ಪ್ರಗತಿ ಪರಿಶೀಲನಾ ಸಭೆ
ರಾಯಚೂರು: ವಿವಿಧ ಇಲಾಖೆಗಳಲ್ಲಿ ಬಾಕಿ ಇರುವ ಸಿವಿಲ್ ಕಾಮಗಾರಿಗಳು ಸೇರಿ ಹಲವು ಯೋಜನೆಗಳ ಕಾಮಗಾರಿಗಳನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸಬೇಕೆಂದು ಜಿಪಂ ಸಿಇಒ ಶಶಿಧರ ಕುರೇರ ಅಧಿಕಾರಿಗಳಿಗೆ ಸೂಚಿಸಿದರು.
ಜಿಪಂ ಸಭಾಂಗಣದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಮಂಗಳವಾರ ಹಮ್ಮಿಕೊಂಡಿದ್ದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಳೆದ ವರ್ಷದ ಕಾಮಗಾರಿಗಳೇ ಬಾಕಿ ಉಳಿದಿವೆ. ಶೀಘ್ರ ಅವುಗಳನ್ನು ಪೂರ್ಣಗೊಳಿಸುವಂತೆ ತಿಳಿಸಿದರು.
ಟೆಂಡರ್ ಪ್ರಕ್ರಿಯೆಯನ್ನು ಕೂಡಲೇ ಪೂರ್ಣಗೊಳಿಸಬೇಕು. ಈಗಾಗಲೇ ಎಲ್ಲ ಇಲಾಖೆಯಲ್ಲಿ ಹಲವಾರು ಕಾಮಗಾರಿಗಳು ಬಾಕಿ ಉಳಿದಿದ್ದು, ಸಭಯಲ್ಲಿ ಹೇಳಿಸಿಕೊಳ್ಳುವುದು ಸರಿಯಲ್ಲ. ಕೂಡಲೇ ಸೂಕ್ತ ರೀತಿಯಲ್ಲಿ ಹಾಗೂ ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕೆಂದರು.
ಆರೋಗ್ಯ ಇಲಾಖೆಯಿಂದ ಕಾಯಕಲ್ಪ ಯೋಜನೆಯಡಿ ನಿರ್ಮಾಣವಾಗಬೇಕಿದ್ದ ಕಾಮಗಾರಿಗಳಿಗೆ ಟೆಂಡರ್ ಕರೆದು ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಮುಗಿಸಬೇಕು. 15 ದಿನದೊಳಗೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿ ವರದಿ ನೀಡುವಂತೆ ಗಡುವು ನೀಡಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ ಬಯಲು ರಂಗಮಂದಿರ ನಿರ್ಮಾಣಕ್ಕಾಗಿ ಅನುದಾನ ಮೀಸಲಿದ್ದು, ಬಯಲು ರಂಗಮಂದಿರಕ್ಕಾಗಿ ಮೀಸಲಿರಿಸಿದ್ದ ಸ್ಥಳವನ್ನು ಬದಲಾವಣೆ ಮಾಡಬಾರದು. ಕ್ರಿಯಾಯೋಜನೆಗೂ ಮೊದಲೇ ಸ್ಥಳ ಪರಿಶೀಲನೆಯನ್ನು ಸೂಕ್ತ ರೀತಿಯಲ್ಲಿ ಮಾಡಬೇಕೆಂದು ಸೂಚಿಸಿದರು. ಜಿಪಂ ಉಪಕಾರ್ಯದರ್ಶಿ ಶಶಿಕಾಂತ ಶಿವಪುರೆ, ಯೋಜನಾಧಿಕಾರಿ ಟಿ.ರೋಣಿ, ಮುಖ್ಯ ಲೆಕ್ಕಾಧಿಕಾರಿ ನಾಗರಾಜ್ ಇದ್ದರು.