ದೆಹಲಿ: ದೇಶದ ಹಲವು ಮಾರ್ಗಗಳಲ್ಲಿ ಸಂಚರಿಸುತ್ತಿರುವ ವಂದೇ ಭಾರತ್ ಎಕ್ಸ್ಪ್ರೆಸ್ ರೈಲುಗಳ ಟಿಕೆಟ್ ಬೆಲೆಯನ್ನು ಕಡಿಮೆ ಮಾಡಲು ರೈಲ್ವೆ ಇಲಾಖೆ ಚಿಂತನೆ ನಡೆಸಿದೆ.
ಕಡಿಮೆ ಪ್ರಯಾಣಿಕರಿರುವ ವಂದೇ ಭಾರತ್ ರೈಲುಗಳ ಪರಿಶೀಲನೆಯನ್ನು ರೈಲ್ವೆ ಕೈಗೊಳ್ಳುತ್ತಿದ್ದು, ಈ ಸೇವೆಯನ್ನು ಹೆಚ್ಚಿನ ಜನರು ಬಳಸಿಕೊಳ್ಳಬೇಕು. ಹಾಗಾಗಿ ರೈಲುಗಳ ದರವನ್ನು ಕಡಿಮೆ ಮಾಡುವ ಸಾಧ್ಯತೆಯಿದೆ ಎಂದು ಪಿಟಿಐ ವರದಿ ಮಾಡಿದೆ.
ಇದನ್ನೂ ಓದಿ: ಕುಡುಕನಿಗೆ ಸಹಾಯ ಮಾಡಲು ಹೋಗಿ, ಆತನ ಜತೆ ಪ್ರಾಣ ಕಳೆದುಕೊಂಡ ಪೊಲೀಸ್..!
ಜೂನ್ ತಿಂಗಳ ಪ್ರಕಾರ, ಭೋಪಾಲ್-ಜಬಲ್ಪುರ್ ವಂದೇ ಭಾರತ್ ರೈಲಿನಲ್ಲಿ ಶೇಕಡಾ 29ರಷ್ಟು, ಇಂದೋರ್-ಭೋಪಾಲ್ ಮಾರ್ಗದ ರೈಲಿನ ಶೇಕಡಾ 21ರಷ್ಟು ಸೀಟುಗಳು ಮಾತ್ರ ಭರ್ತಿಯಾಗಿವೆ. ಟಿಕೆಟ್ ದರ ಜಾಸ್ತಿಯಿರುವ ಪ್ರಯಾಣಿಕರು ಇದರತ್ತ ಸುಳಿಯುತ್ತಿಲ್ಲ. ಈ ಹಿನ್ನಲೆ ರೈಲ್ವೇ ಪರಿಶೀಲನೆಯ ನಂತರ, ಹೆಚ್ಚಿನ ಜನರು ರೈಲು ಸೇವೆಯನ್ನು ಬಳಸುವುದನ್ನು ಖಚಿತಪಡಿಸಿಕೊಳ್ಳಲು ಈ ವಂದೇ ಭಾರತ್ ಸೇವೆಯ ದರವನ್ನು ಗಮನಾರ್ಹವಾಗಿ ಕಡಿಮೆ ಮಾಡಬಹುದು ಎಂದು ಹೇಳಲಾಗಿದೆ.
ಇಲ್ಲಿಯವರೆಗೆ 46 ವಂದೇ ಭಾರತ್ ಎಕ್ಸ್ಪ್ರೆಸ್ ರೈಲುಗಳು, ದೇಶದ ಎಲ್ಲಾ ರೈಲು-ವಿದ್ಯುದ್ದೀಕೃತ ರಾಜ್ಯಗಳನ್ನು ತಲುಪಿವೆ. ಹೆಚ್ಚಿನ ಪ್ರಯಾಣಿಕರನ್ನು ಹೊಂದಿರುವ ರೈಲುಗಳೆಂದರೆ ಕಾಸರಗೋಡಿನಿಂದ ತಿರುವನಂತಪುರ ರೈಲು(ಶೇ 183), ತಿರುವನಂತಪುರದಿಂದ ಕಾಸರಗೋಡಿಗೆ (ಶೇ 176), ಗಾಂಧಿನಗರ-ಮುಂಬೈ ಸೆಂಟ್ರಲ್ (ಶೇ 134) ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಅತ್ಯಧಿಕ ಪ್ರಯಾಣಿಕರನ್ನು ಹೊಂದಿವೆ. (ಏಜೆನ್ಸೀಸ್)