ಲಕ್ಷ್ಮೇಶ್ವರ: ತಾಲೂಕಿನಾದ್ಯಂತ ಭಾನುವಾರ ಉತ್ತಮ ಮಳೆಯಾಗಿದೆ. ಇದರಿಂದ ರೈತ ಸಮುದಾಯದಲ್ಲಿ ಮಂದಹಾಸ ಮೂಡಿಸಿದೆ.
ಒಂದು ವಾರದ ಹಿಂದೆ ಉತ್ತಮ ಮಳೆಯಾದ ಕಾರಣ ಬಿತ್ತನೆ ಕಾರ್ಯ ಜೋರಾಗಿ ನಡೆದಿತ್ತು. ಮೇ ಕೊನೆಯ ವಾರ ಮತ್ತು ಜೂನ್ ಮೊದಲ ವಾರದಲ್ಲಿ ಬಿತ್ತನೆ ಮಾಡಿರುವ ಹೆಸರು, ಶೇಂಗಾ, ಉಳ್ಳಾಗಡ್ಡಿ, ಹತ್ತಿ, ಗೋವಿನಜೋಳ ಬೆಳೆಗಳಲ್ಲಿ ಎಡೆ ಹೊಡೆಯುವ, ಕಳೆ ತೆಗೆಯುವ, ರಸಗೊಬ್ಬರ ಹಾಕುವ ಕಾರ್ಯ ಕೈಗೊಳ್ಳಲಾಗಿತ್ತು. ಇದಕ್ಕೆ ಪೂರಕವಾಗಿ ಭಾನುವಾರ ಮಳೆ ಸುರಿದಿರುವುದು ಬೆಳೆಗಳಿಗೆ ಸಹಕಾರಿಯಾಗಿದೆ. ಮಳೆಯಿಂದಾಗಿ ಕೃಷಿ ಜಮೀನುಗಳಲ್ಲಿ, ನರೇಗಾ ಯೋಜನೆಯಡಿ ನಿರ್ವಿುಸಿದ ಬದುವುಗಳಲ್ಲಿ ನೀರು ಸಂಗ್ರಹವಾಗಿದೆ. ಮಧ್ಯಾಹ್ನವೇ ಮಳೆ ಆರಂಭವಾಗಿದ್ದರಿಂದ ಕೃಷಿ ಕಾರ್ಯಗಳಿಗೆ ತೆರಳಿದ್ದ ರೈತರು ಮನೆಗೆ ಹಿಂತಿರುಗಿದ್ದು ಕಂಡುಬಂತು.
ಬೆಳೆ ವಿಮೆ ಪಾವತಿ ಅವಧಿ ವಿಸ್ತರಿಸಲು ಆಗ್ರಹ: ಪ್ರಸಕ್ತ ವರ್ಷ ಸಕಾಲಿಕವಾಗಿ ಮಳೆಯಾಗುತ್ತಿದ್ದು, ಕೃಷಿ ಇಲಾಖೆ ರೈತರಿಗೆ ಅಗತ್ಯಕ್ಕೆ ತಕ್ಕಂತೆ ರಸಗೊಬ್ಬರ, ಕ್ರಿಮಿನಾಶಕ ಪೂರೈಸುವತ್ತ ಹೆಚ್ಚು ಗಮನ ಹರಿಸಬೇಕು. ಅಲ್ಲದೆ, ಬೆಳೆಗಳಿಗೆ ಕಾಡುವ ರೋಗ ತಪ್ಪಿಸಲು ಸಕಾಲಕ್ಕೆ ಸೂಕ್ತ ಸಲಹೆ-ಸೂಚನೆ ನೀಡಬೇಕು. ಅದಕ್ಕಾಗಿ ರೈತರ ಜಮೀನುಗಳಿಗೆ ತೆರಳಿ ಬೆಳೆ ಪರಿಶೀಲಿಸುವ ಮತ್ತು ಬೆಳೆ ದೃಢೀಕರಣ ಕಾರ್ಯಕ್ಕೆ ಮಾರ್ಗದರ್ಶನ ಮಾಡಬೇಕು. ಬೆಳೆ ವಿಮೆ ಪಾವತಿಗೆ ಜುಲೈ 30 ಕೊನೆಯ ದಿನವಾಗಿದೆ. ಆದರೆ, ಈಗ ರೈತರು ಕೃಷಿ ಕಾರ್ಯಗಳಲ್ಲಿ ತಲ್ಲೀನರಾಗಿರುವುದರಿಂದ ಬೆಳೆ ವಿಮೆ ಪಾವತಿಗೆ ಹೆಚ್ಚು ಕಾಲಾವಕಾಶ ಕಲ್ಪಿಸಬೇಕು ಎಂದು ತಾಲೂಕಿನ ಬಟ್ಟೂರ ಗ್ರಾಮದ ರೈತ ಮುಖಂಡ ಬಸವರಾಜ ಹೊಳಲಾಪುರ ಮನವಿ ಮಾಡಿದ್ದಾರೆ.