ರಾಜ್ಯದಲ್ಲಿ ಹುಚ್ಚರ ಸಂತೆ ಆಡಳಿತ; ಶಾಸಕ ರಿಜ್ವಾನ್ ಹರ್ಷದ್ ಟೀಕೆ
ರಾಯಚೂರು : ಕೇಂದ್ರ ಸರ್ಕಾರವು ರಾಜ್ಯದ ಪಾಲಿನ ತೆರಿಗೆ ಹಾಗೂ ವಿವಿಧ ಯೋಜನೆ ಅನುದಾನವನ್ನು ಸಮರ್ಪಕವಾಗಿ ಬಿಡುಗಡೆ ಮಾಡದ ಕಾರಣ ಸಾಲ ಮಾಡಿ ಬಜೆಟ್ ಗಾತ್ರ ಹೆಚ್ಚಳ ಮಾಡಕೂಡದು ಎಂದು ಶಿವಾಜಿನಗರ ಶಾಸಕ ರಿಜ್ವಾನ್ ಹರ್ಷದ್ ಹೇಳಿದರು.
ಖಾಸಗಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಅವರು ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದರು. ಕೇಂದ್ರದಿಂದ ರಾಜ್ಯಕ್ಕೆ 30 ಸಾವಿರ ಕೋಟಿ ರೂ.ಗಳಷ್ಟು ತೆರಿಗೆ ಮತ್ತಿತರ ಯೋಜನೆಗಳ ಅನುದಾನ ಕಡಿತವಾಗಿರುವ ಮಾಹಿತಿ ಇದೆ. ಕಾಯ್ದೆ ಮೀರಿ ಸಾಲ ಮಾಡಿ, ರಾಜ್ಯದ ಜನರ ಮೇಲೆ ಹೊರೆ ಹಾಕಿ, ಬಜೆಟ್ ಗಾತ್ರ ವಿಸ್ತರಿಸಿ ಮಂಡನೆ ಮಾಡುವುದು ಬೇಡ. ಅನುದಾನ ನೀಡದ ಹಾಗೂ ಎನ್ಆರ್ಸಿ, ಎನ್ಪಿಆರ್ ವಿರುದ್ಧವೂ ಅಧಿವೇಶನದಲ್ಲಿ ಧ್ವನಿ ಎತ್ತಲಿದ್ದೇವೆ. ಅರಣ್ಯ ಒತ್ತುವರಿಗಾಗಿ ಸಚಿವ ಆನಂದಸಿಂಗ್ ವಿರುದ್ಧ 15 ವಿವಿಧ ಪ್ರಕರಣಗಳಿವೆ. ಅಂಥವರಿಗೆ ಅರಣ್ಯ ಖಾತೆ ಕೊಡುವುದು ಎಷ್ಟು ಸರಿ. ರಾಜ್ಯದಲ್ಲಿ ಹುಚ್ಚರ ಸಂತೆಯಂತೆ ಆಡಳಿತ ನಡೆಯುತ್ತಿದೆ. ಜನ ಎಲ್ಲರನ್ನೂ ನೋಡುತ್ತಿದ್ದಾರೆ. ಶೀಘ್ರವೆ ಬಿಜೆಪಿ ಸರ್ಕಾರದ ಮುಖವಾಡ ಬಯಲಾಗಲಿದೆ ಎಂದರು.
ವಿಧಾನ ಪರಿಷತ್ ಚುನಾವಣೆ ಅನಿಲ್ಕುಮಾರರನ್ನು ಬೆಂಬಲಿಸಿಲ್ಲ ಎನ್ನುವ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿದ ಅವರು, ಅಭ್ಯರ್ಥಿಗೆ ಬೆಂಬಲ ನೀಡುವುದು ಬಿಡುವುದು ಪಕ್ಷದ ನಿಲುವು. ನಮ್ಮಲ್ಲಿ ಅಷ್ಟು ಸಂಖ್ಯೆ ಇಲ್ಲ. ನಾವು ಬಿಜೆಪಿಯವರ ತರ ಆಪರೇಷನ್ ಮಾಡಲ್ಲ. ಕೋಟ್ಯಂತರ ರೂ.ಹಾಕಿ, ಶಾಸಕರನ್ನು ಖರೀದಿ ಮಾಡಲು ಆಗುತ್ತಾ? ನೂರಾರು ಕೋಟಿ ಹಣ ಕೊಟ್ಟು ಶಾಸಕರನ್ನ ಖರೀದಿ ಮಾಡಿ, ಯಡಿಯೂರಪ್ಪನವರು ಯಾವ ನೈತಿಕತೆಯಿಂದ ಸರ್ಕಾರ ನಡೆಸುತ್ತಿದ್ದಾರೆ ? ಪರಿಸ್ಥಿತಿಯನ್ನು ಕೆಡಿಸಲು ಕಾಂಗ್ರೆಸ್ ಸಿದ್ಧವಿಲ್ಲ. ಗೆಲ್ಲಲು ಅವಕಾಶ ಇದ್ದರೆ ನೋಡುತ್ತೇವೆ ಎಂದರು.