ಸಿಂಧನೂರು: ತಾಲೂಕಿನಲ್ಲಿ ಸಮೃದ್ಧವಾಗಿ ಬೆಳೆದಿರುವ ಭತ್ತದ ಫಸಲು ಎರಡು ದಿನ ಸುರಿದ ಜಿಟಿಜಿಟಿ ಮಳೆಯಿಂದಾಗಿ ನೆಲಕ್ಕೊರಗಿದ್ದು, ರೈತರು ಸಂಕಷ್ಟಕ್ಕೀಡಾಗಿದ್ದಾರೆ.
ತುಂಗಭದ್ರಾ ಎಡದಂಡೆ ನಾಲೆ ಮೇಲ್ಭಾಗದಲ್ಲಿ ಭತ್ತದ ಬೆಳೆ ಈಗಾಗಲೇ ಕೊಯ್ಲಿಗೆ ಹತ್ತಿರವಾಗಿದೆ. ಟೇಲೆಂಡ್ ಭಾಗದಲ್ಲೂ ತೆನೆ ಕಾಳು ಕಟ್ಟಿದೆ. ಎರಡು ವಾರದಲ್ಲಿ ಭತ್ತದ ಬೆಳೆ ಕೊಯ್ಲಿಗೆ ಬರಲಿದ್ದು, ಇಂಥ ಸಂದರ್ಭದಲ್ಲಿ ಬೀಳುತ್ತಿರುವ ಜಿಟಿಜಿಟಿ ಮಳೆಯಿಂದಾಗಿ ಫಸಲು ನೆಲಕ್ಕೊರಗಿರುವುದರಿಂದ ರೈತರು ತೊಂದರೆ ಎದುರಿಸುವಂತಾಗಿದೆ.
ಜಿಟಿಜಿಟಿ ಮಳೆ ಜತೆಗೆ ಶೀತ ಗಾಳಿಯೂ ಭತ್ತ ನೆಲಕ್ಕೊರಗಲು ಕಾರಣವಾಗಿದೆ. ಹೆಚ್ಚಿನ ಪ್ರಮಾಣದ ನಷ್ಟವಾದಿದ್ದರೂ ಫಸಲು ಮೇಲೆತ್ತಲು ಸಮಸ್ಯೆ ಎದುರಿಸುವಂತಾಗಿದೆ. ತುಂಗಭದ್ರಾ ಜಲಾಶಯದಲ್ಲಿ ನೀರಿನ ಅಭಾವ ಇರುವುದರಿಂದ ರೈತರು ಮೊದಲ ಬೆಳೆಗೆ ಸೀಮಿತವಾಗಬೇಕಿದೆ.
ಇಂತಹ ಸಂದರ್ಭದಲ್ಲಿ ಮಳೆಯಿಂದಾಗಿ ಬೆಳೆ ಕಳೆದುಕೊಳ್ಳುವ ಆತಂಕ ಎದುರಾಗಿದೆ. ತಾಲೂಕಿನಲ್ಲಿ ಸೋನಾಮಸೂರಿ, ಕಾವೇರಿ ಸೋನಾ, ಆರ್ಎನ್ಆರ್, ನೆಲ್ಲೂರು ಸೋನಾ ಸೇರಿ ಇತರ ತಳಿ ಭತ್ತ ಬೆಳೆಯಲಾಗಿದೆ. ತಿಡಿಗೋಳ, ಕುರುಕುಂದ, ಜಾಲಿಹಾಳ, ಗೊರೇಬಾಳ, ಪಗಡದಿನ್ನಿ, ಗುಂಜಳ್ಳಿ, ಕೆ.ಬಸಾಪುರ ಸೇರಿ ಇತರೆಡೆ ಭತ್ತದ ಬೆಳೆ ನಷ್ಟವಾಗಿದೆ.