ಸಿಂಧನೂರು: ಕೃಷಿ ಮತ್ತು ಸಾಂಸ್ಕೃತಿಕ ಸಂಘದಿಂದ ಐದು ಲಕ್ಷ ಜನರ ಮನೆ ಬಾಗಿಲಿಗೆ ಯೋಜನೆ ತಲುಪಿಸಲಾಗಿದೆ. ಯೋಜನೆ ಸದ್ಬಳಕೆಯಾದರೆ ಉದ್ದೇಶವು ಸಾರ್ಥಕವಾಗಲಿದೆಂದು ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಮತ್ತು ಸಾಂಸ್ಕೃತಿಕ ಸಂಘದ ನಿರ್ದೇಶಕಿ ಲೀಲಾ ಮಲ್ಲಿಕಾರ್ಜುನ ಕಾರಟಗಿ ಹೇಳಿದರು.
ನಗರದ ಕರಿಬಸವನಗರ ಬಾಳೆಹೊನ್ನೂರು ರಂಭಾಪುರಿ ಶಾಖಾಮಠದ ಆವರಣದಲ್ಲಿ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಮತ್ತು ಸಾಂಸ್ಕೃತಿಕ ಸಂಘದ ಯೋಜನೆಯಡಿ 22.10 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ಸಾಂಸ್ಕೃತಿಕ ಭವನದ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿದರು. ಬಸವರಾಜ ಪಾಟೀಲ್ ಸೇಡಂ ಸದ್ದು, ಗದ್ದಲವಿಲ್ಲದೆ ಯೋಜನೆ ಅನುಷ್ಠಾನಗೊಳಿಸುವ ಮೂಲಕ ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಮುಂದಾಗಿದ್ದಾರೆ. ಅವರ ಮಾರ್ಗದರ್ಶನದಲ್ಲಿ ಪ್ರತಿ ಗ್ರಾಪಂಗೊಂದರಂತೆ ಐದು ಸಾವಿರ ಪ್ರಗತಿ ಕೇಂದ್ರ ತೆರೆಯಲಾಗಿದೆ. 25 ವಿದ್ಯಾರ್ಥಿಗಳಿಗೆ ಒಂದು ತಾಸು ಪಾಠ ಹೇಳಿಕೊಡಲಾಗುತ್ತದೆ. ಎರಡು ಸಾವಿರ ಕೌಶಲ ಕೇಂದ್ರ ತೆರೆದು ಮಹಿಳೆಯರಿಗೆ ಸ್ವಯಂ ಉದ್ಯೋಗ ಕೈಗೊಳ್ಳಲು ತರಬೇತಿ ನೀಡಿ, ಐದು ಹೊಲಿಗೆ ಯಂತ್ರ ನೀಡಲಾಗುತ್ತಿದೆ ಎಂದರು.
ಸಂಘದ ನಿರ್ದೇಶಕ ಈರೇಶ ಇಲ್ಲೂರು ಮಾತನಾಡಿ, ಬಸವರಾಜ ಪಾಟೀಲ್ ಸೇಡಂ ಕೊತ್ತಲ ಬಸವೇಶ್ವರ ಶಿಕ್ಷಣ ಸಂಸ್ಥೆಯಿಂದ 10 ವರ್ಷದಲ್ಲಿ 100 ಕೋಟಿ ರೂ. 6 ಜಿಲ್ಲೆಗಳಿಗೆ ಹಂಚಿಕೆ ಮಾಡಿ ಶೈಕ್ಷಣಿಕ ಸುಧಾರಣೆ ಸೇರಿ ಸಮಾಜಮುಖಿ ಕೆಲಸ ಕೈಗೊಂಡಿದ್ದಾರೆ. ಈಗ ಸಂಘದಿಂದ ಯೋಜನೆ ಅನುಷ್ಠಾನಗೊಳಿಸಿ, ಜನಸಾಮಾನ್ಯರಿಗೆ ಸೌಲಭ್ಯ ಮುಟ್ಟಿಸಲು ಮುಂದಾಗಿದ್ದಾರೆ ಎಂದರು.
ಶಾಸಕ ವೆಂಕಟರಾವ ನಾಡಗೌಡ ಮಾತನಾಡಿ, ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಮತ್ತು ಸಾಂಸ್ಕೃತಿಕ ಸಂಘ ಅತ್ಯುತ್ತಮ ಕೆಲಸ ಮಾಡುತ್ತಿ ಎಂದರು. ರಂಭಾಪುರಿ ಶಾಖಾಮಠದ ಸೋಮನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿದರು. ತಹಸೀಲ್ದಾರ್ ಅರುಣ ದೇಸಾಯಿ, ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಮಧ್ವರಾಜ ಆಚಾರ್ಯ, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಎಂ.ದೊಡ್ಡಬಸವರಾಜ, ಕಸಾಪ ಮಾಜಿ ಅಧ್ಯಕ್ಷೆ ಸರಸ್ವತಿ ಪಾಟೀಲ್, ನಗರಸಭೆ ಸದಸ್ಯ ಚಂದ್ರಶೇಖರ ಮೈಲಾರ, ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ ಶಿವಕುಮಾರ ಜವಳಿ ಇದ್ದರು.