ನವದೆಹಲಿ: ಸೇನಾಪಡೆಯ ದಕ್ಷಿಣ ಕಮಾಂಡ್ನ ಬೆಂಗಳೂರು, ಬೆಳಗಾವಿ ಮತ್ತು ಸಿಕಂದರಾಬಾದ್ನಲ್ಲಿ ತರಬೇತಿ ಪೂರ್ಣಗೊಳಿಸಿ ಉತ್ತರ ಮತ್ತು ಪೂರ್ವ ಕಮಾಂಡ್ಗಳಲ್ಲಿ ಸೇವೆಗೆ ನಿಯೋಜನೆಗೊಂಡಿರುವ ಯೋಧರನ್ನು ಕರೆದೊಯ್ಯಲು ರೈಲ್ವೆ ಇಲಾಖೆ ಯೋಧರ ಸ್ಪೆಷಲ್ ರೈಲುಗಳ ಸಂಚಾರ ಏರ್ಪಡಿಸಲು ಚಿಂತನೆ ನಡೆಸಿದೆ.
ಮೇ 3ರವರೆಗೆ ಲಾಕ್ಡೌನ್ ವಿಸ್ತರಣೆಗೊಂಡಿದ್ದು, ಅಲ್ಲಿಯವರೆಗೂ ರೈಲು ಸಂಚಾರ ಸಂಪೂರ್ಣ ನಿಷೇಧಗೊಂಡಿದೆ. ಈ ಹಿನ್ನೆಲೆಯಲ್ಲಿ ತರಬೇತಿ ಪೂರ್ಣಗೊಳಿಸಿದ್ದರೂ, ನಿಯೋಜಿತ ಸ್ಥಾನಗಳಿಗೆ ತೆರಳಲು ಯೋಧರು ಕೂಡ ಪರದಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ರಕ್ಷಣಾ ಇಲಾಖೆ, ಗೃಹ ಇಲಾಖೆ ಮತ್ತು ರೈಲ್ವೆ ಇಲಾಖೆಗಳು ವಿಶೇಷ ರೈಲುಗಳ ಸಂಚಾರ ಏರ್ಪಡಿಸುವ ಕುರಿತು ಚರ್ಚೆಗಳನ್ನು ಆರಂಭಿಸಿವೆ ಎನ್ನಲಾಗಿದೆ.
ಇದರ ಪ್ರಕಾರ ಬೆಂಗಳೂರು, ಬೆಳಗಾವಿ ಮತ್ತು ಸಿಕಂದರಾಬಾದ್ನ ತರಬೇತಿ ಕೇಂದ್ರಗಳಲ್ಲಿ ತರಬೇತಿ ಪೂರ್ಣಗೊಳಿಸಿರುವ 1,200 ಯೋಧರಿಗಾಗಿ ಗುವಾಹಟಿ ಮತ್ತು ಜಮ್ಮ ತಾವಿ ನಿಲ್ದಾಣಗಳಿಗೆ ಬೆಂಗಳೂರಿನಿಂದ ಎರಡು ವಿಶೇಷ ರೈಲುಗಳ ಸಂಚಾರ ಏರ್ಪಡಿಸುವ ಚಿಂತನೆ ನಡೆದಿದೆ.
ಈ ರೈಲುಗಳು ನಾನ್ ಎಸಿ ಬೋಗಿಗಳನ್ನು ಹೊಂದಿದ್ದು, ಕಡ್ಡಾಯ ಕ್ವಾರಂಟೈನ್ ಅವಧಿ ಪೂರ್ಣಗೊಳಿಸಿರುವ ಅಥವಾ ಆರೋಗ್ಯವಾಗಿರುವುದು ಖಚಿತಪಟ್ಟ ಬಳಿಕ ಯೋಧರನ್ನು ಅವರವರ ನಿಯೋಜಿತ ಕಮಾಂಡ್ಗಳಿಗೆ ಕರೆದೊಯ್ಯಲಾಗುವುದು. ಒಂದೊಂದು ಬೋಗಿಯಲ್ಲೂ 72 ಜನರಿಗೆ ಸ್ಥಳಾವಕಾಶವಿದ್ದರೂ, ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಸಲುವಾಗಿ ಒಂದೊಂದು ಬೋಗಿಯಲ್ಲಿ ಕೇವಲ 40 ಯೋಧರನ್ನು ಕಳುಹಿಸಲಾಗುವುದು ಎಂದು ಹೇಳಲಾಗುತ್ತಿದೆ.
ಸಾಮಾನ್ಯ ರೈಲು ಸೇವೆ ಜಾರಿಯಲ್ಲಿರುವಾಗ ಅತ್ಯಂತ ಸಮೀಪದ ಮಾರ್ಗಗಳಲ್ಲಿ ವಿಶೇಷ ರೈಲುಗಳ ಸಂಚಾರ ಏರ್ಪಡಿಸಲಾಗುತ್ತದೆ. ಆದರೆ, ಯೋಧರ ವಿಶೇಷ ರೈಲುಗಳು ದೂರದ ಮಾರ್ಗದಲ್ಲೇ ಸಂಚರಿಸಲಿವೆ. ಜತೆಗೆ ಮಾರ್ಗ ಮಧ್ಯೆ ಕೆಲವು ನಿಲ್ದಾಣಗಳಲ್ಲಿ ಗಂಟೆಗಟ್ಟಲೆ ನಿಲುಗಡೆ ನೀಡುವ ಸಾಧ್ಯತೆ ಇರುತ್ತದೆ ಎಂದು ಹೇಳಲಾಗುತ್ತಿದೆ.
ಚೀನಾದೊಂದಿಗೆ ಸಂಬಂಧ ಕಡಿದುಕೊಂಡು ಆಸ್ಟ್ರೇಲಿಯಾದ ‘ಸಹೋದರಿ’ ಇದಕ್ಕೆ ಕಾರಣ ಏನು ಗೊತ್ತಾ?