಮಳೆ ಸುರಿದಿದ್ದರೆ ಕಡಬದಲ್ಲಿ ಸಾಯಂಕಾಲ ಗುಡುಗು ಸಹಿತ ಮಳೆ ಸುರಿದಿದೆ. ಕುಕ್ಕೆ ಸುಬ್ರಹ್ಮಣ್ಯದಲ್ಲಿ ಹನಿ ಮಳೆಯಿತ್ತು.
ಮಂಗಳೂರಿನಲ್ಲಿ ತೀವ್ರ ಸೆಕೆಯ ವಾತಾವರಣವಿದ್ದು, ಶನಿವಾರ ಗರಿಷ್ಠ ತಾಪಮಾನ 36 ಡಿಗ್ರಿ ಹಾಗೂ ಕನಿಷ್ಠ 26.3 ಡಿಗ್ರಿ ಸೆಲ್ಸಿಯಸ್ ಆಗಿತ್ತು. ಇವು ಕ್ರಮವಾಗಿ ವಾಡಿಕೆಗಿಂತ 3 ಡಿಗ್ರಿ ಹಾಗೂ 1 ಡಿಗ್ರಿ ಏರಿಕೆ ಕಂಡಿವೆ.
ವೇಣೂರು ಪರಿಸರದಲ್ಲಿ ಗುಡುಗು ಮಳೆ: ಬೆಳ್ತಂಗಡಿ ತಾಲೂಕಿನ ವೇಣೂರು ಪರಿಸರದಲ್ಲಿ ಸಂಜೆ ಗುಡುಗು ಸಹಿತ ಅರ್ಧತಾಸು ಮಳೆ ಸುರಿದಿದೆ. ಅಕಾಲಿಕ ಮಳೆಯಿಂದಾಗಿ ಬೈಕ್ ಸವಾರರು ಹಾಗೂ ವಿದ್ಯಾರ್ಥಿಗಳು ಒದ್ದೆಯಾಗಿಕೊಂಡೇ ಸಂಚರಿಸಿದರು. ಬಜಿರೆ ಶಾಲೆಯ ಕಾಂಪೌಂಡ್ನಲ್ಲಿದ್ದ ಅಶೋಕ ಮರದ ಬುಡಕ್ಕೆ ಸಿಡಿಲು ಬಡಿದು ಇಂಟರ್ಲಾಕ್ ಅಳವಡಿಸಿದ ದಂಡೆಗೆ ಹಾನಿಯಾಗಿದೆ. ತಾಲೂಕಿನ ಇತರೆಡೆ ದಿಡುಪೆ, ಗುರಿಪಳ್ಳದಲ್ಲಿಯೂ ಸಾಧಾರಣ ಮಳೆ ದಾಖಲಾಗಿದೆ.
ಉಡುಪಿ ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಮೋಡ ಕವಿದ ವಾತಾವರಣ ಮುಂದುವರಿದಿದ್ದು, ಕಾರ್ಕಳ ಭಾಗದಲ್ಲಿ ಗಾಳಿ ಸಹಿತ ತುಂತುರು ಮಳೆಯಾಗಿದೆ.