ಮಂಗಳೂರು: ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ನಾರಾವಿ, ಹೊಸ್ಮಾರು ಆಸುಪಾಸಿನಲ್ಲಿ ಮಂಗಳವಾರ ಸಾಯಂಕಾಲ, ರಾತ್ರಿ ಉತ್ತಮ ಮಳೆ ಸುರಿದಿದೆ. ಉಳಿದಂತೆ ಜಿಲ್ಲಾದ್ಯಂತ ಬಿಸಿಲಿನ ವಾತಾರಣವಿತ್ತು. ತಾಪಮಾನದ ಪ್ರಮಾಣ ಹೆಚ್ಚಾಗುತ್ತಿರುವುದರಿಂದ ಕೆಲವೆಡೆ ಮಳೆಯಾಗುವ ಸಾಧ್ಯತೆಯಿದೆ. ದಿನದ ಗರಿಷ್ಠ ಉಷ್ಣಾಂಶ 35.2 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ ತಾಪಮಾನ 25 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು ಎಂದು ಹವಾಮಾನ ಇಲಾಖೆ ವರದಿ ಉಲ್ಲೇಖಿಸಿದೆ.
ಬೆಳ್ತಂಗಡಿ ತಾಲೂಕಿನ ನಾರಾವಿ ಗ್ರಾಮದಲ್ಲಿ ಮಂಗಳವಾರ ಸಾಯಂಕಾಲ ನೂಜೋಡಿ ನಿವಾಸಿ ರವಿ ಎಂಬುವರ ಮನೆಗೆ ಸಿಡಿಲು ಬಡಿದು ಅವರ ಪತ್ನಿ ಸುಪ್ರೀತಾ ಗಾಯಗೊಂಡಿದ್ದಾರೆ. ಮನೆಯ ಮೀಟರ್ಬೋರ್ಡಿನ ಹತ್ತಿರ ಅವರು ನಿಂತಿದ್ದ ವೇಳೆ ಸಿಡಿಲು ಬಡಿದಿದ್ದು ಅವರ ಮೈ ಮೇಲೆ ಸುಟ್ಟ ಗಾಯಗಳಾಗಿವೆ. ಮನೆಯಲ್ಲಿ ಅವರ ಮೂವರು ಮಕ್ಕಳು ಇದ್ದು ಮಕ್ಕಳು ಭಯಪಟ್ಟಿದ್ದಾರೆ. ನಾರಾವಿಯ ಪ್ರಾಧಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗಿದೆ. ಸಿಡಿಲಿನ ಹೊಡೆತಕ್ಕೆ ಮನೆಯ ವಯರಿಂಗ್ ಸಂಪೂರ್ಣ ಸುಟ್ಟಿದ್ದು ಗೋಡೆ ಬಿರುಕು ಬಿಟ್ಟಿದೆ.